ಗಣರಾಜ್ಯೋತ್ಸವದಂದು ಅಸ್ಸಾಂ, ಮಣಿಪುರಗಳಲ್ಲಿ ಬಾಂಬ್ ಸ್ಫೋಟ
ಅಸ್ಸಾಂನಲ್ಲಿ ಗಣರಾಜ್ಯೋತ್ಸವ ಬಹಿಷ್ಕರಿಸುವಂತೆ ನಿಷೇಧಿತ ಸಂಘಟನೆಯಾದ ಉಲ್ಫಾ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜನರನ್ನು ಭೀತಿಗೊಳಿಸಲು ಆ ಸಂಘಟನೆಯು ಈ ಕುಕೃತ್ಯ ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಗುವಾಹಟಿ, ಜನವರಿ 26: ದೇಶದೆಲ್ಲಡೆಯಂತೆ ಗಣರಾಜ್ಯೋತ್ಸವ ಸಡಗರದಲ್ಲಿರುವ ಅಸ್ಸಾಂ ಹಾಗೂ ಮಣಿಪುರ ರಾಜ್ಯಗಳಲ್ಲಿ ಬೆಳ್ಳಂಬೆಳಗ್ಗೆ ಎದೆ ಝಲ್ಲೆನಿಸುವ ವಿಧ್ವಂಸಕ ಕೃತ್ಯಗಳು ನಡೆದಿವೆ.
ಅಸ್ಸಾಂನಲ್ಲಿ ಮೂರು ಜಿಲ್ಲೆಗಳಾದ ದಿಬ್ರುಗಢ, ಟಿನ್ಸುಕಿಯಾ ಹಾಗೂ ಚರೈಡಿಯೊ ಜಿಲ್ಲೆಗಳಿಗೆ ಸೇರಿದ ಏಳು ಕಡೆ ಬಾಂಬ್ ಸ್ಫೋಟ ನಡೆದಿದ್ದು, ನಿಷೇಧಿತ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಉಗ್ರವಾದಿ ಸಂಘಟನೆಯು ಈ ಸ್ಫೋಟಗಳ ಹಿಂದಿರಬಹುದೆಂದು ಶಂಕಿಸಲಾಗಿದೆ.
ಉಲ್ಫಾ ಉಗ್ರವಾದಿಗಳು ಗಣರಾಜ್ಯೋತ್ಸವ ದಿನಾಚರಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು. ಇದರ ಹೊರತಾಗಿಯೂ ಅಲ್ಲಿ ಗಣರಾಜ್ಯೋತ್ಸವ ಸಡಗರ ಮನೆ ಮಾಡಿರುವುದರಿಂದ ಈ ಉಲ್ಫಾ ಸಂಘಟನೆಯೇ ಈ ಕುಕೃತ್ಯ ನಡೆಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈವರೆಗೆ ಬಂದ ಮಾಹಿತಿಯಂತೆ, ಈ ಸ್ಫೋಟಗಳಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಈ ಸ್ಫೋಟಗಳನ್ನು ನಿರ್ಜನ ಪ್ರದೇಶಗಳಲ್ಲಿ ನಡೆಸಲಾಗಿದ್ದು, ಜನರಲ್ಲಿ ಕೇವಲ ಭೀತಿ ಹುಟ್ಟಿಸಲಷ್ಟೇ ಇಂಥ ಕೃತ್ಯ ನಡೆಸಲಾಗಿದೆ ಎಂದು ಹೇಳಿದೆ.
ಮಣಿಪುರ ಸ್ಫೋಟ
ಅತ್ತ, ಮಣಿಪುರದ ಇಂಫಾಲ್ ನಲ್ಲಿ ಎರಡು ಕಡೆ ಒಂದೇ ಸಮಯದಲ್ಲಿ ಶಕ್ತಿಶಾಲಿ ಬಾಂಬ್ ಗಳು ಸ್ಫೋಟಗೊಂಡಿವೆ. ಇಲ್ಲೂ ಸಹ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಈ ಕುಕೃತ್ಯದ ಹಿಂದೆಯೂ ಉಗ್ರರ ಕೈವಾಡವಿದೆಯೆಂದು ಶಂಕಿಸಲಾಗಿದೆ.
ಇಂಫಾಲ್ ಜಿಲ್ಲೆಯ ಪಶ್ಚಿಮದಲ್ಲಿರುವ ಹಾವೊ ಮೈದಾನದಲ್ಲಿ ಬೆಳಗ್ಗೆ 8:30 ಗಂಟೆಗೆ ಒಂದು ಬಾಂಬ್ ಸ್ಫೋಟವಾಗಿದ್ದರೆ, ಮತ್ತೊಂದು ಸ್ಫೋಟ ಅದೇ ಸಮಯಕ್ಕೆ ಸರಿಯಾಗಿ ಇಂಫಾಲದ ಪೂರ್ವ ಭಾಗದಲ್ಲಿರುವ 69 ಸಿಆರ್ ಪಿಎಫ್ ಬೆಟಾಲಿಯನ್ ಕೇಂದ್ರದ ಬಳಿ ನಡೆದಿದೆ.
ಆದರೆ, ಗಣರಾಜ್ಯೋತ್ಸವ ನಡೆಯುತ್ತಿದ್ದ ಕಾಂಗ್ಲಾದ ಮೈದಾನದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳು ನಡೆದಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ.