ಅಕ್ರಮ ಆಸ್ತಿ ಕೇಸ್ ಹಾಕೋಕೆ ನಾನು ಸರ್ಕಾರಿ ನೌಕರಳಾ? ಶಶಿಕಲಾ ಪ್ರಶ್ನೆ
ಬುಧವಾರ ಸಲ್ಲಿಸಲಾಗಿರುವ ಈ ಮೇಲ್ಮನವಿಯಲ್ಲಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಗೆ ಜೈಲು ಶಿಕ್ಷೆ ನೀಡಿರುವ ತೀರ್ಪನ್ನು ಪುನರ್ ವಿಮರ್ಶೆ ಮಾಡಬೇಕೆಂದು ಕೋರಿದ್ದಾರೆ ಶಶಿಕಲಾ.
ಬೆಂಗಳೂರು, ಮೇ 4: ಅಕ್ರಮ ಆಸ್ತಿ ಸಂಪಾದಿಸಿದ್ದಾಗಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಶಿಕ್ಷೆಯ ವಿರುದ್ಧ ಎಐಎಡಿಎಂಕೆಯ ಮಾಜಿ ನಾಯಕಿ ಶಶಿಕಲಾ ನಟರಾಜನ್, ಸುಪ್ರೀಂ ಕೋರ್ಟ್ ನಲ್ಲೇ ಮೇಲ್ಮನವಿ ಸಲ್ಲಿಸಿದ್ದಾರೆ.
ಬುಧವಾರ ಸಲ್ಲಿಸಲಾಗಿರುವ ಈ ಮೇಲ್ಮನವಿಯಲ್ಲಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಗೆ ಜೈಲು ಶಿಕ್ಷೆ ನೀಡಿರುವ ತೀರ್ಪನ್ನು ಪುನರ್ ವಿಮರ್ಶೆ ಮಾಡಬೇಕೆಂದು ಕೋರಿರುವ ಅವರು, ತಾವು ಸರ್ಕಾರಿ ನೌಕರಳಲ್ಲದ ಕಾರಣ, ತಮ್ಮ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾದರೆಂದು ಅವರನ್ನು ಖುಲಾಸೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಹ ಆರೋಪಿಯಾದ ತಮ್ಮ ವಿರುದ್ಧದ ಪ್ರಕರಣವೂ ಖುಲಾಸೆಗೊಳ್ಳಬೇಕೆಂದು ಅವರು ಆಶಿಸಿದ್ದಾರೆ.
ಈ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ, ಸಹ ಅಪರಾಧಿಗಳು ಹಾಗೂ ಸಂಬಂಧಿಗಳೂ ಆದ ಇಳವರಸಿ, ವಿ.ಎನ್. ಸುಧಾಕರನ್ ಜತೆ ಬೆಂಗಳೂರು ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ.