ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್
ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಶಿವಸೇನಾ ಸಂಸದ
ನವದೆಹಲಿ, ಮಾರ್ಚ್ 23: ಇಲ್ಲಿ ವಿಮಾನ ನಿಲ್ದಾಣದಲ್ಲಿ ಆಸನಕ್ಕಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ , ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ತಮ್ಮ ಚಪ್ಪಲಿಯಿಂದ 25 ಬಾರಿ ಹೊಡೆದಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಘಟನೆ ಗುರುವಾರ (ಮಾರ್ಚ್ 23) ಬೆಳಗ್ಗೆ 10:30ರ ಸುಮಾರಿಗೆ ನಡೆದಿದೆ. ಪುಣೆಯಿಂದ ದೆಹಲಿಗೆ ಬಂದ ವಿಮಾನದಲ್ಲಿದ್ದ ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಅವರು ಏರ್ ಇಂಡಿಯಾ ಸಂಸ್ಥೆಯ ಕೆಲವಾರು ಧೋರಣೆಗೆಗಳಿಗೆ ಬೇಸತ್ತು ಏಕಾಂಗಿ ಪ್ರತಿಭಟನೆಗೆ ಮುಂದಾಗಿದ್ದು ಈ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.
ಘಟನೆಗೆ ಕಾರಣ: ರವೀಂದ್ರ ಅವರ ಆಪ್ತ ಮೂಲಗಳ ಪ್ರಕಾರ, ರವೀಂದ್ರ ಅವರು ಹೆಚ್ಚಾಗಿ ಏರ್ ಇಂಡಿಯಾದಲ್ಲೇ ಪ್ರಯಾಣಿಸುತ್ತಿದ್ದಾರೆ. ಪ್ರತಿ ಬಾರಿ ಅವರು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಪಡೆದಿದ್ದರೂ ಅವರನ್ನು ಏರ್ ಇಂಡಿಯಾವು ಅವರನ್ನು ಬಲವಂತವಾಗಿ ಎಕಾನಮಿ ಕ್ಲಾಸ್ ನಲ್ಲೇ ಪ್ರಯಾಣ ಮಾಡುವಂತೆ ಮಾಡುತ್ತಿದೆ.
ಪದೇ ಪದೇ ಇಂಥ ಇಕ್ಕಟ್ಟಿಗೆ ಸಿಲುಕಿ ಬೇಸರಗೊಂಡಿದ್ದ ರವೀಂದ್ರ, ಗುರುವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನದಲ್ಲೇ ಪುಣೆಯಿಂದ ನವದೆಹಲಿಗೆ ಬಂದಿದ್ದಾರೆ. ಆದರೆ, ವಿಮಾನದಿಂದ ಕೆಳಗಿಳಿಯಲು ಅವರು ನಿರಾಕರಿಸಿದ್ದಾರೆ. ಏರ್ ಇಂಡಿಯಾವು ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ವಿಮಾನದ ಸಿಬ್ಬಂದಿಗಳ ಮುಂದೆ ಅಸಹನೆ ವ್ಯಕ್ತಪಡಿಸಿದ ಅವರು, ಹಿರಿಯ ಅಧಿಕಾರಿಗಳು ತಾವಿದ್ದಲ್ಲಿಗೆ ಬಂದು ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಆದರೆ, ಅವರನ್ನು ಆಸನದಿಂದ ಎಬ್ಬಿಸಲು ಬಂದಿದ್ದ ಏರ್ ಇಂಡಿಯಾ ಸಿಬ್ಬಂದಿ ರವೀಂದ್ರ ಅವರ ಮೇಲೆ ಸ್ವಲ್ಪ ರೇಗಿದ್ದಾರೆ. ಮೊದಲೇ ಕೋಪದಲ್ಲಿದ್ದ ರವೀಂದ್ರ ತಿರುಗಿ ರೇಗಿ, ''ನಾನೊಬ್ಬ ಸಂಸದ. ನನ್ನ ಮುಂದೆ ಗಟ್ಟಿಯಾಗಿ ಮಾತನಾಡಬೇಡ'' ಎಂದಿದ್ದಾರೆ.
ಅದಕ್ಕೆ ಮರು ಉತ್ತರ ನೀಡಿದ ಸಿಬ್ಬಂದಿ, ''ನೀವು ಎಂಪಿ ಆದರೇನು ಮಹಾ? ನಾನು ನೇರವಾಗಿ ಮೋದಿಯವರಿಗೇ ಫೋನ್ ಮಾಡಬಲ್ಲೆ'' ಎಂದಿದ್ದಾರೆ.
ಅಷ್ಟೇ, ರವೀಂದ್ರ ಅವರ ಸಹನೆಯ ಕಟ್ಟೆ ಒಡೆದಿದೆ. ತಕ್ಷಣವೇ ತಮ್ಮ ಕಾಲಿನಿಂದ ಚಪ್ಪಲಿ ತೆಗೆದು, ಮೋದಿಗೇ ಕರೆ ಮಾಡುತ್ತೀಯಾ ಎನ್ನುತ್ತಾ ಆ ಸಿಬ್ಬಂದಿಯನ್ನು ಹಿಡಿದು ಬಾರಿಸಿದ್ದಾರೆ.
ಇದು ದೊಡ್ಡ ರಂಪಾಟವಾಗಿ, ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದವು. ಆಗಲೂ ಸಿಟ್ಟಿನಿಂದ ಬುಸುಗುಡುತ್ತಿದ್ದ ರವೀಂದ್ರ ''ಹೌದು, ನಾನು ಏರ್ ಇಂಡಿಯಾ ಸಿಬ್ಬಂದಿಯನ್ನು ಹೊಡೆದಿದ್ದೇನೆ. ಚಪ್ಪಲಿಯಿಂದ 25 ಬಾರಿ ಬಾರಿಸಿದ್ದೇನೆ'' ಎಂದು ಹೇಳಿದ್ದಾರೆ.
ಬಿಜೆಪಿ, ಎನ್ ಸಿಪಿ ಆಕ್ಷೇಪ: ಘಟನೆಯ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿರುವ ಮಹಾರಾಷ್ಟ್ರದಲ್ಲಿನ ಆಡಳಿತಾರೂಢ ಬಿಜೆಪಿ, 'ರವೀಂದ್ರ ಅವರ ನಡತೆ ಸಂಸದರ ಘನತೆಗೆ ತಕ್ಕುದಾದದ್ದಲ್ಲ' ಎಂದಿದೆ. ಅತ್ತ, ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷವಾದ ಎನ್ ಸಿಪಿ ಕೂಡಾ ರವೀಂದ್ರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದೆ.