ಹಣದ ಸಮಸ್ಯೆ ಸಹಜಸ್ಥಿತಿಗೆ ಬರುವವರೆಗೆ ಸ್ಟೇಟ್ ಬ್ಯಾಂಕ್ ಬಂದ್ ಮಾಡಿ
ಹಣ ಸಪ್ಲೈ ಸರಿಯಾಗಿ ಆಗುವವರೆಗೆ ಸ್ಟೇಟ್ ಬ್ಯಾಂಕ್ ಶಾಖೆಗಳನ್ನು ಬಂದ್ ಮಾಡುವುದೇ ಸೂಕ್ತ ಎಂದು ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (AIBOC) ಪ್ರಮುಖರು ಹೇಳಿದ್ದಾರೆ.
ನವದೆಹಲಿ, ಜ 12: ಬ್ಯಾಂಕು ಮತ್ತು ಎಟಿಎಂಗಳಿಗೆ ಸರಿಯಾಗಿ ಹಣ ಪೂರೈಕೆಯಾಗುವವರೆಗೆ ದೇಶದ ಎಲ್ಲಾ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳನ್ನು ಬಂದ್ ಮಾಡಿ ಎಂದು ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರು ರಿಸರ್ವ್ ಬ್ಯಾಂಕ್ ಅನ್ನು ಒತ್ತಾಯಿಸಿದ್ದಾರೆ.
ಹಣ ಸಪ್ಲೈ ಸರಿಯಾಗಿ ಆಗುವವರೆಗೆ ಬ್ಯಾಂಕುಗಳನ್ನು ಬಂದ್ ಮಾಡುವುದೇ ಸೂಕ್ತ ಎಂದು ಸ್ಟೇಟ್ ಬ್ಯಾಂಕ್ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (AIBOC) ಹಿರಿಯ ಉಪಾಧ್ಯಕ್ಷ ಥಾಮಸ್ ರಾಜೇಂದ್ರ ದೇವ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. (ಬ್ಯಾಂಕಿಗೆ ಹಣ ಹಾಕಬಹುದು, ಆದ್ರೆ ವಾಪಸ್ ತಗಳಂಗಿಲ್ಲ)
ತನ್ನದಲ್ಲದ ತಪ್ಪಿಗೆ ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರಿಂದ ಆಕ್ರೋಶ ಎದುರಿಸಬೇಕಾಗಿದೆ, ದೇಶದ ಬಹುತೇಕ ಬ್ಯಾಂಕುಗಳಲ್ಲಿ ಇದೇ ಸಮಸ್ಯೆ ಎಂದು ರಾಜೇಂದ್ರ ದೇವ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಢ ಮುಂತಾದ ರಾಜ್ಯಗಳಲ್ಲಿರುವ ಬ್ಯಾಂಕುಗಳಲ್ಲಿ ಹಣ ಪೂರೈಕೆ ಸುಧಾರಿಸಿದೆ ಎಂದು ನಮ್ಮ ಬ್ಯಾಂಕ್ ಸಹದ್ಯೋಗಿಗಳು ಹೇಳಿರುವುದು ಆಶ್ಚರ್ಯವನ್ನುಂಟು ಮಾಡಿದೆ.
ರಿಸರ್ವ್ ಬ್ಯಾಂಕ್ ಆಯಾಯ ರಾಜ್ಯ ಮತ್ತು ಶಾಖೆಗಳಿಗೆ ಇಂಡೆಂಟ್ ಪ್ರಕಾರ ಹಣ ನೀಡದೇ ಇರುವುದೇ ಈ ಸಮಸ್ಯೆ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ ಎಂದು ಥಾಮಸ್ ರಾಜೇಂದ್ರ ದೇವ್ ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಹುತೇಕ ಶಾಖೆಗಳಲ್ಲಿ ಪೂರೈಕೆಯಾಗಿರುವ ಹಣವನ್ನು ಪಡಿತರ ಚೀಟಿಯಂತೆ ಹಂಚಿ ಎಲ್ಲಾ ಖಾತೆದಾರರಿಗೆ ನೀಡಲಾಗುತ್ತಿದೆ.
ಅಪನಗದೀಕರಣದಿಂದ ತಮಿಳುನಾಡಿನಲ್ಲಿ ಸಂಭ್ರಮದಿಂದ ಪೊಂಗಲ್ ಆಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಣದ ಸಮಸ್ಯೆ ಸಹಜ ಸ್ಥಿತಿಗೆ ಬರುವವರೆಗೆ ಎಲ್ಲಾ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವುದೇ ಸೂಕ್ತ ಎಂದು ರಾಜೇಂದ್ರ ದೇವ್ , ಬ್ಯಾಂಕಿನ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.