ಚುನಾವಣೆಯ ಹೊಸ್ತಿಲಲ್ಲಿ ರಾಮಮಂದಿರ ಸುತ್ತುತ್ತಿರುವ ಬಿಜೆಪಿ ನಾಯಕರು
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ನಾಯಕರು ರಾಮ ಮಂದಿರ ಜಪ ಆರಂಭಿಸಿದ್ದಾರೆ. ಭವ್ಯ ರಾಮ ಮಂದಿರ ನಿರ್ಮಾಣವಾಗುವುದು ಖಂಡಿತ ಎಂದು ಪಕ್ಷದ ಹಿರಿಯ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ.
ಲಕ್ನೋ, ನವದೆಹಲಿ ಫೆ 6 (ಎಎನ್ಐ): ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಿಂದ ಹಿಡಿದು ಪಕ್ಷದ ನಾಯಕರು ರಾಮ ಮಂದಿರ ಜಪ ಆರಂಭಿಸಿದ್ದಾರೆ.
ಭಾರತದಲ್ಲಿ ರಾಮ ಮಂದಿರ ಯಾವಾಗ ನಿರ್ಮಾಣವಾಗುತ್ತದೆ ಎಂದು ಕರಾರುವಕ್ಕಾಗಿ ಹೇಳಲಾಗದಿದ್ದರೂ, ಭವ್ಯ ಮಂದಿರ ನಿರ್ಮಾಣವಾಗುವುದು ಖಂಡಿತ ಎಂದು ಪಕ್ಷದ ಹಿರಿಯ ಮುಖಂಡ ಗಿರಿರಾಜ್ ಸಿಂಗ್ ಹೇಳಿದ್ದಾರೆ. (ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕಷ್ಟ)
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು, ಭಾರತದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗದಿದ್ದಲ್ಲಿ ಇನ್ನೇನು ಪಾಕಿಸ್ತಾನದಲ್ಲಿ ಮಂದಿರ ನಿರ್ಮಾಣ ಮಾಡಲು ಸಾಧ್ಯವೇ ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿರುವ ಗೊಂದಲವನ್ನು ಕಾನೂನಿನ ಅಡಿಯಲಿ ಪರಿಹರಿಸಿ, ದೇಶದ ಕೋಟ್ಯಾಂತರ ಜನರ ಆಶೋತ್ತರದಂತೆ ದೇವಾಲಯ ನಿರ್ಮಿಸಲಾಗುವುದು ಎಂದು ಪಕ್ಷದ ಮತ್ತೊಬ್ಬ ನಾಯಕ ವಿನಯ್ ಕತಿಯಾರ್ ಹೇಳಿದ್ದಾರೆ.
2014ರ ಚುನಾವಣೆಯ ವೇಳೆ ರಾಮ ಮಂದಿರ ನಿರ್ಮಾಣ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು ಹಾಗಾಗಿ ಮಂದಿರ ನಿರ್ಮಾಣ ವಿಚಾರವನ್ನು ಮರು ಪರಾಮರ್ಶಿಸುವ ಅವಶ್ಯಕತೆಯಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ದಿಷ್ಟ ಕಾಲಮಿತಿಯಿಲ್ಲದೇ ನಿರ್ಮಿಸಲಾಗುವುದು ಎಂದು ಸುಬ್ರಮಣಿಯನ್ ಸ್ವಾಮಿ ಕೂಡಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಂದಿರ ನಿರ್ಮಾಣದ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಏಳು ಹಂತದ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯ ಮೊದಲ ಹಂತದ ಚುನಾವಣೆ ಶನಿವಾರ (ಫೆ 11) ರಂದು ನಡೆಯಲಿದೆ.
ಕೊನೇ ಮಾತು: ಚುನಾವಣೆಯ ವೇಳೆಯಲ್ಲೇ ಬಿಜೆಪಿ ನಾಯಕರಿಗೆ ರಾಮ ಮಂದಿರ ನಿರ್ಮಾಣದ ಆಲೋಚನೆ ಯಾಕೆ ಬರುತ್ತೋ ಅನ್ನುವುದಕ್ಕೆ ಪ್ರಭು ಶ್ರೀರಾಮಚಂದ್ರನೇ ಉತ್ತರಿಸಬೇಕು.