NTR ಮುನ್ನುಡಿ ಬರೆದಿದ್ದ ರೆಸಾರ್ಟ್ ರಾಜಕಾರಣ: ಅಂದಿನಿಂದ ಇಂದಿನವರೆಗೆ!
1984ರಲ್ಲಿ ಅಂದಿನ ಆಂಧ್ರ ಮುಖ್ಯಮಂತ್ರಿಯಾಗಿದ್ದ ನಂದಮೂರಿ ತಾರಕ ರಾಮರಾವ್ ಷರಾ ಬರೆದಿದ್ದ ರೆಸಾರ್ಟ್ ರಾಜಕಾರಣ, ಮೂರು ದಶಕಗಳ ನಂತರವೂ ರಾಜಕೀಯ ಮೇಲಾಟಕ್ಕೆ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ.
ಅವಿಭಜಿತ ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ನಂದಮೂರಿ ತಾರಕ ರಾಮರಾವ್ (NTR) ಮೂರು ದಶಕಗಳ ಹಿಂದೆ, ತಮ್ಮದೇ ಪಕ್ಷದ ಶಾಸಕರ ಮೇಲೆ ನಂಬಿಕೆಯಿಲ್ಲದೆ 'ಒಂದು ಕಡೆ ಕೂಡಿಹಾಕುವ' ರಾಜಕೀಯ ಪ್ರಕ್ರಿಯೆ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಅದು ರೆಸಾರ್ಟ್ ರಾಜಕಾರಣ ಎಂದು ಹೆಸರಾಯಿತು.
ಅಂದಿನಿಂದ ಇಂದಿನವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವಂತಹ 'ರೆಸಾರ್ಟ್ ರಾಜಕಾರಣ' ಎನ್ನುವ ಪದ ಯಾವ ಪಕ್ಷಗಳ ಸ್ವತ್ತಾಗದೇ ರಾಜಕೀಯ ಮೇಲಾಟಕ್ಕೆ ಎಲ್ಲಾ ಪಕ್ಷಗಳು ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಬರುತ್ತಲೇ ಇವೆ.
ಕಾಂಗ್ರೆಸ್ ರೆಸಾರ್ಟ್ ರಾಜಕಾರಣ, ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು
ಇದಕ್ಕೆ ಯಾವ ರಾಷ್ಟ್ರೀಯ ಪಕ್ಷವಾಗಲಿ, ಪ್ರಾದೇಶಿಕ ಪಕ್ಷಗಳಾಗಲಿ ಹೊರತಾಗಿಲ್ಲ ಎನ್ನುವುದಕ್ಕೆ ಸುಮಾರು ಮೂವತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ರಾಜಕೀಯ ವಿದ್ಯಮಾನಗಳೇ ಸಾಕ್ಷಿ.
ಅಂದು ಎನ್ಟಿಆರ್ ರೆಸಾರ್ಟ್ ರಾಜಕಾರಣಕ್ಕೆ ಕರ್ನಾಟದ ಸಿಎಂ ಆಗಿದ್ದ ರಾಮಕೃಷ್ಣ ಹೆಗ್ಡೆ ಆತಿಥ್ಯ ನೀಡಿದ್ದರೆ, ಈಗಿನ ಗುಜರಾತ್ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಸಿದ್ದರಾಮಯ್ಯ ರಾಜಾತಿಥ್ಯ ನೀಡುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಅಂಗಣದ ನಂಬರ್ ಒನ್ ಪ್ರಭಾವಿ ಮುಖಂಡ ಅಹಮದ್ ಪಟೇಲ್ ಅವರನ್ನು ಗುಜರಾತಿನಿಂದ ರಾಜ್ಯಸಭೆ ಆಯ್ಕೆ ಮಾಡುವ ಸಲುವಾಗಿ, ಬಿಜೆಪಿ ಆಪರೇಷನ್ ಕಮಲ ನಡೆಸುವ ಸಾಧ್ಯತೆಯಿದೆ ಎನ್ನುವ ಭಯದಿಂದ ಬೆಂಗಳೂರು ಹೊರವಲಯದ ಐಷಾರಾಮಿ ರೆಸಾರ್ಟ್ ನಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕೂಡಿಹಾಕಲಾಗಿದೆ.
NTR ಷರಾ ಬರೆದ ರೆಸಾರ್ಟ್ ರಾಜಕಾರಣ: ಅಂದಿನಿಂದ ಇಂದಿನವರೆಗೆ, ಟೈಂಲೈನ್
ತೆಲುಗುದೇಶಂ ಪಕ್ಷದ ಶಾಸಕರು ಬೆಂಗಳೂರಿನ ರಿಸಾರ್ಟಿನಲ್ಲಿ
1984ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗಾಗಿ ಎನ್ಟಿಆರ್ ಅಮೆರಿಕಾಗೆ ತೆರಳಿದ್ದರು. ಅವರು ಹಿಂದಿರುಗಿ ಬರುವಷ್ಟರಲ್ಲಿ ಆಂಧ್ರ ರಾಜ್ಯಪಾಲರು ನಾದೇಂಡ್ಲ ಭಾಸ್ಕರ ರಾವ್ ಅವರನ್ನು ಸಿಎಂ ಹುದ್ದೆಗೆ ನಿಯೋಜಿಸಿದ್ದರು. ಎನ್ಟಿಆರ್ ವಾಪಸ್ ಬಂದ ನಂತರ ಅವರಿಗೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಸೂಚಿಸಿದರು. ಎನ್ಟಿಆರ್ ಬಹುಮತ ಸಾಬೀತು ಪಡಿಸುವ ತನಕ, ತೆಲುಗುದೇಶಂ ಪಕ್ಷದ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ಗೆ ಕಳುಹಿಸಲಾಗಿತ್ತು.
ಉತ್ತರಪ್ರದೇಶದಲ್ಲಿ ಎರಡು ಬಾರಿ ರೆಸಾರ್ಟ್ ರಾಜಕಾರಣ
ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ 1998 ರಿಂದ 2002ರ ಅವಧಿಯಲ್ಲಿ ಎರಡು ಬಾರಿ ರೆಸಾರ್ಟ್ ರಾಜಕಾರಣ ನಡೆದಿತ್ತು. ಒಂದು ಆಗ ಸಿಎಂ ಆಗಿದ್ದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಮತ್ತು 2002ರಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜಪಕ್ಷ ಈ ರಾಜಕೀಯ ಕಾರ್ಯತಂತ್ರ ಪ್ರಯೋಗಿಸಿತ್ತು.
ವಿಲಾಸರಾವ್ ದೇಶಮುಖ್ ಸರಕಾರ
2002ರಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ವಿಲಾಸರಾವ್ ದೇಶಮುಖ್ ಸರಕಾರ 71 ಕಾಂಗ್ರೆಸ್ ಮತ್ತು ಎನ್ಸಿಪಿ (ಶರದ್ ಪವಾರ್ ಪಕ್ಷ) ಶಾಸಕರನ್ನು ಕರ್ನಾಟಕಕ್ಕೆ, ವಿಶ್ವಾಸಮತ ಸಾಬೀತು ಪಡಿಸುವ ಕೆಲದಿನಗಳಿಗೆ ರೆಸಾರ್ಟ್ ಗೆ ಕಳುಹಿಸಿತ್ತು. ಡಿ ಕೆ ಶಿವಕುಮಾರ್ ಮತ್ತು ರೋಷನ್ ಬೇಗ್, ತಮ್ಮ ಸ್ವಪಕ್ಷೀಯ ಶಾಸಕರಿಗೆ ರಾಜಾತಿಥ್ಯ ನೀಡಿ, ಪುಣ್ಯಕ್ಷೇತ್ರಗಳ ದರುಶನ ಮಾಡಿಸಿದ್ದರು.
ಬಿಹಾರದಲ್ಲೂ ರೆಸಾರ್ಟ್ ರಾಜಕಾರಣ
ಬಿಹಾರ ರಾಜಕೀಯ ಮೇಲಾಟಕ್ಕೆ ಯಾವತ್ತೂ ಹೆಸರು ಪಡೆದಿರುವ ರಾಜ್ಯ. 2005ರಲ್ಲಿ ಲಾಲೂ ಪ್ರಸಾದ್ ನೇತೃತ್ವದ ಆರ್ಜೆಡಿಗೆ ಬಹುಮತ ಸಾಬೀತು ಪಡಿಸಲು ಬಿಜೆಪಿ ಮತ್ತು ಲೋಕದಳ ಪಕ್ಷದ ಸದಸ್ಯರ ಸಹಾಯ ಬೇಕಿತ್ತು. ರೆಸಾರ್ಟ್ ರಾಜಕಾರಣ ಹೊಲಸು ಎಂದು ಈಗ ಲೇವಡಿ ಮಾಡುತ್ತಿರುವ ಲಾಲೂ, ಅಂದು ಮಾಡಿದ್ದು ಅದೇಯಾ...
ಜಾರ್ಖಂಡ್ ನಲ್ಲಿ ಅರ್ಜುನ್ ಮುಂಡಾ ಸರಕಾರ
ಜಾರ್ಖಂಡ್ ನಲ್ಲಿ ಅರ್ಜುನ್ ಮುಂಡಾ ಸರಕಾರ ಪತನಗೊಳ್ಳುವ ಭೀತಿಯಲ್ಲಿದ್ದಾಗ, ಆರು ಜನ ಪಕ್ಷೇತರ ಶಾಸಕರನ್ನು ರಾಜಸ್ಥಾನದ ರೆಸಾರ್ಟ್ ನಲ್ಲಿ ಕೂಡಿ ಹಾಕಲಾಗಿತ್ತು. ಒಂದು ವರ್ಷ ಅರ್ಜುನ್ ಮುಂಡಾಗೆ ನಿಷ್ಠರಾಗಿದ್ದ ಈ ಶಾಸಕರು, ನಂತರ ಮಧು ಕೋಡಾ ಪರವಾಗಿ ನಿಂತರು.
ಬಿಜೆಪಿ - ಜೆಡಿಎಸ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ
ಸಿಎಂ ಆಗಿದ್ದ ಧರಂ ಸಿಂಗ್ ಅವರಿಗೆ ಜೆಡಿಎಸ್ ತಾನು ನೀಡಿದ ಬೆಂಬಲ ಹಿಂದಕ್ಕೆ ಪಡೆದ ನಂತರ, ಬಿಜೆಪಿ - ಜೆಡಿಎಸ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂತು. ಆ ವೇಳೆಯೂ ಜೆಡಿಎಸ್- ಬಿಜೆಪಿ ಶಾಸಕರನ್ನು ರೆಸಾರ್ಟ್ ಗೆ ಕಳುಹಿಸಲಾಗಿತ್ತು.
ರೆಸಾರ್ಟ್ ರಾಜಕಾರಣಕ್ಕೆ ಮೈಲೇಜ್ ಸಿಕ್ಕಿದ್ದು ಬಿಜೆಪಿ ಸರಕಾರದಲ್ಲಿ
ಆದರೆ ರೆಸಾರ್ಟ್ ರಾಜಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮೈಲೇಜ್ ಸಿಕ್ಕಿದ್ದು ಬಿಜೆಪಿ ಸರಕಾರದಲ್ಲಿ, ಅದೂ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ. 2004, 2006, 2009 ಮತ್ತು 2011ರಲ್ಲಿ ಕರ್ನಾಟಕ ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಯಿತು. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸಿಎಂ ಆಗುವ ವೇಳೆಯೂ ರೆಸಾರ್ಟ್ ರಾಜಕಾರಣ, ಜನಾರ್ಧನ ರೆಡ್ಡಿ ನೇತೃತ್ವದಲ್ಲಿ ನಡೆಯಿತು.
ಗುಜರಾತ್ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ
ಈಗ ಗುಜರಾತ್ ಕಾಂಗ್ರೆಸ್ ಶಾಸಕರ ಸರದಿ. ಆಗಸ್ಟ್ ಎಂಟರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಅಹಮದ್ ಪಟೇಲ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದಾರೆ. ಒಟ್ಟು ಅಲ್ಲಿನ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸಿದ್ದಾರೆ. ಮೂರನೇ ಸ್ಥಾನಕ್ಕೂ ಕೊನೆಯ ಕ್ಷಣದಲ್ಲಿ ಬಿಜೆಪಿ ಭಲವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿರುವುದರಿಂದ, ಅಹಮದ್ ಪಟೇಲ್ ಮತ್ತು ಸಿನ್ಹಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿಯೇ ಈಗ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿದ್ದಾರೆ.