ಎಸ್ ಬಿ ಅಕೌಂಟ್ ಹಣ ಡ್ರಾ ನಿರ್ಬಂಧ ಆರ್ ಬಿಐನಿಂದ ಶೀಘ್ರವೇ ವಾಪಸ್
ನವದೆಹಲಿ, ಫೆಬ್ರವರಿ 3: ಉಳಿತಾಯ ಖಾತೆಗೆ ಸಂಬಂಧಿಸಿದಂತೆ ಹಣ ತೆಗೆದುಕೊಳ್ಳಲು ಸದ್ಯಕ್ಕೆ ಇರುವ ಎಲ್ಲ ನಿರ್ಬಂಧಗಳನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ ತೆಗೆದುಹಾಕಲಿದೆ. ಅಪನಗದೀಕರಣ ಘೋಷಣೆ ನಂತರದ ಎಲ್ಲ ಸಮಸ್ಯೆಗಳು ಮುಗಿದಿವೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಸದ್ಯಕ್ಕೆ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರುಪಾಯಿ ಮಾತ್ರ ತೆಗೆದುಕೊಳ್ಳಬಹುದಾಗಿದೆ. ಕಳೆದ ವಾರವಷ್ಟೇ ಚಾಲ್ತಿ ಖಾತೆದಾರರು ಎಟಿಎಂನಿಂದ ತೆಗೆದುಕೊಳ್ಳಬಹುದಾದ ಹಣದ ಮಿತಿಯನ್ನು ತೆಗೆಯಲಾಗಿದೆ. ಮೊದಲಿಗೆ ಚಾಲ್ತಿ ಖಾತೆದಾರರಿಗೆ ಆರ್ ಬಿಐ 50 ಸಾವಿರದ ಮಿತಿ ವಿಧಿಸಿತ್ತು. ಆ ನಂತರ ಅದನ್ನು ದಿನಕ್ಕೆ ಒಂದು ಲಕ್ಷಕ್ಕೆ ಏರಿಸಿತ್ತು.[ಶೀಘ್ರದಲ್ಲೇ ದೇಶದಲ್ಲಿ ಹೊಸ ರು.1000 ನೋಟು ಸಾಧ್ಯತೆ]
ಅಪನಗದೀಕರಣವಾದ ನೋಟುಗಳ ಪೈಕಿ ಶೇ 60ರಷ್ಟು ಅಂದರೆ 9.2 ಲಕ್ಷ ಕೋಟಿ ರುಪಾಯಿಯನ್ನು ಆರ್ ಬಿಐ ವಿತರಿಸಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಜನವರಿಯಲ್ಲಿ ಸಂಸದೀಯ ಸಮಿತಿ ಮುಂದೆ ಹೇಳಿದ್ದರು.ನಗದು ಹಣ ಪಡೆಯುವುದಕ್ಕೆ ಕಳೆದ ವರ್ಷ ನವೆಂಬರ್ 8ರಂದು ಮಿತಿ ವಿಧಿಸಲಾಗಿತ್ತು.
ಆ ನಂತರ ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ದೊಡ್ಡ ದೊಡ್ಡ ಸಾಲುಗಳ ಕಂಡುಬಂದಿದ್ದವು. ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ 86ರಷ್ಟು 500, 1000 ರುಪಾಯಿಗಳನ್ನು ಒಂದೇ ಸಲಕ್ಕೆ ವಾಪಸ್ ಪಡೆದಿದ್ದರಿಂದ ಇಂಥ ಸ್ಥಿತಿ ಏರ್ಪಟ್ಟಿತ್ತು.