ದೇಶಕ್ಕೆ ಇನ್ಮುಂದೆ ಭೂಕಂಪದ ಭಯವಿಲ್ಲ: ಮೋದಿ, ರಾಹುಲ್ ವಾಕ್ಸಮರ
ಗುಜರಾತ್ ಸಿಎಂ ಆಗಿದ್ದಾಗ ಮೋದಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನುವ ಸಂಬಂಧ ರಾಹುಲ್ ಗಾಂಧಿ ದಾಖಲೆ ಬಿಡುಗಡೆ. ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ವಾಕ್ಸಮರ.
ಲೋಕಸಭಾ ಚುನಾವಣೆಯ ವೇಳೆ ಸಹರಾ ಗ್ರೂಪ್ ಆಫ್ ಕಂಪೆನೀಸ್ ನಿಂದ ನರೇಂದ್ರ ಮೋದಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನುವ ಹೇಳಿಕೆ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ (ಡಿ 22) ಈ ಸಂಬಂಧ ಟ್ವಿಟ್ಟರ್ ನಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ದೇಶದ ಯುವ ಮುಖಂಡರೊಬ್ಬರು ಭಾಷಣ ಮಾಡಲು ಕಲಿಯುತ್ತಿದ್ದಾರೆ, ಇದೊಂದು ಒಳ್ಳೆ ಸುದ್ದಿ ಎಂದು ವ್ಯಂಗ್ಯವಾಡಿದ್ದಾರೆ. (ನ.9ರಿಂದ ಡಿ.19ರವರೆಗೆ ಸಿಕ್ಕಿದ್ದು 3,300 ಕೋಟಿ ಕಪ್ಪು ಹಣ)
ಇದೊಂದು ಆಧಾರರಹಿತ ದಾಖಲೆ ಎಂದು ವಿಚಾರಣೆಗೆ ತಿರಸ್ಕರಿಸಲ್ಪಟ್ಟಿದ್ದ ದಾಖಲೆಗಳನ್ನು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, ನೀವೆಷ್ಟೇ ವ್ಯಂಗ್ಯವಾಡಿ, ನಾನು ಬಿಡುಗಡೆ ಮಾಡಿದ ದಾಖಲೆ ಬಗ್ಗೆ ಏನಂತೀರಿ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ.
ತಾವು ಪ್ರತಿನಿಧಿಸುತ್ತಿರುವ ವಾರಣಾಸಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷರು ಮಾತನಾಡಲು ಆರಂಭಿಸಿದ್ದರಿಂದ ಇನ್ನು ಭೂಕಂಪವಾಗುವ ಸಾಧ್ಯತೆಯಿಲ್ಲ ಎಂದು ತಮಾಷೆಯಾಡಿದ್ದಾರೆ.
ಉತ್ತರಪ್ರದೇಶದ ಬಹ್ರೇಚ್ ಮತ್ತು ಮೆಹ್ಸಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಗ್ರೂಪ್ ನೀಡಿದ 10 ಪಾಕೇಟ್ ನಲ್ಲಿ ಏನಿತ್ತು ಎಂದು ದೇಶಕ್ಕೆ ಉತ್ತರ ಕೊಡಿ ಪ್ರಧಾನಮಂತ್ರಿಗಳೇ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ.
ಮೋದಿ Vs ರಾಹುಲ್ ಗಾಂಧಿ, ಕುತೂಹಲಕಾರಿ ವಾಕ್ಸಮರದ ಹೈಲೆಟ್ಸ್ ಮುಂದೆ ಓದಿ..
ಸತ್ಯದ ಕೆಲಸಕ್ಕೆ ದೇವರ ಇದ್ದಾರೆ
ವಾರಣಾಸಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಮೋದಿ, ಸತ್ಯದ ಕೆಲಸಕ್ಕೆ ದೇವರ ಆಶೀರ್ವಾದ ಇದ್ದೇ ಇರುತ್ತೆ. ಜನ ಸೇವೆಯೇ ಜನಾರ್ಧನನ ಸೇವೆ ಎಂದು ರಾಜಕೀಯ ಮಾಡಿದವನು ನಾನು, ಹಾಗಾಗಿ ನಾವು ಮಾಡುವ ಕೆಲಸಕ್ಕೆ ನಿಮ್ಮ ಸಹಕಾರ ಇದ್ದೇ ಇರುತ್ತೆ ಎಂದು ನಂಬಿದ್ದೇನೆ - ಮೋದಿ.
ದಾಖಲೆ ಬಿಡುಗಡೆ
ಟ್ವಿಟ್ಟರ್ ನಲ್ಲಿ ಮತ್ತು ಉತ್ತರಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದಾಖಲೆ ಬಿಡುಗಡೆ ಮಾಡಿದ ರಾಹುಲ್, ಆದಾಯ ತೆರಿಗೆ ಇಲಾಖೆಯ ದಾಳಿಯ ವೇಳೆ ಬಿಡುಗಡೆಯಾದ ಮಾಹಿತಿ ಪ್ರಕಾರ, ಮೋದಿಗೆ 30.10.13ರಿಂದ 22.02.14ರವರೆಗಿನ ಅವಧಿಯಲ್ಲಿ, ಹತ್ತು ಪ್ಯಾಕೆಟಿನಲ್ಲಿ ಸುಮಾರು 40.1 ಕೋಟಿ ರೂಪಾಯಿಗೂ ಅಧಿಕ ಮೊತ್ತ ಪಾವತಿಯಾಗಿದೆ ಎಂದು ಆರೋಪಿಸಿದ್ದಾರೆ.
ನನ್ನ ಪ್ರಶ್ನೆಗೆ ಉತ್ತರಿಸಿ
ಮೋದಿಜೀ.. ನೀವು ನನ್ನ ಬಗ್ಗೆ ಲೇವಡಿ ಮಾಡಿದರೆ ನಾನು ಸುಮ್ಮನಿರುವವನಲ್ಲ.. ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುವ ನೀವು, ನಾನು ಬಿಡುಗಡೆ ಮಾಡಿರುವ ದಾಖಲೆಯ ಬಗ್ಗೆ ಉತ್ತರ ನೀಡಿ. ನಿಮ್ಮದೇ ಪಕ್ಷದಲ್ಲಿರುವ ಭ್ರಷ್ಟರ ಬಗ್ಗೆ ಮಾತನಾಡಿ ಎಂದು ಸಾರ್ವಜನಿಕ ಸಭೆಯಲ್ಲಿ ರಾಹುಲ್, ಮೋದಿ ಕಾಲೆಳಿದಿದ್ದಾರೆ.
ಪಿಎಂ ಮೋದಿ ತಿರುಗೇಟು
ಮನಮೋಹನ್ ಸಿಂಗ್ ಅವರನ್ನು ದೇಶದ ಹಿಂದಿನ ಪಿಎಂ ಎಂದು ತಿಳಿದುಕೊಂಡವರು ಕಮ್ಮಿ, ಅವರೊಬ್ಬ ಅರ್ಥಶಾಸ್ತ್ರಜ್ಞರಾಗಿದ್ದವರು. ದೇಶದ 50 ಪ್ರತಿಶತ ಜನ ಇನ್ನೂ ಬ್ಯಾಂಕಿಂಗ್ ಬಗ್ಗೆ ಅರಿವು ಇಲ್ಲದವರು ಎಂದಿದ್ದಾರೆ. ಇನ್ನು ಚಿದಂಬರಂ ದೇಶದ ಬಹುಪಾಲು ಪ್ರದೇಶಗಳಲ್ಲಿ ಇನ್ನೂ ವಿದ್ಯುತ್ ಇಲ್ಲಾ ಎಂದಿದ್ದಾರೆ. ದೇಶವನ್ನು ಇಷ್ಟು ವರ್ಷ ಆಳಿದವರು, ನನ್ನ ಬಗ್ಗೆ ಹೇಳುತ್ತಿದ್ದಾರೋ ಅಥವಾ ಅವರ ಇಷ್ಟು ವರ್ಷದ ತಮ್ಮ ರಾಜ್ಯಭಾರವನ್ನು ಟೀಕಿಸುತ್ತಿದ್ದಾರೋ - ನರೇಂದ್ರ ಮೋದಿ.
ದೇಶ ಆಳಿದವರು ಯಾರು
ದೇಶದ ಶೇ.60ರಷ್ಟು ಜನ ಅವಿದ್ಯಾವಂತರು ಎಂದು ರಾಹುಲ್ ಹೇಳುತ್ತಾರೆ, ಇದಕ್ಕೆ ಯಾರು ಕಾರಣ? ಎರಡುವರೆ ವರ್ಷದಿಂದ ಪ್ರಧಾನಿಯಾಗಿರುವ ನಾನು ಕಾರಣನೋ ಅಥವಾ ದೇಶವನ್ನು ಇಷ್ಟು ವರ್ಷ ಲೂಠಿ ಮಾಡಿದ ನೀವು ಕಾರಣನೋ, ಪುಣ್ಯಕ್ಕೆ ರಾಹುಲ್ ಮಾತನಾಡಲು ಕಲಿಯುತ್ತಿರುವುದರಿಂದ ನಮ್ಮ ದೇಶಕ್ಕೆ ಭೂಕಂಪದ ಸಾಧ್ಯತೆ ಕಮ್ಮಿ - ಪಿಎಂ ಮೋದಿ.
ಆನ್ಲೈಲ್ ವ್ಯವಹಾರ, ತುಂಬಾ ಸ್ವಚ್ಚ
ವಿದ್ಯಾವಂತ ನನ್ನೆಲ್ಲಾ ಮಿತ್ರರಲ್ಲಿ ನನ್ನ ಮನವಿ ಏನೆಂದರೆ ಆನ್ಲೈನ್ ವ್ಯವಹಾರವನ್ನು ಹೆಚ್ಚು ಹೆಚ್ಚು ರೂಢಿಸಿಕೊಳ್ಳಿ. ನಿಮಗೆ ಗೊತ್ತಿದ್ದನ್ನು ಇನ್ನೊಬ್ಬರಿಗೂ ತಿಳಿಸಿ, ನನ್ನ ಪ್ರಯತ್ನಕ್ಕೆ ಸಹಕಾರ ನೀಡಿ.. ನಿಮ್ಮಲ್ಲಿ ಕೈಜೋಡಿಸಿ ಪ್ರಾರ್ಥಿಸುತ್ತೇನೆ - ನರೇಂದ್ರ ಮೋದಿ.