ಮಾತಾ ವೈಷ್ಣೋದೇವಿ ಕ್ಷೇತ್ರದ ಮೇಲೆ ದಾಳಿಗೆ ಉಗ್ರರ ಸ್ಕೆಚ್!
ಜನವರಿ 26ರಂದು ದೇಶದಾದ್ಯಂತ ಗಣರಾಜ್ಯೋತ್ಸವ ಆಚರಣೆ ಸಂಭ್ರಮ. ಇಂಥ ವೇಳೆ ದಾಳಿ ನಡೆಸಲು ಉಗ್ರರು ಸಂಚು ಹೂಡಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಕಾಶ್ಮೀರದಲ್ಲಿ ಇತರೆಡೆಗಿಂತ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
ನವದೆಹಲಿ, ಜನವರಿ 25: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು 'ಗ್ರೇಡ್ ಎ' ಎಚ್ಚರಿಕೆ ನೀಡಿದ್ದು, ರಕ್ಷಣಾ ಸಿಬ್ಬಂದಿಗೆ 'ಅತಿ ಎಚ್ಚರ'ದಿಂದ ಇರಲು ಸೂಚನೆ ನೀಡಲಾಗಿದೆ. ಈ ಕರಣಕ್ಕೆ ಮಾತಾ ವೈಷ್ಣೋದೇವಿ ಕ್ಷೇತ್ರಕ್ಕೆ ಭದ್ರತೆ ಬಿಗಿಗೊಳಿಸಲಾಗಿದೆ.
ಕಟ್ರಾದಲ್ಲಿ ಭದ್ರತಾ ಕ್ರಮಗಳು ಹೆಚ್ಚಿಸಲಾಗಿದೆ. ಕಣಿವೆ ರಾಜ್ಯದ ಇತರೆಡೆಗಳಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ದೇಶದ ಇತರ ನಗರಗಳಲ್ಲಿ ನೀಡಿರುವ ಸೂಚನೆ ಗಣಾರಾಜ್ಯೋತ್ಸವದಂಥ ಸಂದರ್ಭದಲ್ಲಿ ಕೈಗೊಳ್ಳುವ ಭದ್ರತಾ ಕ್ರಮದಂತೆ ಸಹಜವಾದುದು. ಅದರಲ್ಲಿ ಹೆಚ್ಚಿನ ಚಿಂತೆಗೆ ಕಾರಣವಿಲ್ಲ.[ವಿಡಿಯೋ: ದಕ್ಷಿಣ ಕಾಶ್ಮೀರದ ಕಾಡಿನಲ್ಲಿ ಚಳಿ ಕಾಯಿಸುತ್ತಿರುವ ಉಗ್ರರು]
ಆದರೆ, ಜಮ್ಮು-ಕಾಶ್ಮೀರದ ಬಗ್ಗೆ ನಿರ್ದಿಷ್ಟವಾಗಿ ಕೆಲ ಸೂಚನೆಗಳನ್ನು ನೀಡಲಾಗಿದೆ. ಉಗ್ರ ಸಂಘಟನೆಗಳಾದ ಹಿಜ್ಬುಲ್ ಮುಜಾಹಿದೀನ್ ಹಾಗೂ ಲಷ್ಕರ್ ಇ ತೋಯ್ಬಾ ಮಾತಾ ವೈಷ್ಣೋದೇವಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.
ಗಣರಾಜ್ಯೋತ್ಸವ ಆಚರಣೆಗೆ ತೊಂದರೆ ಮಾಡುವ ಸಂಭವ ಕೂಡ ಇದೆ. ದೇಶದ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಗಡಿಯಲ್ಲಿ ಒಳನುಸುಳಲು ಉಗ್ರರು ಪ್ರಯತ್ನಿಸಬಹುದು ಎಂದು ಶಂಕಿಸಲಾಗಿದ್ದು, ಅದಕ್ಕಾಗಿ ನಿಯಂತ್ರಣ ರೇಖೆ ಬಳಿ ಕಣ್ಗಾವಲು ಇಡುವಂತೆ, ಜಾಗ್ರತೆ ವಹಿಸುವಂತೆ ಮಾಹಿತಿ ರವಾನೆಯಾಗಿದೆ.[ಕೇರಳ,ಕಾಸರಗೋಡಿನಿಂದ ನಾಪತ್ತೆಯಾಗಿದ್ದ 30 ಜನರು ಎಲ್ಲಿದ್ದಾರೆ ಗೊತ್ತೆ?]
ಇತ್ತೀಚೆಗೆ ಸಿಕ್ಕಿರುವ ಲಷ್ಕರ್ ಇ ತೋಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ವಿಡಿಯೋದಲ್ಲಿ ಉಗ್ರರು ಕಾಶ್ಮೀರದ ಆಚೆಗೂ ದಾಳಿ ನಡೆಸುವ ಯೋಜನೆ ಬಗ್ಗೆ ಮಾತನಾಡಿರುವುದು ಗೊತ್ತಾಗಿದೆ. ಆ ವಿಡಿಯೋ ಪ್ರಕಾರ ಎರಡು ಗುಂಪಿನ ಉಗ್ರರು ದೆಹಲಿಯಲ್ಲಿ ದಾಳಿ ನಡೆಸಲು ಯೋಜನೆ ಹಾಕಿಕೊಂಡಿರುವುದು ತಿಳಿದು ಬರುತ್ತದೆ.