ಸೇನಾ ಸಿಬ್ಬಂದಿ ಗಡ್ಡ ಬಿಡುವಂತಿಲ್ಲ : ಸುಪ್ರೀಂ ಕೋರ್ಟ್
ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ವಾಯು ಸೇನೆ ಪಟ್ಟಿ ಮಾಡಿರುವ ನಿಯಮಗಳ ಮುಂದೆ ನಿಮ್ಮ ವೈಯಕ್ತಿಕ ಧಾರ್ಮಿಕ ಆಚರಣೆ ಗೌಣ ಅಂತ ಸುಪ್ರೀಂ ಕೋರ್ಟ್ ಹೇಳಿದ್ದು, ಗಡ್ಡ ಬಿಡೋದಾಗಿದ್ರೆ ಕೆಲಸಕ್ಕೆ ಬರಬೇಡಿ ಅಂತ ಹೇಳಿದೆ.
ನವದೆಹಲಿ, ಡಿಸೆಂಬರ್ 15 : ನಿಯಮವನ್ನು ಉಲ್ಲಂಘಿಸಿ ಉದ್ದ ಗಡ್ಡ ಬಿಟ್ಟು (ಮೀಸೆ ಇಲ್ಲದೆ) ಅಶಿಸ್ತು ತೋರಿದ್ದ ವಾಯುಸೇನೆಯ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ಎತ್ತಿಹಿಡಿದಿದೆ.
ವಾಯು ಸೇನೆಯ ನಿಯಮಗಳು ಎಂದೂ ವೈಯಕ್ತಿಕ ಧಾರ್ಮಿಕ ಹಕ್ಕನ್ನು ಕಸಿಯುವುದಿಲ್ಲ. ಆದರೆ, ಶಿಸ್ತಿನ ವಿಷಯದಲ್ಲಿ ಇವೆಲ್ಲವೂ ಗೌಣವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರಿದ್ದ ವಿಭಾಗೀಯ ಪೀಠ ಹೇಳಿದ್ದು, ಸೇನೆಯ ನಿಮಯಗಳಿರುವುದೇ ಶಿಸ್ತನ್ನು ಮತ್ತು ಏಕತೆಯನ್ನು ತರಲು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅನ್ಸಾರಿ ಅಫ್ತಬ್ ಅಹ್ಮದ್ ಎಂಬಾತ, ಸೇನೆಯಲ್ಲಿರುವ ಸಿಖ್ ಸಮುದಾಯದವರಿಗೆ ಉದ್ದ ಕೂದಲು ಬಿಡಲು ಮತ್ತು ಗಡ್ಡ ಬಿಡಲು ಅವಕಾಶ ನೀಡಲಾಗಿದೆ. ಅದರಂತೆ ಮುಸ್ಲಿಂ ಸಮುದಾಯದವರಿಗೂ ಉದ್ದ ಗಡ್ಡ ಬಿಡಲು ಅವಕಾಶ ಕೊಡಬೇಕೆಂಬ ವಾದ ಮುಂದಿಟ್ಟಿದ್ದ. ಆದರೆ, ಆತ ಅಶಿಸ್ತು ತೋರಿದ್ದಾನೆಂದು ಕೆಲಸದಿಂದ ಕಿತ್ತುಹಾಕಲಾಗಿತ್ತು. [ತಲಾಖ್ ಪದ್ಧತಿ ಅಸಾಂವಿಧಾನಿಕ : ಅಲಹಾಬಾದ್ ಕೋರ್ಟ್]
2008ರ ಅಕ್ಟೋಬರ್ ನಲ್ಲಿಯೇ ಅನ್ಸಾರ್ ನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಇದರ ಹಿಂದೆಯೇ, ಆತನ ಸಹೋದ್ಯೋಗಿ ಮತ್ತು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಸಿಬ್ಬಂದಿ ಕೂಡ ಇದೇ ರೀತಿಯ ಅರ್ಜಿ ಗುಜರಾಯಿಸಿದ್ದ.
ಇದಕ್ಕೆ ಪ್ರತಿಯಾಗಿ, ಮುಸ್ಲಿಂ ಸಮುದಾಯದಲ್ಲಿ ಗಡ್ಡ ಬಿಡುವುದು ಸಾರ್ವತ್ರಿಕ ಆಚರಣೆಯಿಲ್ಲ ಮತ್ತು ಇಸ್ಲಾಂನಲ್ಲಿಯೂ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ, ಗಡ್ಡ ಬೋಳಿಸುವುದನ್ನು ಇಸ್ಲಾಂ ಧರ್ಮ್ ನಿಷೇಧಿಸಿದೆ ಎಂಬ ವಾದ ಸರಿಯಲ್ಲ ಎಂದು ಭಾರತೀಯ ವಾಯು ಸೇನೆ ಪ್ರತಿವಾದ ಮಂಡಿಸಿತ್ತು. [ಫಸ್ಟ್ Rank ರಾಣಿಗೆ ಒಲಿದ ಸೆಕೆಂಡ್ Rank ರಾಜು!]
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಿದ್ದಾಗ, ರಕ್ಷಣಾ ಸಚಿವರಾಗಿದ್ದ ಎಕೆ ಆಂಟನಿಯವರು, ಮುಸ್ಲಿಂ ಸಿಬ್ಬಂದಿಗಳು ತೊಂದರೆ ಅನುಭವಿಸುವುದನ್ನು ಸಹಿಸುವುದಿಲ್ಲ, ಗಡ್ಡ ಬಿಡುವ ಸೈನಿಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂದು ಆದೇಶ ಹೊರಡಿಸಿದ್ದರು. ನಂತರ ಆದೇಶ ಮರುಪರಿಶೀಲಿಸುವುದಾಗಿ ಕೋರ್ಟಿಗೆ ಹೇಳಿದ್ದರು.
2002ರ ಜನವರಿ 1ಕ್ಕಿಂತ ಮೊದಲೇ ವಾಯು ಸೇನೆ ಸೇರಿರುವ ಮುಸ್ಲಿಂ ಸಿಬ್ಬಂದಿಗಳು ಮೀಸೆಯ ಜೊತೆಗೆ ಗಡ್ಡವನ್ನು ಬಿಟ್ಟರೆ ಕೆಲಸದಲ್ಲಿ ಮುಂದುವರಿಯಲು ಅವಕಾಶ ನೀಡಲಾಗುವುದು ಎಂದು ರಕ್ಷಣ ಸಚಿವಾಲಯ ಕೋರ್ಟಿಗೆ ತಿಳಿಸಿತ್ತು.