ಮತ್ತೆ ಸುದ್ದಿಯಲ್ಲಿರುವ ಸಿಮಿ ಸಂಘಟನೆ ಏನು, ಎತ್ತ?
ಬೆಂಗಳೂರು, ನವೆಂಬರ್ 1: ದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಅಫ್ ಇಂಡಿಯಾ (ಸಿಮಿ) ಮತ್ತೆ ಸುದ್ದಿಯಲ್ಲಿದೆ. ಈ ಸಲ ಭೋಪಾಲ್ ನ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ ಕೆಲವೇ ಗಂಟೆಗಳಲ್ಲಿ ಸಿಮಿಯ ಎಂಟು ಕಾರ್ಯಕರ್ತರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಲಾಗಿದೆ. ಸಿಮಿ ಸಂಘಟನೆ ಭಾರತದಲ್ಲಿ ಹಲವು 'ವೇಷ' ಧರಿಸಿದೆ.
ಈ ಸಂಘಟನೆ ಭಾರತಕ್ಕೆ ಹೇಗೆ ಅಪಾಯಕಾರಿ? 2001ರಲ್ಲಿ ನಿಷೇಧಿಸಲಾದ ಈ ಸಂಘಟನೆಯ ಬಗ್ಗೆ ಒಂದಿಷ್ಟು ವಿವರಗಳನ್ನು ಇಲ್ಲಿ ನೀಡಲಾಗಿದೆ.[ಜೈಲಿನಿಂದ ಪರಾರಿಯಾಗಿದ್ದ ಸಿಮಿ ಉಗ್ರರು ಎನ್ ಕೌಂಟರಿಗೆ ಬಲಿ]
- ಉತ್ತರ ಪ್ರದೇಶದ ಅಲಿಘಡದಲ್ಲಿ ಪ್ರೊಫೆಸರ್ ಅಹ್ಮದುಲ್ಲಾ ಸಿದ್ದೀಕಿ ಏಪ್ರಿಲ್ 25, 1977ರಲ್ಲಿ ಸಿಮಿ ಸಂಘಟನೆ ಆರಂಭಿಸಿದರು.
-1981ರಲ್ಲಿ ಜಮಾತ್-ಇ-ಇಸ್ಲಾಮಿ ಹಿಂದ್ ನ ಭಾಗವಾಗಿದ್ದ ಈ ಸಂಘಟನೆ ಭಿನ್ನಾಭಿಪ್ರಾಯದ ಕಾರಣಕ್ಕೆ ಕವಲೊಡೆದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಸ್ಥಾಪನೆಯಾಯಿತು.
-ಸಿಮಿ ಸಂಘಟನೆಯ ಹಲವರಿಗೆ ಭಾರತದಲ್ಲಿ ಶರಿಯಾ ಕಾನೂನು ಜಾರಿಯಾಗಬೇಕು. ಮತ್ತು ಈ ಪ್ರಕ್ರಿಯೆಯಲ್ಲಿ ತೊಡಗಲು ಯುವಜನರನ್ನು ಸೆಳೆಯಲು ಆರಂಭಿಸಿತು.
-ಉತ್ತರ ಪ್ರದೇಶ, ಕೇರಳ, ಮಧ್ಯಪ್ರದೇಶ, ಅಸ್ಸಾಂ, ಆಂಧ್ರಪ್ರದೇಶ, ಗುಜರಾತ್, ದೆಹಲಿಯಲ್ಲಿ ಪ್ರಬಲವಾಗಿದ್ದ ಈ ಸಂಘಟನೆಗೆ 2001ರಲ್ಲಿ ಭಯೋತ್ಪಾದನಾ ನಿಗ್ರಹ ಕಾಯ್ದೆ ಅಡಿಯಲ್ಲಿ ನಿಷೇಧ ಹೇರಲಾಯಿತು.
-ಶಾಹಿದ್ ಬದರ್ ಫಲಾಹಿ ಹಾಗೂ ಸಫ್ದರ್ ನಾಗೋರಿ ನೇತೃತ್ವದಲ್ಲಿ ಸಿಮಿ ಎರಡು ಗುಂಪಾಯಿತು. ಆ ಪೈಕಿ ನಾಗೋರಿ ಗುಂಪು ಮೂಲಭೂತವಾದವನ್ನು ಪ್ರತಿಪಾದಿಸುತ್ತದೆ.
-ಸಿಮಿ ಪ್ರಮುಖ ದಾಳಿಗಳನ್ನು ನಡೆಸಿದೆ. 2006ರ ಮುಂಬೈ ರೈಲು ಸ್ಫೋಟದಲ್ಲಿ 187 ಮಂದಿ ಮೃತಪಟ್ಟಿದ್ದರು. ಇನ್ನು 2008ರಲ್ಲಿ ಗುಜರಾತ್ ನಲ್ಲಿ ನಡೆದ ಸ್ಫೋಟದಲ್ಲಿ 45 ಮಂದಿ ಸಾವನ್ನಪ್ಪಿದ್ದರು.
-ನಿಷೇಧ ಇದ್ದ ಕಾರಣಕ್ಕೆ ಸಿಮಿಗೆ ಕೆಲಸ ಮಾಡುವುದು ಕಷ್ಟವಾಗಿದ್ದರಿಂದ ಅದರ ಕಾರ್ಯಕರ್ತರು ಗುಂಪಿನಿಂದ ಹೊರಬಂದು ಇಂಡಿಯನ್ ಮುಜಾಹಿದೀನ್ ಸೇರಲು ಮುಂದಾದರು.
-ಇಂಡಿಯನ್ ಮುಜಾಹಿದೀನ್ ಸದಸ್ಯರು ಐಎಸ್ ಐಎಸ್ ಗೆ ಬೆಂಬಲ ಘೋಷಿಸಿದ್ದರಿಂದ ಸಿಮಿ ಸಂಘಟನೆ ಒಲವು ಅಲ್ ಕೈದಾದೆಡೆಗೆ ಸಾಗಿತು.
-2013ರಲ್ಲಿ ಖಾಂಡ್ವ, ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡ ಏಳು ಮಂದಿ ಸಿಮಿ ಸದಸ್ಯರು ಮತ್ತೆ ಚಟುವಟಿಕೆ ಆರಂಭಿಸಲು ಪ್ರಯತ್ನಿಸಿದರು.
-2014ರಲ್ಲಿ ಚೆನ್ನೈ, ಉತ್ತರ ಪ್ರದೇಶ, ಪುಣೆಯಲ್ಲಿ ನಡೆದ ದಾಳಿಯಲ್ಲಿ ಸಿಮಿ ಕೈವಾಡವಿತ್ತು. ಅದರ ಸದಸ್ಯರು ಸಂಘಟನೆಗೆ ಹಣ ಹೊಂದಿಸಲು ಹಲವು ಬ್ಯಾಂಕ್ ಗಳ ದರೋಡೆ ಮಾಡಿದ್ದರು.