ಡೈವೋರ್ಸ್ ಕೊಡಿ ಇಲ್ಲ, ಜೀವನಾಂಶ ವಾಪಾಸ್ ಮಾಡಿ: ಅಹ್ಮದಾಬಾದ್ ಕೋರ್ಟ್
ಅಹ್ಮದಾಬಾದ್(ಗುಜರಾತ್), ಜೂನ್ 6: ಪತಿಗೆ ವಿಚ್ಛೇದನ ನೀಡಲು ಒಪ್ಪಿಕೊಂಡು, 15 ಲಕ್ಷ ರೂ. ಜೀವನಾಂಶ ಪಡೆದು ಇದೀಗ ವಿಚ್ಛೆದನ ನೀಡುವುದಕ್ಕೆ ನಿರಾಕರಿಸುತ್ತಿರುವ ಮಹಿಳೆಗೆ ಮುಖಭಂಗವಾಗುವಂಥ ಆದೇಶವನ್ನು ಗುಜರಾತಿನ ಅಹ್ಮದಾಬಾದ್ ನ್ಯಾಯಾಲಯವೊಂದು ನೀಡಿದೆ.
ವಿಚ್ಛೇದನ ನೀಡಲು ಒಪ್ಪಿಕೊಂಡ ಮೇಲೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿ, ಇಲ್ಲವೇ ಪತಿಯಿಮದ ಪಡೆದ ಜೀವನಾಂಶವನ್ನು ಅವರಿಗೇ ಹಿಂದಿರುಗಿಸಿ ಎಂದು ಕೋರ್ಟ್ ಹೇಳಿದೆ. ಇದೀಗ ವಿಚ್ಛೇದನ ನೀಡಲು ಇಷ್ಟವಿಲ್ಲವೆಂದರೆ ಜೂನ್ 10 ರ ಒಳಗಾಗಿ ಪತಿಯಿಂದ ಪಡೆದ ಪೂರ್ತಿ 15 ಲಕ್ಷ ರೂಪಾಯಿಯನ್ನೂ ಹಿಂದಿರುಗಿಸಿ ಎಂದು ಕಟ್ಟುನಿಟ್ಟಾಗಿ ಆದೇಶ ನೀಡಿದೆ.[RV155677820-ಇದು ನಾಸ್ತಿಕನೊಬ್ಬನ ನಾಮಧೇಯ!]
2015 ರಲ್ಲಿ ಮದುವೆಯಾಗಿದ್ದ ದಂಪತಿ, ದುಬೈಗೆ ತೆರಳಬೇಕಿತ್ತು. ವೀಸಾ ಸಮಸ್ಯೆಯಾಗಿದ್ದರಿಂದ ಪತಿ ಮಾತ್ರ ದುಬೈಗೆ ತೆರಳಿದ್ದು, ಪತ್ನಿಯನ್ನು ನಂತರ ಕರೆಸಿಕೊಳ್ಳುವುದಾಗಿ ನಿರ್ಧರಿಸಿದ್ದರು. ಪತಿ ದುಬೈಗೆ ತೆರಳುತ್ತಿದ್ದಂತೆಯೇ ತನ್ನ ತವರು ಮನೆಗೆ ತೆರಳಿದ ಪತ್ನಿ, ಪತಿಯೊಂದಿಗೆ ಬದುಕುವುದಕ್ಕೆ ಸಾಧ್ಯವಿಲ್ಲ, ತನಗೆ ವಿಚ್ಛೇದನ ಬೇಕೆಂದು ಕೇಳಿದ್ದಾಳೆ. 15 ಲಕ್ಷ ರೂ. ಜೀವನಾಂಶವನ್ನೂ ಕೇಳಿದ್ದಾಳೆ.
ಜೀವನಾಂಶ ನೀಡಿದ ಮೇಲೆಯೇ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವುದಾಗಿ ಹೇಳಿದ್ದ ಈಕೆ, ಇದೀಗ ಹಣವನ್ನೆಲ್ಲ ಪಡೆದು, ಪತ್ರಕ್ಕೆ ಸಹಿ ಮಾಡುವುದಿಲ್ಲ ಎಂದಿದ್ದಾಳೆ. ಇದರಿಂದ ನೊಂದ ಪತಿಯ ಕುಟುಂಬ ಕಾನೂನಿನ ಮೊರೆಹೋಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಅಹ್ಮದಾಬಾದಿನ ನ್ಯಾಯಾಲಯವೊಂದು ಈ ರೀತಿ ತೀರ್ಪು ನೀಡಿದೆ.