ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆತ್ಮಹತ್ಯೆ!!
ತಮಿಳುನಾಡಿನ ಸೇಲಂ ಮೂಲದ ವಿದ್ಯಾರ್ಥಿಯಾದ ಮುತ್ತು ಕೃಷ್ಣನ್ ಎಂಬಾತ, ಮಾರ್ಚ್ 13ರಂದು ಜೆಎನ್ ಯು ಕ್ಯಾಂಪಸ್ಸಿನ ಹಿಂಭಾಗದ ಏರಿಯಾದಲ್ಲಿದ್ದ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣು.
ನವದೆಹಲಿ, ಮಾರ್ಚ್ 13: ಕಳೆದ ವರ್ಷವಷ್ಟೇ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆಯು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆ ಪ್ರಕರಣವನ್ನು ನೆನಪಿಸುವಂತೆ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ ಯು) ಮುತ್ತು ಕೃಷ್ಣನ್ ಎಂಬ ವಿದ್ಯಾರ್ಥಿಯು ಮಾರ್ಚ್ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತಮಿಳುನಾಡಿನ ಸೇಲಂ ಮೂಲದವನಾಗಿದ್ದು, ವಿಶ್ವವಿದ್ಯಾಲಯದಲ್ಲಿ ಈಗ ನಡೆಯುತ್ತಿರುವ ಎಂ.ಫಿಲ್ ಹಾಗೂ ಪಿಎಚ್ ಡಿ ದಾಖಲಾತಿಗಳಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದ. ಇದರಿಂದ ಮನನೊಂದಿರುವ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಜೆಎನ್ ಯು ಕ್ಯಾಂಪಸ್ಸಿನ ಹಿಂಭಾಗದಲ್ಲಿರುವ ಮುನ್ಕೀರಾ ಪ್ರಾಂತ್ಯದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ ಆತ್ಮಹತ್ಯೆ ಮಾಡಿಕೊಂಡಿರುವುದು ಮಾರ್ಚ್ 13ರ ರಾತ್ರಿ ಬೆಳಕಿಗೆ ಬಂದಿದೆ.
ಜೆಎನ್ ಯುಗೆ ಬರುವುದಕ್ಕಿಂತ ಮುಂಚೆ ಅವರು, ಹೈದರಾಬಾದ್ ವಿಶ್ವವಿದ್ಯಾಲಯದಲ್ಲೇ ಓದಿದ್ದ. ಇತ್ತೀಚೆಗೆ, ಜೆಎನ್ ಯುಗೆ ಉನ್ನತ ವ್ಯಾಸಂಗಕ್ಕಾಗಿ ಬಂದಿದ್ದನಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಈತ ನನ್ನ ಫೇಸ್ ಬುಕ್ ಖಾತೆಯಲ್ಲಿ, ವಿಶ್ವವಿದ್ಯಾಲಯದ ಎಂ.ಫಿಲ್ ಹಾಗೂ ಪಿಎಚ್ ಡಿ ಪ್ರವೇಶ ಪ್ರಕ್ರಿಯೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅನುಸರಿಸಲಾಗುತ್ತಿದೆ. ಹಾಗಾಗಿ, ಹಿಂದುಳಿದ ವಿದ್ಯಾರ್ಥಿಗಳಿಗೆ ಓದುವ ಅವಕಾಶ ಇಲ್ಲಿ ಸಿಗುತ್ತಿಲ್ಲ ಎಂಬ ಸಂದೇಶ ಹಾಕಿ, ಆತನ ಫೇಸ್ ಬುಕ್ ಮಿತ್ರರ ಗುಂಪಿನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದ.
ಹಾಗಾಗಿ, ಈತನ ಆತ್ಮಹತ್ಯೆಯ ಹಿಂದೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ ಎನ್ನಲಾಗಿರುವ ತಾರತಮ್ಯ ಧೋರಣೆ ಇರಬಹುದೇ ಎಂಬ ಅನುಮಾನ ಹುಟ್ಟುಹಾಕಿದೆ.