ಸುಪ್ರೀಂ ಕೋರ್ಟ್ನ ಈ ತೀರ್ಮಾನ ಹೊಸ ಚರ್ಚೆಗೆ ನಾಂದಿ ಹಾಡಲಿದೆಯೆ?
ನವದೆಹಲಿ, ಜುಲೈ, 25: ಸುಪ್ರೀಂ ಕೋರ್ಟ್ ನ ಈ ತೀರ್ಮಾನ ಹೊಸ ಚರ್ಚೆಗೆ ನಾಂದಿ ಹಾಡುವುದರಲ್ಲಿ ಅನುಮಾನವಿಲ್ಲ. ಸೋಮವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ 24 ವಾರಗಳಷ್ಟು ಬೆಳೆದ ವಿಕೃತ ಭ್ರೂಣವನ್ನು ತೆಗೆದು ಹಾಕಲು ನ್ಯಾಯಾಲಯ ಅನುಮತಿ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಭ್ರೂಣವು ಅಸಹಜ ಸ್ಥಿತಿಯಲ್ಲಿರುವುದಾಗಿ ವೈದ್ಯಕೀಯ ವರದಿ ಖಚಿತಪಡಿಸಿದೆ. ಈ ಕಾರಣಕ್ಕೆ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಭ್ರೂಣದಲ್ಲಿ ವಿಕೃತಿ ಕಂಡು ಬಂದಿದ್ದು ಮುಂದುವರೆಯಲು ಬಿಟ್ಟರೆ ತಾಯಿಯ ಪ್ರಾಣಕ್ಕೆ ಅಪಾಯವಿದೆ ಎಂದು ವೈದ್ಯಕೀಯ ವರದಿ ಉಲ್ಲೇಖಮಾಡಿದ್ದನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಮುಂಬೈನ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ನ್ಯಾಯಾಲಯ ತೀರ್ಮಾನ ನೀಡಿದೆ. ಮಹಿಳೆಯ ಅರ್ಜಿ ಸಂಬಂಧ ಪರಿಶೀಲನೆಗಾಗಿ ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಕಾಲೇಜ್ ಮತ್ತು ಆಸ್ಪತ್ರೆಯ ತಜ್ಞರನ್ನು ಒಳಗೊಂಡ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ಸಮಿತಿ ನೀಡಿದ ವರದಿ ಆಧರಿಸಿ ತೀರ್ಪು ಪ್ರಕಟ ಮಾಡಲಾಗಿದೆ.