ಬಿಹಾರ ರಾಜ್ಯಪಾಲ ಸ್ಥಾನಕ್ಕೆ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ರಾಜೀನಾಮೆ
ನವದೆಹಲಿ, ಜೂನ್ 20: ಬಿಹಾರ ರಾಜ್ಯಪಾಲರಾಗಿದ್ದ ರಾಮ್ ನಾಥ್ ಕೋವಿಂದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಎನ್ ಡಿಎಯಿಂದ ರಾಷ್ತ್ರಪತಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಅವರು ನೀಡಿದ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸ್ವೀಕರಿಸಿದ್ದಾರೆ.
ಪಶ್ಚಿಮ ಬಂಗಾಲದ ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿ ಅವರಿಗೆ ಬಿಹಾರ ರಾಜ್ಯದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಜೂನ್ ಹತ್ತೊಂಬತ್ತರಂದು ಬಿಜೆಪಿಯು ಕೋವಿಂದ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಎಪ್ಪತ್ತೊಂದು ವರ್ಷದ ರಾಮ್ ನಾಥ್ ಕೋವಿಂದ್ ದಲಿತ ನಾಯಕರು ಹಾಗೂ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದವರು.
ರಾಮ್ ನಾಥ್ ಕೋವಿಂದ್ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ
ತುಂಬ ಅಚ್ಚರಿಯ ರೀತಿಯಲ್ಲಿ ಬಿಜೆಪಿಯಿಂದ ರಾಮ್ ನಾಥ್ ಕೋವಿಂದ್ ಅವರ ಹೆಸರು ಘೋಷಣೆಯಾಯಿತು. ನಾನಾ ಹೆಸರುಗಳು ಹರಿದಾಡಿದ್ದವು. ಆದರೆ ರಾಮ್ ನಾಥ್ ಹೆಸರು ಎಲ್ಲೂ ಕೇಳಿಬಂದಿರಲಿಲ್ಲ. ರಾಷ್ಟ್ರಪತಿ ಸ್ಥಾನಕ್ಕೆ ಜುಲೈ ಹದಿನೇಳರಂದು ಚುನಾವಣೆ ನಿಗದಿಯಾಗಿದೆ. ಜುಲೈ ಇಪ್ಪತ್ನಾಲ್ಕನೇ ತಾರೀಕಿಗೆ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ.