ನರೇಂದ್ರ ಮೋದಿ 'ಬಚ್ಚಲು' ಮಾತು : ಸೇರಿಗೆ ಸವ್ವಾಸೇರು
ನರೇಂದ್ರ ಮೋದಿ ಅವರು ಮನಮೋಹನ ಸಿಂಗ್ ಅವರ ಕ್ಷಮೆ ಕೇಳದಿದ್ದರೆ ರಾಜ್ಯಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಯಾರು ಏನು ಹೇಳುತ್ತಿದ್ದಾರೆಂದು ನೋಡೋಣ ಬನ್ನಿ.
ನವದೆಹಲಿ, ಫೆಬ್ರವರಿ 09 : "ಬಚ್ಚಲು ಮನೆಯಲ್ಲಿ ರೇನ್ ಕೋಟ್ ಹಾಕಿಕೊಂಡು ಸ್ನಾನ ಮಾಡುವುದು ಹೇಗೆ ಅಂತ ಸಿಂಗ್ಜಿಗೆ ಅವರಿಗೆ ಚೆನ್ನಾಗಿ ಗೊತ್ತು" ಎಂಬ ಮೋದಿಯವರ ಮಾತು, ಆಡಳಿತ ಪಕ್ಷ ಮತ್ತು ವಿರೋಧಿಗಳ ನಡುವೆ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಉದ್ದೇಶಿಸಿ ರಾಜ್ಯಸಭೆಯಲ್ಲಿ ಆಡಿದ ಮಾತು ಸಭ್ಯತೆಯ ಗೆರೆ ಮೀರಿದೆ ಎಂದು ಒಬ್ಬರು ಟೀಕಾಪ್ರಹಾರ ಮಾಡುತ್ತಿದ್ದರೆ, ಮತ್ತೊಬ್ಬರು ಯಾಕೆ ಹಿಂದೆ ಸೋನಿಯಾ ಆಡಿದ್ದ ಮಾತನ್ನು ಮರೆತ್ರಾ ಎಂದು ಬಾಯಿಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ.
ವಿರೋಧ ಪಕ್ಷಗಳಿಗೆ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮಾತಿನಿಂದ ತಿವಿಯಲು ಒಂದು ಅಸ್ತ್ರ ಸಿಕ್ಕಂತಾದರೆ, ಸೇರಿಗೆ ಸವ್ವಾಸೇರು ಎಂಬಂತೆ ಬಿಜೆಪಿ ನಾಯಕರು ಕೂಡ ಹಳೆ ಕಡತಗಳನ್ನು ಒಂದೊಂದಾಗಿ ಹೊರತೆಗೆದು, 'ಈಗೇನ್ ಹೇಳ್ತೀರಿ' ಎಂದು ಕೇಳುತ್ತಿದ್ದಾರೆ. [ವಿರೋಧಿಗಳನ್ನು ರೊಚ್ಚಿಗೆಬ್ಬಿಸಿದ ಮೋದಿಯ 'ಭೂಕಂಪ'ದ ಮಾತು!]
ನರೇಂದ್ರ ಮೋದಿ ಅವರು ಮನಮೋಹನ ಸಿಂಗ್ ಅವರ ಕ್ಷಮೆ ಕೇಳದಿದ್ದರೆ ರಾಜ್ಯಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಯಾರು ಏನು ಹೇಳುತ್ತಿದ್ದಾರೆಂದು ನೋಡೋಣ ಬನ್ನಿ. [ರೈನ್ ಕೋಟ್ ಹಾಕ್ಕೊಂಡು ಸ್ನಾನ ಮಾಡೋದು ಸಿಂಗ್ ಗೆ ಗೊತ್ತು: ಮೋದಿ]
ರಾಬರ್ಟ್ ವದ್ರಾ, ಸೋನಿಯಾ ಅಳಿಯ
ನರೇಂದ್ರ ಮೋದಿಯವರ 'ರೇನ್ ಕೋಟ್' ಮಾತು ಅತ್ಯಂತ ಕೀಳುಮಟ್ಟದಿಂದ ಕೂಡಿದ್ದು, ಈ ಮಾತು ಇಡೀ ದೇಶ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಮನಮೋಹನ ಸಿಂಗ್ ಅವರಂಥ ಹಿರಿಯ ಜೀವ ಇಂಥ ಮಾತನ್ನು ಕೇಳುವಂತಾಗಿದ್ದು ನಿಜಕ್ಕೂ ಅವಮಾನಕರ.
ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಹಿಂದೆ ಮೋದಿಯವರ ಬಗ್ಗೆ ನಿಮ್ಮ ತಾಯಿ (ಸೋನಿಯಾ) ಏನು ಹೇಳಿದ್ದರು ಅಂತ ಒಮ್ಮೆ ಜ್ಞಾಪಿಸಿಕೊಳ್ಳಿ ರಾಹುಲ್ ಬಾಬಾ. ನರೇಂದ್ರ ಮೋದಿ ಅವರನ್ನು ಸೋನಿಯಾ ಅವರು ಮೌತ್ ಕಾ ಸೌದಾಗರ್ ಎಂದು ಕರೆದಿದ್ದರು, ನೆನಪಿದೆಯಾ?
ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ನರೇಂದ್ರ ಮೋದಿ ಅವರು ಮನಮೋಹನ ಸಿಂಗ್ ಅವರ ಬಗ್ಗೆ ಕೀಳಾಗಿ ಮಾತನಾಡಿ ಸಂಸತ್ತು ಮತ್ತು ದೇಶದ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಅವರು ಸಿಂಗ್ ಅವರನ್ನು ಅವಹೇಳನ ಮಾಡುತ್ತ ತಮ್ಮನ್ನು ತಾವೇ ಅವಹೇಳನ ಮಾಡಿಕೊಂಡಿದ್ದಾರೆ. ಇದು ನಡೆದಿದ್ದು ನಿಜಕ್ಕೂ ದುಃಖಕರ ಮತ್ತು ನಾಚಿಕೆಗೇಡು.
ವೆಂಕಯ್ಯ ನಾಯ್ಡು, ಬಿಜೆಪಿ ನಾಯಕ
ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಅವರು (ಕಾಂಗ್ರೆಸ್ಸಿಗರು) ಸದನವನ್ನು ಹಲವಾರು ಬಾರಿ ಅಡ್ಡಿಪಡಿಸಿದ್ದಾರೆ. ಕ್ಷಮೆ ಕೇಳಬೇಕಾಗಿರುವವರು ನರೇಂದ್ರ ಮೋದಿ ಅವರಲ್ಲ, ಕ್ಷಮೆ ಕೇಳಬೇಕಾದವರು ಕಾಂಗ್ರೆಸ್ಸಿಗರು.
ಅಕ್ಬರುದ್ದಿನ್ ಓವೈಸಿ, ಮುಸ್ಲಿಂ ಮುಖಂಡ
ಬಚ್ಚಲುಮನೆಯಲ್ಲಿ ಮನಮೋಹನ ಸಿಂಗ್ ಅವರು ರೇನ್ ಕೋಟ್ ಹಾಕಿಕೊಂಡಿದ್ದರೆ, ಗುಜರಾತಿನಲ್ಲಿ ಎಹಸಾನ್ ಜಾಫ್ರಿ ಮತ್ತು ಸಹಚರರು ಹತ್ಯೆಗೀಡಾಗಿದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಏನು ಧರಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಧುರೀಣ
ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ವಿರುದ್ಧ ಬಳಸಿದ ಭಾಷೆ ನಿಜಕ್ಕೂ ದುರಾದೃಷ್ಟಕರ. ಅವರು ಈ ಮಾತನ್ನು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಬೇರೆಯವರನ್ನು ಕೂಡ ಸಂಪರ್ಕಿಸುತ್ತೇವೆ. ಮೋದಿಯವರು ಈ ರೀತಿ ಹೇಳಿದ್ದಕ್ಕೆ ಕ್ಷಮೆ ಕೇಳಲೇಬೇಕು.
ಡಾ. ಮನಮೋಹನ ಸಿಂಗ್, ಮಾಜಿ ಪ್ರಧಾನಿ
ನಾನು ಮೋದಿ ಅವರ ಆಡಿದ ನುಡಿಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದಿರುವ ಮನಮೋಹನ ಸಿಂಗ್ ಅವರು ಮತ್ತೆ ಮೌನಕ್ಕೆ ಶರಣಾಗಿದ್ದಾರೆ.