ಅಭಿಮಾನಿಯಾದರೇನಂತೆ, ಜಯಾ ವಿರುದ್ದ ಕಣಕ್ಕಿಳಿದ ಮಂಗಳಮುಖಿ
ರಂಗೇರುತ್ತಿರುವ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಸದ್ಯ, ಯಾವ ಪಕ್ಷ ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಲಿದೆ, ಪಕ್ಷದ ಅಭ್ಯರ್ಥಿಗಳು ಯಾರು, ಹೊಂದಾಣಿಕೆ ಯಾವ ಪಕ್ಷದ ಜೊತೆಗೆ ಎನ್ನುವುದೇ ಬಹುದೊಡ್ಡ ಚರ್ಚೆಯ ವಿಷಯ.
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಚೆನ್ನೈ ಮಹಾನಗರದ ಆರ್ ಕೆ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅಂತಿಮವಾಗುತ್ತಿದ್ದಂತೆಯೇ, ಅವರ ವಿರುದ್ದ ಮಂಗಳಮುಖಿಯೊಬ್ಬರು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. (ತ.ನಾ ಚುನಾವಣೆ: 41 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ)
33ವರ್ಷದ ದೇವಿ ಎನ್ನುವ ಮಂಗಳಮುಖಿ ತಮಿಳು ನಟ ಮತ್ತು ನಿರ್ದೇಶಕ ಸೀಮನ್ ಮುಂದಾಳುತ್ವದ ಎನ್ಟಿಕೆ (ನಾಮ್ ತಮಿಳರ್ ಕಚ್ಚಿ) ಎನ್ನುವ ಪಕ್ಷದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.[ಜಯಾ ಪಕ್ಷದಿಂದ ಯಾರು ಯಾರಿಗೆ ಟಿಕೆಟ್ ಸಿಕ್ತು?]
ಗಮನಿಸಬೇಕಾದ ಅಂಶವೇನಂದರೆ, ಸಿಎಂ ವಿರುದ್ದ ಸ್ಪರ್ಧಿಸುತ್ತಿರುವ ದೇವಿ ಅಸಲಿಗೆ ಜಯಾಲಲಿತಾ ಅವರ ಅಭಿಮಾನಿಯಂತೆ. ಆದರೂ, ಮುಖ್ಯಮಂತ್ರಿಗಳ ವಿರುದ್ದ ಸ್ಪರ್ಧಿಸಲು ಆಕೆಗಿರುವ ಕಾರಣವೆಂದರೆ ಒಬ್ಬ ಶಾಸಕಿಯಾಗಿ ಜಯಾ ವಿಫಲವಾಗಿದ್ದು.
ಸಾಮಾಜಿಕ ಕಾರ್ಯಕರ್ತೆಯಾಗಿರುವ ದೇವಿ, ರಾಜಕೀಯ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ, ಆದರೆ ಚುನಾವಣೆಯಲ್ಲಿ ಮಾತ್ರ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ, ಒಂದು ವೇಳೆ ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ದಿಗೆ ತನ್ನದೇ ಆದ ಯೋಜನೆಯನ್ನು ಹಾಕಿಕೊಂಡಿದ್ದಾರೆ ಮಂಗಳಮುಖಿ ದೇವಿ. (ತಮಿಳುನಾಡಿನಲ್ಲಿ ಮತ್ತೆ ಅಮ್ಮ ದರ್ಬಾರ್)
235 ಸ್ಥಾನ ಹೊಂದಿರುವ ತಮಿಳುನಾಡು ವಿಧಾನಸಭೆಗೆ ಮೇ 16ರಂದು ಚುನಾವಣೆ ನಡೆಯಲಿದೆ. ದೇವಿ, ಸೆಲ್ವಿ ಜಯಲಲಿತಾ ಅಭಿಮಾನಿಯಂತೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...
ಸಾಮಾಜಿಕ ಕಾರ್ಯಕರ್ತೆಯಾಗಿರುವ ದೇವಿ
ಸೇಲಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಹನ್ನೆರಡನೇ ಕ್ಲಾಸ್ ಓದಿರುವ ದೇವಿ ಸುಮಾರು ಇನ್ನೂರಕ್ಕೂ ಹೆಚ್ಚು ಬಡ ವಿದ್ಯಾಥಿಗಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ. ಇದರ ಜೊತೆಗೆ ವೃದ್ದಾಶ್ರಮದ ಅರವತ್ತು ಜನರ ಜಬಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ದೇವಿಯ ಮನದಾಳದ ಮಾತು
ದೇವರು ಒಬ್ಬೊಬ್ಬರನ್ನು ಬೇರೆ ಬೇರೆ ರೀತಿಯಲ್ಲಿ ಸೃಷ್ಟಿಸಿರುತ್ತಾನೆ. ಈ ಭೂಮಿಯಲ್ಲಿ ಇರುವಷ್ಟು ದಿನ ಸಾಮಾಜಿಕ ಕೆಲಸವನ್ನು ಮಾಡಲಿ ಎಂದು ದೇವರು ಕಳುಹಿಸಿರುತ್ತಾನೆ. ನಮಗೆ ಮಕ್ಕಳಾಗಲು ಸಾಧ್ಯವಿಲ್ಲ, ಆದರೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯ ಎನ್ನುವುದು ದೇವಿಯ ಮನದಾಳದ ಮಾತು.
ಎಲ್ಲೋ ಒಂದು ಕಡೆ ವಿಶ್ವಾಸ
ಜಯಲಲಿತಾ ವಿರುದ್ದ ಗೆದ್ದರೂ ಗೆಲ್ಲಬಹುದು ಎನ್ನುವ ಸಣ್ಣ ವಿಶ್ವಾಸದಲ್ಲಿದ್ದೇನೆ. ಗೆದ್ದರೆ, ಆರ್ ಕೆ ನಗರವನ್ನು ಮೊದಲು ಕಸಮುಕ್ತ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ, ಜೊತೆಗೆ ಸರಕಾರೀ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಒದಗಿಸುವುದು ನನ್ನ ಆದ್ಯತೆ - ದೇವಿ.
ಜಯಲಲಿತಾ ಅಭಿಮಾನಿ
ಸಿಎಂ ವಿರುದ್ದ ಸ್ಪರ್ಧಿಸುತ್ತಿರುವ ದೇವಿ, ಅಸಲಿಗೆ ಜಯಾ ಅವರ ಅಭಿಮಾನಿಯಂತೆ. ಜಯಾ ಅವರ ಆತ್ಮವಿಶ್ವಾಸ, ತನ್ನ ಮೇಲಿರುವ ಎಲ್ಲಾ ಕೇಸಿನಿಂದ ಹೊರಬರುವ ಆಕೆಯ ತಂತ್ರಗಾರಿಕೆ, ಜಾಣ್ಮೆಗೆ ದೇವಿ ಮುಖ್ಯಮಂತ್ರಿಗಳಿಗೆ ಫಿದಾ ಆಗಿದ್ದಾರಂತೆ, ಆದರೆ ಶಾಸಕಿಯಾಗಿ ಜಯಾ ಫೈಲ್ ಎನ್ನುವುದು ಇವರ ನೇರ ನುಡಿ.
ಆರ್ ಕೆ ನಗರ ಕ್ಷೇತ್ರ
ಎಐಡಿಎಂಕೆಯ ಭದ್ರ ಕೋಟೆಯಾಗಿರುವ ಚೆನ್ನೈ ಮಹಾನಗರ ವ್ಯಾಪ್ತಿಯ ಆರ್ ಕೆ ನಗರ ಕ್ಷೇತ್ರದಲ್ಲಿ ಕಳೆದ (2011) ಚುನಾವಣೆಯಲ್ಲಿ ಜಯಲಲಿತಾ ಒಂದೂವರೆ ಲಕ್ಷ ಮತಗಳ ಭಾರೀ ಅಂತರದಿಂದ ಜಯಗಳಿಸಿದ್ದರು.