ಎಸ್ಪಿ ಬಿಕ್ಕಟ್ಟೀಗ ಅಧಿಕೃತ, ಹೊಸ ಪಕ್ಷ ಸ್ಥಾಪನೆಗೆ ಶಿವಪಾಲ್ ಸಿದ್ಧತೆ
"ಹೊಸ ಪಕ್ಷಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ. ಮುಲಾಯಂ ಸಿಂಗ್ ಯಾದವ್ ಗೆ ಸಲ್ಲಬೇಕಾದ ಗೌರವವನ್ನು ನೀಡುವುದು ಮತ್ತು ಪಕ್ಷದ ನಾಯಕರನ್ನೆಲ್ಲಾ ಒಟ್ಟು ಗೂಡಿಸುವುದು ನಮ್ಮ ಗುರಿ,” ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.
ಲಕ್ನೋ, ಮೇ 5: ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಹೊಸ ಪಕ್ಷ ಸ್ಥಾಪಿಸಲಿದ್ದಾರೆ. ಹೊಸ ಪಕ್ಷದ ಹೆಸರನ್ನು ಬಹಿರಂಗಪಡಿಸಿರುವ ಶಿವಪಾಲ್ 'ಸಮಾಜವಾದಿ ಸೆಕ್ಯುಲರ್ ಮೋರ್ಚಾ' ಎಂದು ಹೊಸ ಪಕ್ಷಕ್ಕೆ ಹೆಸರಿಟ್ಟಿದ್ದಾರೆ. ಜತೆಗೆ ಹೊಸ ಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್ ಮುಖ್ಯಸ್ಥರಾಗಿರಲಿದ್ದಾರೆ ಎಂದು ಹೇಳಿದ್ದಾರೆ.
"ಈ ಮೋರ್ಚಾಗೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ. ನೇತಾಜಿ (ಮುಲಾಯಂ ಸಿಂಗ್ ಯಾದವ್) ಗೆ ಸಲ್ಲಬೇಕಾದ ಗೌರವವನ್ನು ನೀಡುವ ಗುರಿ ಹಾಗೂ ಪಕ್ಷದ ನಾಯಕರನ್ನೆಲ್ಲಾ ಒಟ್ಟು ಗೂಡಿಸುವ ಉದ್ದೇಶವಿದೆ," ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಒಟ್ಟು ಗೂಡಿಸಲು ಆಂದೋಲನವನ್ನೂ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಅಖಿಲೇಶ್ ಮುಂದೆ ಬೇಡಿಕೆ
ಇಟಾವಾದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, "ಮುಲಾಯಂ ಸಿಂಗ್ ಕೈಗೆ ಪಕ್ಷವನ್ನು ಹಸ್ತಾಂತರಿಸುವಂತೆ ಅಖಿಲೇಶ್ ಯಾದವ್ ಗೆ ಹೇಳಿದ್ದೇನೆ. ಅವರು ಈ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಂಡರೆ ನಾವೆಲ್ಲ ಪಕ್ಷವನ್ನು ಬಲಪಡಿಸುತ್ತೇವೆ. ನಾನು ಆತನಿಗೆ ಮೂರು ತಿಂಗಳ ಸಮಯ ನೀಡುತ್ತೇನೆ," ಎಂದು ಶಿವಪಾಲ್ ಹೇಳಿದ್ದಾರೆ. ಇಲ್ಲದಿದ್ದಲ್ಲಿ ತಾನು ಹೊಸ ಪಕ್ಷ ಸ್ಥಾಪಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುಣಾವಣೆಯ ವೇಳೆ ಅಖಿಲೇಶ್ ಮತ್ತು ಶಿವಪಾಲ್ ಯಾದವ್ ನಡುವಿನ ಕಲಹ ಬೀದಿಗೆ ಬಂದಿತ್ತು. ಕೊನೆಗೆ ಪಕ್ಷ ಇಬ್ಭಾಗವಾಗಿ ಸೈಕಲ್ ಗುರುತನ್ನು ಚುನಾವಣಾ ಆಯೋಗ ಅಖಿಲೇಶ್ ಬಣಕ್ಕೆ ನೀಡಿತ್ತು.
ಇಷ್ಟೆಲ್ಲಾ ಜಗಳಗಳ ಮಧ್ಯೆ ಚುನಾವಣೆ ಎದುರಿಸಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹೀನಾಯ ಸೋಲು ಕಂಡಿತು. ಈ ಸಂದರ್ಭದಲ್ಲಿ ಶಿವಪಾಲ್ ಯಾದವ್ ಮುಲಾಯಂರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಯಾರೂ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಹೊಸ ಪಕ್ಷ ಕಟ್ಟುವ ಬೆದರಿಕೆಯನ್ನು ಶಿವಪಾಲ್ ಯಾದವ್ ತೇಲಿ ಬಿಟ್ಟಿದ್ದಾರೆ. (ಒನ್ ಇಂಡಿಯಾ ಸುದ್ದಿ)