ಆರ್ ಡಿ ಬರ್ಮನ್ ಬಗ್ಗೆ ಗೊತ್ತಿರದ 5 ಸಂಗತಿ (Birthday Special)
ಜೂನ್ 27 - ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರ 78ನೇ ಹುಟ್ಟುಹಬ್ಬ. ಹೊಸತನಕ್ಕೆ, ಪ್ರಯೋಗಶೀಲತೆಗೆ ಹೆಸರುವಾಸಿಯಾಗಿದ್ದ ಬರ್ಮನ್ ಅವರು ಭಾರತೀಯ ಚಿತ್ರರಂಗದಲ್ಲಿ ಮೂಡಿಸಿದ ಛಾಪು ಅನನ್ಯ.
ಇಂದು ಜೂನ್ 27. ಹಿಂದಿ ಚಿತ್ರರಂಗ... ಕ್ಷಮಿಸಿ, ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ ಅವರ 78ನೇ ಹುಟ್ಟುಹಬ್ಬ.
ಸದಾ ಪ್ರಯೋಗಶೀಲವಾಗಿದ್ದ ಸಂಗೀತ ನಿರ್ದೇಶಕ ಸಚಿನ್ ರಾಹುಲ್ ದೇವ್ ಬರ್ಮನ್ ಅರ್ಥಾತ್ ಆರ್.ಡಿ. ಬರ್ಮನ್. ಚಿತ್ರರಂಗದಲ್ಲಿ ಪಂಚಮ್ ದಾ ಎಂದೇ ಪರಿಚಿತರು. ಟ್ರೆಂಡ್ ಸೆಟ್ಟರ್. ಹಿಂದಿ ಚಿತ್ರರಂಗದಲ್ಲಿ ಅವರು ಮಾಡಿದ ಅನೇಕ ಪ್ರಯೋಗಗಳು ಭಾರತದ ವಿವಿಧ ಭಾಷಾ ಚಿತ್ರರಂಗಗಳಲ್ಲಿ ಪ್ರತಿಧ್ವನಿಸಲ್ಪಟ್ಟಿವೆ. ಹಾಗಾಗಿಯೇ, ಅವುಗಳನ್ನು ಭಾರತೀಯ ಚಿತ್ರರಂಗದ ಅಪ್ರತಿಮ ಸಂಗೀತ ನಿರ್ದೇಶಕ ಎಂದು ಕರೆದಿದ್ದು.
ಭಾರತೀಯ ಚಿತ್ರರಂಗದ ದಿಗ್ಗಜ ಎನಿಸಿರುವ ಹಿಂದಿ ಚಿತ್ರರಂಗದ ಆದಿಯಲ್ಲಿ ಹಲವಾರು ಪ್ರಯೋಗಾತ್ಮಕ ಸಂಗೀತ ನಿರ್ದೇಶಕರು ಬಂದು ಹೋಗಿದ್ದಾರೆ. ಅಂಥವರಲ್ಲಿ, ಸಿ. ರಾಮಚಂದ್ರ, ನೌಷಾದ್, ಗುಲಾಂ ಅಲಿ ಪ್ರಮುಖರು.
ಇನ್ನು, ಆರ್ ಡಿ ಬರ್ಮನ್ ಅವರ ಅಸ್ತಿತ್ವವೇ ಒಂದು ಪ್ರಯೋಗ. ಅಂಥ ಸಂಗೀತ ದಿಗ್ಗಜನ ಮಗನಾಗಿ ಜನಿಸಿದ ಆರ್.ಡಿ. ಬರ್ಮನ್ ಅವರು ತಂದೆಯನ್ನು ಅನುಕರಿಸದ ವ್ಯಕ್ತಿತ್ವ. ಅಲ್ಲದೆ, ಸಂಗೀತ ಲೋಕದಲ್ಲಿ ಹೊಸ ಛಾಪು ತಂದ ಪ್ರತಿಭೆ. ಈ ಇಬ್ಬರೂ ಅಪ್ಪ-ಮಗನ ಸಾಧನೆ ನಮ್ಮ ಕುವೆಂಪು- ಪೂರ್ಣಚಂದ್ರ ತೇಜಸ್ವಿಯವರನ್ನು ಹೋಲುತ್ತದೆ.
ಇಂಥ ಅಪರೂಪದ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರ ಬಗ್ಗೆ ಕೆಲವು ಕುತೂಹಲದ ಸಂಗತಿಗಳು ಇಲ್ಲಿವೆ.
ಅಪ್ಪ ಬರ್ಮನ್ ಅಚ್ಚರಿಗೊಳಗಾದ್ದರು!
ಆರ್ ಡಿ ಬರ್ಮನ್ ಬಾಲ ಪ್ರತಿಭೆ. 9ನೇ ವಯಸ್ಸಿನಲ್ಲಿಯೇ ಹಾಡು ಕಂಪೋಸ್ ಮಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಒಮ್ಮೆ ತಾವು ಸಂಯೋಜಿಸಿದ್ದ ಗೀತೆಯೊಂದನ್ನು ಅಪ್ಪ ಎಸ್.ಡಿ. ಬರ್ಮನ್ ಗೆ ಕೇಳಿಸಿದ್ದರು. ಕೆಲವು ದಿನಗಳಾದ ಮೇಲೆ ಎಸ್.ಡಿ. ಬರ್ಮನ್ ಅವರ ಸಂಗೀತ ನಿರ್ದೇಶನದ ಚಿತ್ರವೊಂದರಲ್ಲಿ ಆ ಹಾಡಿನ ರಾಗದಲ್ಲೇ ಬೇರೊಂದು ಹಾಡು ಕೇಳಿಸಿತು. ಇದನ್ನು ಆಲಿಸಿದ ಆರ್.ಡಿ. ಬರ್ಮನ್, ಕೂಡಲೇ ತಂದೆಯ ಬಳಿ ಹೋಗಿ, ಅಪ್ಪಾ ಇದು ನನ್ನ ಟ್ಯೂನ್ ಅಲ್ಲವಾ? ನೀನು ಕದ್ದುಬಿಟ್ಟೆಯಾ ಎಂದು ಕೇಳಿದ್ದರಂತೆ. ಆಗ, ಎಸ್.ಡಿ. ಬರ್ಮನ್ ಅವರು ನಿನ್ನ ಟ್ಯೂನುಗಳನ್ನು ಮುಂದೆ ಇಡೀ ದೇಶವೇ ಕದಿಯುತ್ತೆ ಹೋಗು ಎಂದಿದ್ದರಂತೆ. ಆ ಮಾತು ನಿಜವಾಯಿತು.
ಸದಾ ಪ್ರಯೋಗಕ್ಕೆ ತುಡಿಯುತ್ತಿದ್ದ ಮನಸ್ಸು
ಆರ್.ಡಿ. ಬರ್ಮನ್ ಸಂಗೀತ ನಿರ್ದೇಶಕರಾದ ನಂತರ, ಅದೊಮ್ಮೆ ತಮ್ಮ ಸಂಗೀತ ತಂಡದೊಂದಿಗೆ ಅಭ್ಯಾಸ ನಡೆಸುತ್ತಿರುವಾಗ ಸಹ ವಾದ್ಯಗಾರನ ಕೈಯ್ಯಿಂದ ಜಾರಿಬಿದ್ದ ಎಲೆಕ್ಟ್ರಾನಿಕ್ ಗಿಟಾರ್, ಡನ್.. ಡನ್.. ಡನ್.. ಡನ್ ಎಂಬ ಪ್ರತಿಧ್ವನಿ (Echo) ಮಾದರಿಯಲ್ಲಿ ತರಂಗಗಳನ್ನು ಎಬ್ಬಿಸಿತು. ತಕ್ಷಣವೇ ಹೊಸ ಮಾದರಿಯ ಟ್ಯೂನ್ ಒಂದು ಹೊಳೆಯಿತು ಬರ್ಮನ್ ಗೆ. ಆಗಲೇ, ಹುಟ್ಟಿದ ಹಾಡು 'ಪಿಯಾ ತೂ ಅಬ್ ತೋ ಆಜಾ'. ಆ ಹಾಡಿನಲ್ಲಿ ಖುದ್ದು ಬರ್ಮನ್ ಅವರೇ ಕರ್ಕಶವಾಗಿ ತರತ್..ತರತ್.. ತರತ್... ತರತ್ ಎಂಬ ಪ್ರತಿಧ್ವನಿಯ ಮಾದರಿಯಲ್ಲಿ ಕೂಗುತ್ತಾರೆ. ಅದು ಆ ಗಿಟಾರ್ ಕೆಳಗೆ ಬಿದ್ದಾಗಿನಿಂದ ಬಂದ ಪ್ರೇರಣೆ. ಮುಂದೆ ಇದು ಕೆಲವಾರು ಭಾಷೆಗಳಲ್ಲಿ ಟ್ರೆಂಡ್ ಆಗಿತ್ತು.
ತಾಂತ್ರಿಕವಾಗಿ ಬರ್ಮನ್ ಸಂಯೋಜನೆಗಳ ವಿಶ್ಲೇಷಣೆ
ಆರ್.ಡಿ. ಬರ್ಮನ್ ಅವರ ಶ್ರುತಿಗಳಲ್ಲಿ ಪ್ರಯೋಗಳನ್ನು ಮಾಡಿದ್ದೇ ಅವರ ಸಾಧನೆಯ ಹಿಂದಿನ ರಹಸ್ಯ. ಅದುವರೆಗೆ Bb ಮಾದರಿಯ ಶೃತಿಗಳಿಂದ ಹಿಂದಿ ಹಾಡುಗಳು ಸಂಯೋಜನೆಗೊಳ್ಳುತ್ತಿದ್ದವು. ಅದಕ್ಕಿಂತ ಭಿನ್ನವಾಗಿ C ಮತ್ತು C# ಮಾದರಿಯ ಶೃತಿಗಳಲ್ಲಿ ಸಂಗೀತ ಸಂಯೋಜನೆಗೆ ಕೈ ಹಾಕಿದ್ದರು ಬರ್ಮನ್. ಆನಂತರ ತಮ್ಮದೇ ಆದ, D minor ಮಾದರಿಯ ಶೃತಿಗಳಲ್ಲಿ ಹಾಡುಗಳನ್ನು ಸಂಯೋಜಿಸಿ ತಮ್ಮದೇ ಆದ ಛಾಪು ಮೂಡಿಸಿದರಲ್ಲದೆ, ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದರು.
ಲತಾಜೀ ಅವರಿಗೆ ಹೆಸರು ತಂದ ಹಾಡು
ಅಮರ್ ಪ್ರೇಮ್ ಚಿತ್ರದಲ್ಲಿ ಆರ್.ಡಿ. ಬರ್ಮನ್ ಕಂಪೋಸ್ ಮಾಡಿದ 'ರೆಹನಾ ಭೀತಿ ಜಾಯೆ... ಶ್ಯಾಮ್ ನ ಆಯೇ' ಹಾಡು, ಭಾರತದ ಯಾವ ಸಂಗೀತ ನಿರ್ದೇಶಕನೂ ಕಲ್ಪಿಸಿಕೊಳ್ಳಲಾರದಷ್ಟು ಸಾಧ್ಯತೆಗಳನ್ನು ಸೃಷ್ಟಿಸಿತು. ಈ ಒಂದು ಹಾಡಿನಿಂದ ಹಿಂದೂಸ್ತಾನಿ ಹಾಗೂ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರೆಲ್ಲಾ ಬರ್ಮನ್ ಕಡೆ ತಿರುಗಿ ನೋಡುವಂತಾಯಿತು. ಅಷ್ಟೇ ಅಲ್ಲ, ಲತಾ ಮಂಗೇಶ್ಕರ್ ಅವರಿಗೂ ಈ ಹಾಡು ದೊಡ್ಡ ಹೆಸರು ತಂದುಕೊಟ್ಟಿತು.
ವಿವಿಧ ಭಾರತೀಯ ಚಿತ್ರರಂಗಗಳಲ್ಲಿ ಅನುರಣಿಸಿದ ಟ್ಯೂನ್ ಗಳು!
'ಆಂಧಿ' ಚಿತ್ರದ 'ತೇರೇ ಬಿನಾ ಜಿಂದಗಿ ಸೇ ಕೋಯಿ... ಶಿಕ್ ವಾ...ತೋ ನಹಿ' ಎಂಬ ಹಾಡಂತೂ ಭಾರತೀಯ ಚಿತ್ರರಂಗದ ನಾನಾ ಭಾಷಾ ಚಿತ್ರರಂಗಗಳಲ್ಲಿ ನಕಲಾಯಿತು. ಕನ್ನಡದಲ್ಲಿ ಕನಸಲೂ ನೀನೆ... ಮನಸಲೂ ನೀನೆ ಹಾಡು ಆಂಧಿ ಚಿತ್ರದ ಹಾಡಿನ ನಾಜೂಕು ನಕಲು. ಹೀಗೆ, ಬೇರೆ ಬೇರೆ ಭಾಷೆಗಳಲ್ಲಿ ಆ ಹಾಡು ಮೂಡಿಬಂದಿದೆ. ಮುಂದೆ ಇದೇ ಹಾಡನ್ನು ಬೇರೊಬ್ಬ ಸಂಗೀತ ನಿರ್ದೇಶಕನೊಬ್ಬ ಐಸೆ ದಿವಾನಗೀ... ದೇಖೀ ನಹೀ ಕಭೀ... ಎಂಬ ಹಾಡನ್ನು ದೀವಾನಾ ಚಿತ್ರಕ್ಕಾಗಿ ಕಂಪೋಸ್ ಮಾಡಿದ. ಹೀಗೆ, ಅವರ ಅನೇಕ ಟ್ಯೂನುಗಳು ಆಗ ಮಾತ್ರವಲ್ಲ, ವರ್ಷಗಳು ಉರುಳಿದ ನಂತರವೂ ಅನೇಕ ರೀತಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಕಂಡು ಮತ್ತೆ ಉದ್ಭವಿಸಿ ಬಂದಿದ್ದುಂಟು.