ರಾಜೀವ್ ಹಂತಕರ ಬಿಡುಗಡೆ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ!
ನವದೆಹಲಿ, ಡಿ.2: ಮಾಜಿ ಪ್ರಧಾನಿ ರಾಜೀವ್ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡು ಸರ್ಕಾರಕ್ಕೆ ಇಲ್ಲ. ಇದನ್ನು ಕೇಂದ್ರ ಸರ್ಕಾರವೇ ತೀರ್ಮಾನಿಸಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ರಾಜೀವ್ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿತ್ತು. ಸುಪ್ರೀಂಕೋರ್ಟ್ ಬುಧವಾರ ನೀಡಿರುವ ತೀರ್ಪಿನಿಂದ ರಾಜೀವ್ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಮುಂದಾಗಿದ್ದ ತಮಿಳುನಾಡು ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ.[ರಾಜೀವ್ ಗಾಂಧಿ ಹಂತಕರಿಗೆ ಗಲ್ಲುಶಿಕ್ಷೆ ಇಲ್ಲ : ಸುಪ್ರೀಂಕೋರ್ಟ್]
ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ಎಫ್.ಎಂ.ಐ.ಎಲ್.ಖಲೀಫುಲ್ಲಾ, ಪಿನಾಕಿ ಚಂದ್ರಾಗೋಷ್, ಅಭಯ್ಮನೋಹರ್ ಸಪ್ರೆ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ಐದು ಮಂದಿ ಸದಸ್ಯರ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.
ರಾಜೀವ್ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕೆಂದು ಹಿರಿಯ ವಕೀಲ ರಾಮ್ಜೇಠ್ಮಲಾನಿ, ರಾಕೇಶ್ ದ್ವಿವೇದಿ ಹಾಗೂ ವಿ.ಶ್ರೀಧರನ್ ಅವರು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ರಾಜೀವ್ಗಾಂಧಿ ಕೊಲೆ ಪ್ರಕರಣವನ್ನು ಕೇಂದ್ರದ ವ್ಯಾಪ್ತಿಗೆ ಬರುವ ಸಿಬಿಐ ತನಿಖೆ ನಡೆಸಿ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಹೀಗಾಗಿ ಆರೋಪಿಗಳನ್ನು ಬಿಡುಗಡೆ ಮಾಡುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರದ ತನಿಖಾ ಸಂಸ್ಥೆ ತನಿಖೆ ನಡೆಸಿರುವಾಗ ರಾಜ್ಯ ಸರ್ಕಾರ ಹೇಗೆ ತೀರ್ಮಾನ ಮಾಡುತ್ತದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.[ರಾಜೀವ್ ಗಾಂಧಿ ಹಂತಕಿಗೆ ಬಿಡುಗಡೆ ಭಾಗ್ಯವಿಲ್ಲ]
ಈ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಗನ್, ಸಂತನ್, ಅರಿವು ಎಂಬ ಆರೋಪಿಗಳಿಗೆ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಟು ಮಾಡಲಾಗಿದೆ.
1991 ಮೇ 21ರಂದು ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಅಂದಿನ ಪ್ರಧಾನಿ ರಾಜೀವ್ಗಾಂಧಿ ಅವರನ್ನು ಎಲ್ಟಿಟಿಇ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಈ ಏಳು ಆರೋಪಿಗಳು ಮಾನವ ಬಾಂಬ್ ಬಳಸಿ ಹತ್ಯೆ ಮಾಡಿದ್ದರು.
ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ನಳಿನಿ, ರಾಬರ್ಟ್ಪಿಯೋಸ್, ಜಯಕುಮಾರ್ ಮತ್ತು ರವಿಚಂದ್ರನ್ಗೆ ತಮಿಳುನಾಡು ಸರ್ಕಾರ ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡಲು ಮುಂದಾಗಿತ್ತು.ಈ ಆರೋಪಿಗಳು ಚೆನ್ನೈ ಮತ್ತು ವೆಲ್ಲೂರು ಜೈಲಿನಲ್ಲಿದ್ದಾರೆ.(ಒನ್ ಇಂಡಿಯಾ ಸುದ್ದಿ)