ಆ ಕುಟುಂಬದಲ್ಲಿ ರಾಜೀವ್ ಗಾಂಧಿ ಒಬ್ರೇ ಒಳ್ಳೆ ಮನುಷ್ಯ: ಸ್ವಾಮಿ
ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರಿಗೆ ಯಾವ ಕ್ಷಣದಲ್ಲಿ ಅದ್ಯಾರ ಮೇಲೆ ಸಿಟ್ಟೋ, ಅದ್ಯಾರ ಮೇಲೆ ಪ್ರೀತಿಯೋ ತಿಳಿಯೋದು ಕಷ್ಟ. ದಿಢೀರ್ ಅಂತ ರಾಜೀವ್ ಗಾಂಧಿ ಅವರನ್ನು ಹೊಗಳಿರುವ ಸ್ವಾಮಿ, ಅದಕ್ಕಾಗಿ ನೀಡಿದ ಕಾರಣ ಗೊತ್ತಾ
ಪಾಟ್ನಾ, ಮಾರ್ಚ್ 27: ನೆಹರು-ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಒಬ್ಬರೇ ಒಳ್ಳೆ ಮನುಷ್ಯ. ಮತ್ತು ಹಿಂದೂಗಳಿಗಾಗಿ ಕೊಡುಗೆ ನೀಡಿದವರು ಎಂದು ರಾಜ್ಯಸಭಾ ಸದಸ್ಯ-ಬಿಜೆಪಿ ಮುಖಂದ ಸುಬ್ರಮಣಿಯನ್ ಸ್ವಾಮಿ ಹೊಗಳಿದ್ದಾರೆ. ಪ್ರಸಿದ್ಧ ಪೌರಾಣಿಕ ಧಾರಾವಾಹಿ ರಾಮಾಯಣ ದೂರದರ್ಶನದಲ್ಲಿ ಪ್ರಸಾರ ಮಾಡಲು ಅವಕಾಶ ಮಾಡಿಕೊಟ್ಟರು. ಆ ನಂತರ ಸಾರ್ವಜನಿಕರು ಪ್ರಾರ್ಥನೆ ಸಲ್ಲಿಸಲು ಆಯೋಧ್ಯಾ ರಾಮ ದೇವಸ್ಥಾನವನ್ನು ತೆರೆದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ವಿರೋಧದ ಮಧ್ಯೆಯೂ ರಾಜೀವ್ ದೂರದರ್ಶನದಲ್ಲಿ ರಾಮಾಯಣ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿದ್ದರು ಎಂದಿದ್ದಾರೆ. ಅಯೋಧ್ಯಾ ರಾಮಮಂದಿರ ವಿವಾದವನ್ನು ಕೋರ್ಟ್ ನ ಹೊರಗೆ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿದ ಸಲಹೆ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಆಶಾಭಾವ ವ್ಯಕ್ತಪಡಿಸಿದ್ದಾರೆ.[ಧೈರ್ಯವಿದ್ದರೆ ಈಗ ಇರುವ ರಾಮ ಮಂದಿರ ಕೆಡವಿ: ಸುಬ್ರಮಣಿಯನ್ ಸ್ವಾಮಿ]
ರಾಮ ಮಂದಿರ ನಿರ್ಮಾಣದ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕಳೆದ ವರ್ಷ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದ ಸ್ವಾಮಿ, ಎರಡೂ ಕಡೆಯವರು ಒಂದೆಡೆ ಕೂತು ಸಮಸ್ಯೆ ಬಗೆಹರಿಸುವುದು ಕಷ್ಟ. ಆದ್ದರಿಂದ ನ್ಯಾಯಾಂಗದ ಮಧ್ಯಪ್ರವೇಶ ಅಗತ್ಯ ಎಂದಿದ್ದರು.[ಟಿಡಿಕೆ ಬುದ್ಧು ಪಿಸಿ ಬಿಸಿ ಕೂಡ ಜೈಲು ಸೇರಬೇಕು : ಸ್ವಾಮಿ]
ಇನ್ನು ಕಾಂಗ್ರೆಸ್ ಸ್ಥಿತಿಯ ಬಗ್ಗೆ ಕುಟುಕಿರುವ ಸ್ವಾಮಿ, "ಕಾಂಗ್ರೆಸ್ ಪಕ್ಷ ಅತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದೆ. ನಾವು ಅದರ ಅಂತ್ಯಕ್ರಿಯೆ ಮಾಡುವುದಕ್ಕೆ ಅಂತ ಇದ್ದೀವಿ" ಎಂದಿದ್ದಾರೆ.