ಸ್ವಾಮಿಯೇ ಅಯ್ಯಪ್ಪ, ಭಕ್ತಿ ಪರವಶತೆಯ ಮಹಾಪೂರ
ಬೆಂಗಳೂರು, ನ. 25 : ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುವ ಮಕರ ಜ್ಯೋತಿ ದೈವ ನಿರ್ಮಿತವಲ್ಲ ಮಾನವ ನಿರ್ಮಿತ ಎಂದು ತಿಳಿದಿದ್ದರೂ, ಕೇರಳದ ಪಶ್ಚಿಮ ಘಟ್ಟದ ತಪ್ಪಲಲ್ಲಿ, 18 ಗಿರಿಗಳ ನಡುವೆ ವಿರಾಜಮಾನವಾಗಿರುವ, ಹಿಂದೂಗಳ ಪವಿತ್ರ ದೇವರು ಅಯ್ಯಪ್ಪನ ದರುಶನಕ್ಕೆ ಸಾಗುವ ಶಬರಿಮಲೆ ಯಾತ್ರೆಯ ಆಕರ್ಷಣೆ ಎಳ್ಳಷ್ಟೂ ಕುಂದಿಲ್ಲ.
ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಕ್ತಿಯಿಂದ ಘೋಷಣೆ ಕೂಗುತ್ತ ಬರಿಗಾಲಲ್ಲಿ ಅಯ್ಯಪ್ಪನ ದರ್ಶನಕ್ಕೆ ಸಾಗುವ ಭಕ್ತರ ಸಂಖ್ಯೆ ವರುಷದಿಂದ ವರುಷಕ್ಕೆ ಹಿಗ್ಗುತ್ತಲ್ಲೇ ಇದೆ. ಪ್ರತಿವರ್ಷ 5 ಕೋಟಿಗೂ ಹೆಚ್ಚು ಭಕ್ತಾದಿಗಳು ಕುಕ್ಕುರಗಾಲಲ್ಲಿ ಕುಳಿತಿರುವ ಅಯ್ಯಪ್ಪನ ಭೇಟಿಗೆ ಹೋಗುತ್ತಾರೆ ಎಂದು ಅಂದಾಜಿದೆ. ಅಯ್ಯಪ್ಪ ಸ್ವಾಮಿ ದುಷ್ಟಶಕ್ತಿಗಳನ್ನು ಸಂಹರಿಸಿ ಇದೇ ಬೆಟ್ಟದಲ್ಲಿ ಧ್ಯಾನ ಮಾಡಿದನೆಂಬ ಪ್ರತೀತಿಯಿದೆ.
ಋತುಮತಿಯಾಗಿರುವ ಹತ್ತರಿಂದ ಐವತ್ತರವರೆಗಿನ ಮಹಿಳೆಯರನ್ನು ಹೊರತುಪಡಿಸಿ ಎಲ್ಲ ವಯೋಮಾನದ ಭಕ್ತಾದಿಗಳು, ಹೆಚ್ಚಾಗಿ ಪುರುಷರು ಕರ್ನಾಟಕ ಸೇರಿದಂತೆ ದೇಶದ ಎಲ್ಲ ಕಡೆಗಳಿಂದ ಶಬರಿಮಲೆಗೆ ತೆರಳುತ್ತಿದ್ದಾರೆ. ಪಂಪಾ ಸರೋವರದಲ್ಲಿ ಸ್ನಾನಾದಿಗಳನ್ನು ಮುಗಿಸಿಕೊಂಡು ನಂತರ ಅಯ್ಯಪ್ಪನ ದರ್ಶನಕ್ಕೆ ಹೋಗುವುದು ವಾಡಿಕೆ. ಇದಕ್ಕಾಗಿ ಕೇರಳ ಸರಕಾರ ಬಸ್, ರೈಲುಗಳ ವಿಶೇಷ ಆಯೋಜನೆಯನ್ನೂ ಮಾಡಿದೆ.
ನವೆಂಬರ್ 15ರಿಂದ ಡಿಸೆಂಬರ್ 26ರವರೆಗೆ ಮಂಡಲಪೂಜೆಯ ಸಂದರ್ಭದಲ್ಲಿ ದೇಗುಲ ತೆರೆದಿರುತ್ತದೆ. ನಂತರ ಜನವರಿ 14ರಿಂದ ಏಪ್ರಿಲ್ 14ರವರೆಗೆ ದರುಶನ ಲಭ್ಯವಿರುತ್ತದೆ. ಪ್ರತಿದಿನ 16.5 ಗಂಟೆಗಳ ಕಾಲ ಅಯ್ಯಪ್ಪ ಸ್ವಾಮಿಯ ದರ್ಶನ ಸಾರ್ವಜನಿಕರಿಗೆ ಸಿಗಲಿದೆ. ಬೆಳಗ್ಗೆ 4 ಗಂಟೆಗೆ ಆರಂಭವಾಗುವ ದರ್ಶನ ಸಮಯ ಮಧ್ಯಾಹ್ನ 1.30ಕ್ಕೆ ಉಚ್ಛಪೂಜೆಗೆ ಬಾಗಿಲು ಮುಚ್ಚಲಿದೆ ನಂತರ 4 ಗಂಟೆಗೆ ಬಾಗಿಲು ತೆರೆದರೆ 11ಗಂಟೆಗೆ ಅಥಳಪೂಜೆ ನಂತರ ದರ್ಶನ ಮುಕ್ತಾಯವಾಗಲಿದೆ.
ಬೆಂಗಳೂರಿನಲ್ಲಂತೂ ಶಬರಿಮಲೆ ಯಾತ್ರೆಯ ಸಡಗರ ಈಗಾಗಲೆ ಆರಂಭವಾಗಿದೆ. 48 ದಿನಗಳ ವ್ರತ ಪಾಲಿಸುವ ಭಕ್ತರು, ಅಯ್ಯಪ್ಪನ ದರುಶನವಾಗುವವರೆಗೆ, ಪರಿಶುದ್ಧರಾಗಿ ಕಪ್ಪು ಬಟ್ಟೆ ಧರಿಸಿ ಅಯ್ಯಪ್ಪ ಸ್ವಾಮಿಯನ್ನು ಜಪಿಸುತ್ತಲೇ ಇರುತ್ತಾರೆ. ಸಾಯಂಕಾಲದಲ್ಲಿ ಭಜನೆಗಳ ಮಹಾಪೂರ. ಯಾರು ಬೇಕಾದರೂ ದರ್ಶನ ಪಡೆಯಬಹುದಾದರೂ, ತಲೆಯಮೇಲೆ ಇರುಮುಡಿ ಕಟ್ಟಿದವರಿಗೆ ಮಾತ್ರ ಪವಿತ್ರ ಹದಿನೆಂಟು ಮೆಟ್ಟಿಲು ಹತ್ತಲು ಅವಕಾಶವಿರುತ್ತದೆ. [ಸ್ವಾಮಿಯೇ ಶರಣಂ ಅಯ್ಯಪ್ಪ, ಸರತಿ ಸಾಲಲ್ಲಿ ಬನ್ರಪ್ಪ]
ಈ ವರ್ಷದ ಶಬರಿಮಲೆ ಯಾತ್ರೆಗೆ ಭರ್ಜರಿ ಚಾಲನೆ ದೊರೆತಿದೆ. ಸ್ವಾಮಿಯೇ ಅಯ್ಯಪ್ಪ, ಅಯ್ಯಪ್ಪ ಸ್ವಾಮಿಯೇ... ಎಂದು ಭಕ್ತಿ ಪರವಶತೆಯಿಂದ ಭಕ್ತರು ಕೂಗುವ ಘೋಷ ಮುಗಿಲುಮುಟ್ಟುತ್ತಿದೆ. ಶಬರಿಮಲೆ ಯಾತ್ರೆ ಕೈಗೊಳ್ಳುತ್ತೀರೋ ಬಿಡುತ್ತೀರೋ, ಅಲ್ಲಿ ಹೋದವರಿಂದ ರುಚಿಯಾದ ಅರಿವಣ, ಇಡಿಯಪ್ಪಂ ಪ್ರಸಾದವನ್ನು ಸವಿಯಲು ಮಾತ್ರ ಮರೆಯಬೇಡಿ.
ಅಯ್ಯಪ್ಪ ಮಾಲೆ ಹಾಕಿಕೊಂಡು, ಇರುಮುಡಿ ಹೊತ್ತ ಭಕ್ತರು
ಭಕ್ತಾದಿಗಳ ಭಕ್ತಿಯ ಪರಾಕಾಷ್ಠೆ ಎಷ್ಟೇ ಇರಲಿ, ಅಯ್ಯಪ್ಪ ಮಾಲೆ ಹಾಕಿಕೊಂಡ ಅವಧಿಯಲ್ಲಿ ಭಕ್ತರು ಅತ್ಯಂತ ಪರಿಶುದ್ಧರಾಗಿರುತ್ತಾರೆ, ಯಾವುದೇ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ, ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ, ಎಲ್ಲರನ್ನೂ ಸ್ವಾಮಿ ಎಂದು ಸಂಭೋದಿಸುತ್ತಾರೆ. ಅವರನ್ನು ಕೂಡ ಹಾಗೆಯೇ ಕರೆಯಬೇಕು.
ಪವಿತ್ರ ಸ್ನಾನ ಮಾಡುತ್ತಿರುವ ಭಕ್ತಾದಿಗಳು
ಶಬರಿಮಲೆ ಯಾತ್ರೆಯ ಉದ್ದಕ್ಕೂ ಸಿಗುವ ಇಂತಹ ಸಣ್ಣಪುಟ್ಟ ಜಲಪಾತಗಳ ಬಳಿ ಭಕ್ತಾದಿಗಳು ಸ್ನಾನ ಮಾಡಿ ಮುಂದುವರಿಯುತ್ತಾರೆ.
ಚಂಡೆ ಮದ್ದಳೆ ನಿನಾದ ಮೊಳಗುತ್ತಲೇ ಇರುತ್ತದೆ
ದೇಗುಲದ ಆವರಣದಲ್ಲಿ ಚಂಡೆ ಬಾರಿಸುತ್ತಿರುವ ವಾದ್ಯಗಾರರು.
ನಿಗಿನಿಗಿ ಉರಿಯುತ್ತಿರುವ ತೆಂಗಿನ ಚಿಪ್ಪುಗಳು
ಯಾತ್ರೆಯ ಪೂರ್ವಭಾವಿಯಾಗಿ ನಡೆಸುವ ಪೂಜೆಯ ಭಾಗವಾಗಿ ತೆಂಗಿನ ಚಿಪ್ಪುಗಳನ್ನು ದಹಿಸಲಾಗುತ್ತದೆ.
ಭಜನೆಯ ಮಾಡುತ್ತಲೇ ಇರುಳು ಕಳೆಯುವ ಭಕ್ತರು
ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳು ಇರುಳಿನುದ್ದಕ್ಕೂ ಭಜನೆಯನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೇ ಮೈಮರೆಯುತ್ತಾರೆ.
ಭಕ್ತರಿಗಾಗಿ ಬಿಗಿ ಭದ್ರತೆ
ಶಬರಿಮಲೆಯಲ್ಲಿ ಭಕ್ತಾದಿಗಳ ನೂಕುನುಗ್ಗಲು ನಿಯಂತ್ರಿಸಲು ಭಾರೀ ಬಿಗಿಬಂದೋಬಸ್ತ್ ಮಾಡಲಾಗಿದೆ.
ಅಯ್ಯಪ್ಪನ ದರುಶನಕ್ಕೆಂದು ಬಂದ ಕೇರಳ ನಟ
ಅಯ್ಯಪ್ಪನ ದರುಶನಕ್ಕೆಂದು ಬಂದ ಕೇರಳ ನಟ ಜಗದೀಶ. ಶಿವರಾಜ್ ಕುಮಾರ್ ಸೇರಿದಂತೆ ಕನ್ನಡದ ಹಲವಾರು ನಟರು ಕೂಡ ಅಯ್ಯಪ್ಪನ ದರ್ಶನಕ್ಕೆಂದು ಪ್ರತಿವರ್ಷ ಹೋಗುತ್ತಾರೆ. ಹಿಂದೆ ರಾಜ್ ಕುಮಾರ್ ಕೂಡ ಮಾಡುತ್ತಿದ್ದರು.
ಸರತಿ ಸಾಲನ್ನು ನೋಡುತ್ತಿರುವ ಬಾಲೆ
ಬಾಲಿಕೆಯೊಬ್ಬರು ಸರತಿಯಲ್ಲಿ ನಿಂತಿರುವ ಸಾವಿರಾರು ಭಕ್ತರನ್ನು ವೀಕ್ಷಿಸುತ್ತಿರುವುದು. ಋತುಮತಿಯಾಗದ ಬಾಲೆಯರು ಕೂಡ ಮಾಲೆ ಧರಿಸಬಹುದು.
ಅಯ್ಯಪ್ಪನಿಗಾಗಿ ಗಣಪತಿ ಹೋಮ
ದೇಗುಲದ ಪ್ರಧಾನ ಅರ್ಚಕರು ಗಣಪತಿ ಹೋಮ ಮಾಡುತ್ತಿರುವ ದೃಶ್ಯ.
ಭಕ್ತರ ಮಹಾಪೂರ
ಪ್ರತಿವರ್ಷ ಅಂದಾಜು 5 ಕೋಟಿಗೂ ಹೆಚ್ಚು ಭಕ್ತರು ಶಬರಿಮಲೆಗೆ ಹರಿದುಬರುತ್ತಾರೆ.
ಚುಮುಚುಮು ಬೆಳಕಿನಲ್ಲಿ ದರ್ಶನಕ್ಕೆ ಹೊರಟ ಭಕ್ತ
ಮರಗಟ್ಟುವ ಚಳಿಯಲ್ಲಿ ಬೆಳ್ಳಂಬೆಳಿಗ್ಗೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಭಕ್ತಸಮೂಹ.
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ, ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ...