ರಾಮ್ ನಾಥ್ ಕೋವಿಂದ್ vs ಮೀರಾ ಕುಮಾರ್: ಯಾರ ಬೆಂಬಲ ಯಾರಿಗೆ?
ನವದೆಹಲಿ, ಜೂನ್ 23: ಅಂತೂ ರಾಷ್ಟ್ರಪತಿ ಚುನಾವಣೆಗೆ ಇದೀಗ ಒಂದು ಕಳೆ ಬಂದಿದೆ. ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ತನ್ನ ಅಭ್ಯರ್ಥಿಯನ್ನಾಗಿ ಬಿಹಾರದ ರಾಜ್ಯಪಾಲರಾಗಿದ್ದ ರಾಮ್ ನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿದ್ದರೆ, ಯುಪಿಎ ತನ್ನ ಅಭ್ಯರ್ಥಿಯನ್ನಾಗಿ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದೀಗ ಯಾರಿಗೆ ಯಾರ ಬೆಂಬಲ ಎಂಬುದೇ ಕುತೂಲದ ವಿಷಯವಾಗಿದ್ದು, ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಕುತೂಹಲವನ್ನು ದುಪ್ಪಟ್ಟಾಗಿಸಿದೆ.
ಮೀರಾ ಕುಮಾರ್ ಬಗ್ಗೆ ನೀವು ತಿಳಿಯಲೇಬೇಕಾದ 5 ವಿಚಾರ
ಮೊದಲಿನಿಂದಲೂ ದಲಿತ ವಿರೋಧಿ ಎಂಬ ಹಣೆಪಟ್ಟಿಕಟ್ಟಿಕೊಂದಿದ್ದ ಬಿಜೆಪಿ, ಆ ಕಳಂಕವನ್ನು ಬಿಚ್ಚಿಕೊಳ್ಳಲು ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಉತ್ತಮ ಆಡಳಿತಗಾರರೂ, ಶುದ್ಧ ಹಸ್ತರೂ, ಮುತ್ಸದ್ಧಿಯೂ ಆದ ಬಿಹಾರದ ಮಾಜಿ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದ್ದಂತೆಯೇ ಅತ್ತ ಕಾಂಗ್ರೆಸ್ಸಿನಲ್ಲಿಯೂ ಲೆಕ್ಕಾಚಾರ ಶುರುವಾಗಿತ್ತು.
ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀರಾ ಕುಮಾರ್
ರಾಮ್ ನಾಥ್ ಕೋವಿಂದ್ ರನ್ನು ಬೆಂಬಲಿಸದಿದ್ದರೆ, ಕಾಂಗ್ರೆಸ್ ಮತ್ತು ವಿಪಕ್ಷಗಳು ದಲಿತ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ ಎಂಬ ಆರೋಪ ಎದುರಿಸಬೇಕಾಗುತ್ತದೆ. ಅದಕ್ಕೆಂದೇ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ವಿಪಕ್ಷಗಳೆಲ್ಲ ಸೇರಿ ತಾವೂ ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ನಿರ್ಧಾರ ಮಾಡಿದವು.
ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಗೆ ಶುಭ ಹಾರೈಸಿದ ಪೇಜಾವರ ಶ್ರೀ
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆ ಪಡೆದಿದ್ದ ಮೀರಾ ಅವರಿಗೆ ತಂದೆ ಜಗಜೀವನ್ ರಾಮ್ ಅವರ ಹೆಸರಿನ ಬಲವೂ ಇರುವುದರಿಂದ ಕೋವಿಂದ್ ಅವರನ್ನು ಎದುರಿಸಲು ಅವರೇ ಸಮರ್ಥ ವ್ಯಕ್ತಿ ಎಂಬ ನಿರ್ಧಾರಕ್ಕೆ ವಿಪಕ್ಷಗಳು ಬಂದು, ಅವರನ್ನೇ ಕಣಕ್ಕಿಳಿಸಿವೆ.
ಇದೀಗ ಯಾರ ಬೆಂಬಲ ಯಾರಿಗೆ ಎಂಬುದೇ ಕುತೂಹಲದ ವಿಷಯ.
ನಿತೀಶ್ ನಡೆಯಲ್ಲಿ ವ್ಯತ್ಯಾಸವಿಲ್ಲ!
ರಾಮ್ ನಾಥ್ ಕೋವಿಂದ್ ತನ್ನ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆಯೇ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಬೆಂಬಲ ಎನ್ ಡಿಎ ಗೇ ಎದ್ದಿದ್ದರು. ಯುಪಿಎ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಮೇಲೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ನಿತೀಶ್, ಜೆಡಿಯು ಬೆಂಬಲ ಎನ್ ಡಿಎ ಅಭ್ಯರ್ಥಿಗೇ ಎಂದು ಪುನರುಚ್ಚರಿಸಿದ್ದಾರೆ.
ಮಾಯಾವತಿ ನಡೆ ಮೀರಾ ಕಡೆ
ಭುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ನಾಯಕಿ ಮಾಯಾವತಿ ತಮ್ಮ ಬೆಂಬಲ ರಾಷ್ಟ್ರಪತಿ ಸ್ಥಾನಕ್ಕೆ ಅತ್ಯಂತ ಅರ್ಹ ಅಭ್ಯರ್ಥಿ ಎನ್ನಿಸಿರುವ ಮೀರಾ ಕುಮಾರ್ ಗೆ ಎಂದಿದ್ದಾರೆ.
ಎಸ್ಪಿ ಬೆಂಬಲ ಮೀರಾಗೆ
ರಾಮ್ ನಾಥ್ ಕೋವಿಂದ್ ಸಮರ್ಥ ಅಭ್ಯರ್ಥಿಯೇ. ಆದರೆ ಮೀರಾ ಕುಮಾರ್ ಅವರಿಗಿಂಥ ಸಮರ್ಥರು ಎಂದಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ತಾವು ಮೀರಾ ಕುಮಾರ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಲಾಲೂ ಬೆಂಬಲವೂ ಮೀರಾಗೆ
ನಿತೀಶ್ ಕುಮಾರ್ ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸಿರುವುದರ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ಲಾಲೂ ಪ್ರಸಾದ್ ಯಾದವ್, ತಾನು ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎನ್ನುವ ಮೂಲಕ, ತಮ್ಮ ಬೆಂಬಲ ಮೀರಾ ಕುಮಾರ್ ಗೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪಿಡಿಪಿ, ಶಿವಸೇನೆ ಬೆಂಬಲ ಎನ್ ಡಿಎಗೆ
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ತನ್ನ ಬೆಂಬಲ ಎನ್ ಡಿಎ ಅಭ್ಯರ್ಥಿಗೆ ಎಂದಿದೆ. ರಾಷ್ಟ್ರಪತಿ ಚಿನಾವಣೆಗೆ ಸಂಬಂಧಿಸಿದಂತೆ ತಾನು ಸೂಚಿಸಿದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಖ್ಯಾತೆ ತೆಗೆದಿದ್ದ ಶಿವಸೇನೆಯೂ ಈಕ ಕೋವಿಂದ್ ರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದೆ.
ಎಐಎಡಿಎಂಕೆ ಬೆಂಬಲ ಕೋವಿಂದ್ ಗೆ
ತಮಿಳು ನಾಡಿನ ಎಐಎಡಿಎಂಕೆ ಪಕ್ಷದ ನಾಯಕರೂ ತಮ್ಮ ಬೆಂಬಲ ಎನ್ ಡಿಎ ಗೆ ಎಂದಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ದಿನೇ ದಿನೇ ರಾಜಕೀಯ ಪಕ್ಷಗಳ ವರಸೆ ಬಣ್ಣಕಟ್ಟಿಕೊಳ್ಳುತ್ತಿದ್ದು, ದೇಶದ ಮೊದಲ ಪ್ರಜೆಯ ಸ್ಥಾನ ಯಾರ ಪಾಲಾಗಲಿದೆ ಎಂಬುದು ಜುಲೈ 20 ರಂದು ಹೊರಬೀಳಲಿರುವ ಫಲಿತಾಂಶದಿಂದ ತಿಳಿಯಲಿದೆ.