ಉಗ್ರರ ವಿಧ್ವಂಸಕ ಕೃತ್ಯದ ರಹಸ್ಯ ಸಂಚು ಬಯಲು
ನವದೆಹಲಿ, ಅ. 28 : ಬರ್ಧವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶೇಖ್ ಯುಸೂಫ್ ಸೇರಿದಂತೆ ಹಲವಾರು ಶಂಕಿತ ಉಗ್ರಗಾಮಿಗಳ ವಿಚಾರಣೆಯ ಸಂದರ್ಭದಲ್ಲಿ ಆಘಾತಕಾರಿ ಸಂಗತಿಗಳು ಒಂದೊಂದಾಗಿ ಬಯಲಾಗುತ್ತಿವೆ. 2013-14ರೊಳಗೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಯಿಂದ ಭಾರತದಿಂದ ಬಾಂಗ್ಲಾದೇಶಕ್ಕೆ ಐದು ಬಾರಿ ಬಾಂಬ್ ಇರುವ ಸರಕು ರವಾನೆಯಾಗಿದೆ ಎಂಬ ಸಂಗತಿ ತಿಳಿದುಬಂದಿದೆ.
ತನಿಖೆ ನಡೆಸುತ್ತಿರುವ ಅಧಿಕಾರಗಳಿಂದ ತಿಳಿದುಬಂದಿರುವ ಖಚಿತ ಮಾಹಿತಿ ಏನೆಂದರೆ, ಕಳೆದ ಎರಡು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತಯಾರಿಸಲಾದ ಬಾಂಬ್ ಗಳನ್ನು ರಹಸ್ಯ ಕಾರ್ಯಾಚರಣೆ ನಡೆಸಿ, ಸೇನೆಯ ಕಣ್ಣಿಗೆ ಮಣ್ಣೆರಚಿ ಐದು ಬಾರಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. [ಉಗ್ರಗಾಮಿಗಳ ರಾಜಧಾನಿ]
ಗಡಿಯಲ್ಲಿನ ಅಧಿಕಾರಿಗಳಿಗೆ ಲಂಚ
ಸುಮಾರು 60 ಅತ್ಯಾಧುನಿಕ ಮತ್ತು ಕಚ್ಚಾ ಬಾಂಬ್ ಗಳಿರುವ ಮೂಟೆಗಳು ಬಾಂಗ್ಲಾದೇಶವನ್ನು ಪ್ರವೇಶಿಸಿವೆ. ಕೌಸರ್ ಮತ್ತು ಶೇಖ್ ಯುಸೂಫ್ ಎಂಬಿಬ್ಬರು ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಇವನ್ನು ಗುಪ್ತವಾಗಿ ಸಾಗಿಸಲು ಗಡಿಯಲ್ಲಿನ ಭದ್ರತಾ ಸಿಬ್ಬಂದಿಗೆ ಮತ್ತು ಸ್ಥಳೀಯ ಏಜೆನ್ಸಿಗಳಿಗೆ ಲಂಚ ನೀಡಿದ್ದಿರಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮತ್ತು ವಿಧ್ವಂಸಕ ಕೃತ್ಯ ನಡೆಸಲು ಹಲವಾರು ಬಾರಿ ಬಾಂಬ್ ಗಳಿರುವ ಮೂಟೆಗಳು ಬಾಂಗ್ಲಾದೇಶಕ್ಕೆ ರವಾನೆಯಾಗಿವೆ.
ಇನ್ನೇನು ದಾಳಿ ನಡೆಸುವ ಸಿದ್ಧತೆ ನಡೆದಿತ್ತು
ಕಳೆದ ನಾಲ್ಕು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ವಿಧ್ವಂಸಕ ಕೃತ್ಯಕ್ಕೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ ಸಂಘಟನೆ ಸಿದ್ಧತೆ ನಡೆಸಿತ್ತು ಎಂದು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿಕೆ ನೀಡಿದೆ. ಬಾಂಬ್ ಸ್ಫೋಟಿಸಲು ಅಂತಿಮ ಸಿದ್ಧತೆ ನಡೆಸಿರುವಾಗ ನಡೆಸಿತ್ತು. ಆದರೆ, ಮೂರು ವಾರಗಳ ಹಿಂದೆ ಬರ್ಧವಾನ್ ನಲ್ಲಿ ನಡೆದ ಘಟನೆ ವಿಧ್ವಂಸಕ ಕೃತ್ಯದ ಹುನ್ನಾರವನ್ನು ಬಯಲು ಮಾಡಿದೆ. [ಯುವಕರ ಸೆಳೆಯಲು ಉಗ್ರರಿಂದ ಆನ್ ಲೈನ್ ಬಳಕೆ]
ರಾಷ್ಟ್ರೀಯ ತನಿಖಾ ಸಂಸ್ಥೆಯ ಯೋಜನೆಯೇನು?
ಎಲ್ಲಕ್ಕೂ ಮೊದಲು, ಹಂತಹಂತವಾಗಿ ಈ ಎಲ್ಲ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವುದು. ನಂತರ ಈ ಘಟನೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಗುರುತಿಸಿ ಬಂಧಿಸುವುದು. ನಂತರ, ಬಾಂಬ್ ಸ್ಫೋಟದ ಎಲ್ಲ ಯೋಜನೆಗಳನ್ನು ತಲೆಕೆಳಗು ಮಾಡಿ ಮತ್ತೆ ಪುನಾರಾವರ್ತಿಸದಂತೆ ಎಚ್ಚರಿಕೆವಹಿಸುವುದು ತನಿಖಾ ಸಂಸ್ಥೆಯ ಆದ್ಯತೆಗಳಲ್ಲಿದೆ.
ಆದರೆ, ರೆಕ್ಕೆ ಕಿತ್ತ ಹಕ್ಕಿಯಂತಾಗಿರುವ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆ ಈ ವೈಫಲ್ಯಕ್ಕಾಗಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ಹೂಡಬಹುದು ಮತ್ತು ಬೇರೆ ರೀತಿಯಲ್ಲಿ ತಿರುಗಿ ಬೀಳಬಹುದು ಎಂಬ ಎಚ್ಚರಿಕೆಯನ್ನು ವಹಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಈ ಯೋಜನೆ ರೂಪಿಸಲು ಉಗ್ರ ಸಂಘಟನೆ ಸಾಕಷ್ಟು ಹಣ ಮತ್ತು ಸಮಯ ವ್ಯಯಿಸಿದ್ದು, ತಿರುಗೇಟು ನೀಡಲು ತಹತಹಿಸುತ್ತಿರಬಹುದು ಎಂದು ಕೂಡ ಎಚ್ಚರಿಕೆ ನೀಡಲಾಗಿದೆ.
ಉಗ್ರ ಸಂಘಟನೆಗಳ ಈ ಎಲ್ಲ ಯೋಜನೆಗಳನ್ನು ವಿಫಲಗೊಳಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವೆ ಉತ್ತಮ ಸಹಕಾರ ಇರಬೇಕು. ಆಗ ಮಾತ್ರ ವಿಧ್ವಂಸಕ ಕೃತ್ಯಗಳನ್ನು ಹುಸಿಗೊಳಿಸಲು ಸಾಧ್ಯ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ಸೋಮವಾರ ಬರ್ಧವಾನ್ಗೆ ಭೇಟಿ ನೀಡಿದ ನಂತರ ಹೇಳಿದ್ದಾರೆ.