ಬೀದಿಬೀದಿಗಳಲ್ಲಿ ದಂಗೆಯಾದೀತು : ಸುಪ್ರೀಂ ತರಾಟೆ
ನವದೆಹಲಿ, ನವೆಂಬರ್ 18 : ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನೋಟುಗಳ ವಿತರಣೆಯಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಬೀದಿಬೀದಿಗಳಲ್ಲಿ ದಂಗೆ ಎದ್ದೀತು ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಕಟ್ಟೆಚ್ಚರಿಕೆ ನೀಡಿದೆ.
ಜನಸಾಮಾನ್ಯರಿಗೆ ಅವರದೇ ಹಣ ದೊರೆಯದಿದ್ದಾಗ ಸೂಕ್ತ ಕ್ರಮ ಜರುಗಿಸುವುದಾಗಿ ವಾಗ್ದಾನ ನೀಡಿದ್ದಿರಿ. ಈಗ ನೋಡಿದರೆ ಹಣ ವಿನಿಮಯವನ್ನು 4,500 ರು.ನಿಂದ 2,000 ರು.ಗೆ ಇಳಿಸಿದ್ದೀರಿ. ಬ್ಯಾಂಕುಗಳಲ್ಲಿ 100 ರು.ಗಳ ಕೊರತೆಯಿದೆಯೆ ಎಂದು ಶುಕ್ರವಾರ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. [ಹಣ ಬದಲಾವಣೆ, ವಿಥ್ ಡ್ರಾ ಮಿತಿ ಇಳಿಕೆಗೆ ಕಾರಣ ಏನು?]
ನಿಜವಾದ ಸಮಸ್ಯೆಯಾದರೂ ಏನು? ನೋಟುಗಳನ್ನು ಪ್ರಿಂಟ್ ಮಾಡುವಾಗ ತೊಂದರೆಯಿದೆಯಾ? ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರದ ಕಿವಿ ಹಿಂಡಿದೆ. ನೋಟು ವಿನಿಮಿಯ ಮಿತಿಯನ್ನು ಕೇಂದ್ರ ಕಡಿತಗೊಳಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಕೇವಲ ಪ್ರಿಂಟಿಂಗ್ ತೊಂದರೆ ಮಾತ್ರವಲ್ಲ, ದೇಶದಲ್ಲಿರುವ ಲಕ್ಷಾಂತರ ಹಣ ರವಾನಿಸುವಲ್ಲಿ ತೊಂದರೆಯಾಗುತ್ತಿದೆ. ಅಲ್ಲದೆ, ದೇಶದೆಲ್ಲೆಡೆ ಇರುವ ಎಟಿಎಂ ಅನ್ನು ಇಂದಿನ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡು ಮಾಡುವಲ್ಲಿ ವಿಳಂಬವಾಗಿದೆ ಎಂದು ನ್ಯಾಯಾಲಯಕ್ಕೆ ಉತ್ತರ ನೀಡಿದೆ. [10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]
ಅರ್ಜಿದಾರನ ಪರವಾದ ವಾದ ಮಂಡಿಸಿದ ಕಪಿಲ್ ಸಿಬಲ್, ಈಗ ಎದುರಿಸುತ್ತಿರುವ ತೊಂದರೆಗಳನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ಸೋತಿದೆ ಎಂದು ಆರೋಪಿಸಿದರು. ಕಪಿಲ್ ಸಿಬಲ್ ಅವರು ಅನಗತ್ಯವಾಗಿ ಈ ವಿಷಯವನ್ನು ರಾಜಕೀಕರಣಗೊಳಿಸುತ್ತಿದ್ದಾರೆ ಎಂದು ಅಟಾರ್ನಿ ಜನರಲ್ ಪ್ರತ್ಯಾರೋಪ ಮಾಡಿದರು.
ವಿವಿಧ ಹೈಕೋರ್ಟುಗಳಲ್ಲಿ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಹೂಡಲಾಗಿರುವ ಅರ್ಜಿಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೇಂದ್ರ ಸರ್ವೋಚ್ಚ ನ್ಯಾಯಾಲಯಕ್ಕೆ ಆಗ್ರಹಿಸಿದೆ. ಇದಕ್ಕೆ ಉತ್ತರಿಸಿದ ಕೋರ್ಟ್, ಇದರಲ್ಲಿ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದಿದೆ. [ತೆರಿಗೆ ತಪ್ಪಿಸಿದ್ದಲ್ಲಿ ಸರಿಪಡಿಸಿಕೊಳ್ಳಲು ಇಲ್ಲಿದೆ ದಾರಿ]