ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!
ಉತ್ತರಪ್ರದೇಶದಲ್ಲಿ ಎಸ್ಪಿ, ಕಾಂಗ್ರೆಸ್ ಹೀನಾಯವಾಗಿ ಸೋತಿರಬಹುದು. ಆದರೆ, ಒಂದು ಮಾತು ಮಾತ್ರ ಮರೆಯುವಂತಿಲ್ಲ. ಈ 'ಅಪವಿತ್ರ' ಮೈತ್ರಿಗೆ ಕಾರಣರಾದವರು ರಾಹುಲ್ ಗಾಂಧಿ ಅಲ್ಲ. ಬದಲಿಗೆ ಅವರಕ್ಕ ಪ್ರಿಯಾಂಕಾ ಗಾಂಧಿ ವದ್ರಾ!
ನವದೆಹಲಿ, ಮಾರ್ಚ್ 11 : ರಾಹುಲ್ ಗಾಂಧಿಯವರು 'ಆಧುನಿಕ ಭಸ್ಮಾಸುರ' ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಕಾರಣವೇನೆಂದರೆ, ಅವರು ಪ್ರಚಾರಕ್ಕೆ ಹೋದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಾಣುತ್ತಿದೆ, ಸುಟ್ಟು ಭಸ್ಮವಾಗುತ್ತಿದೆ.
ಉತ್ತರಪ್ರದೇಶದಲ್ಲಿ ಕಂಡಂತಹ ಹೀನಾಯ ಸೋಲಿನ ನಂತರ ರಾಹುಲ್ ಗಾಂಧಿಯವರು ನಿಜಕ್ಕೂ ಚುನಾವಣೆಯನ್ನು ಗೆಲ್ಲಿಸಿಕೊಡುವ ತಾಕತ್ತು ಹೊಂದಿದ್ದಾರಾ ಎಂಬ ಬಗ್ಗೆ ಸಂದೇಹಗಳು ಮೂಡುವಂತೆ ಮಾಡಿದೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಮಾತ್ರ ಸೋತಿಲ್ಲ, ಅವರೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷಗಳು ಕೂಡ ಭಾರೀ ಸೋಲುಂಡಿವೆ.[ಚುನಾವಣೆ ಸೋಲು: ರಾಹುಲ್ ಗಾಂಧಿ ರಾಜಕೀಯ ಅವನತಿ]
ಪ್ರಸ್ತುತ ಉತ್ತರಪ್ರದೇಶದ ಚುನಾವಣೆಯಲ್ಲಿ ಸಹಜವಾಗಿ ರಾಹುಲ್ ಗಾಂಧಿಯವರತ್ತ ಎಲ್ಲ ಬೊಟ್ಟು ನೆಟ್ಟಿದೆ. ಅವರ ಸ್ಟ್ರಾಟೆಜಿಯಾಗಲಿ, ಪ್ರಚಾರದ ವೈಖರಿಯಾಗಲಿ, ಮಾತಿನ ಓಘವಾಗಲಿ, ಮಾತಿನಲ್ಲಿನ ಚತುರತೆಯಾಗಲಿ, ವಿರೋಧಿಗಳನ್ನು ಹೀಯಾಳಿಸುವ ತಂತ್ರವಾಗಲಿ ಯಾವುದೂ ಅವರ ಕೈಹಿಡಿದಿಲ್ಲ.
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಅಖಿಲೇಶ್ ಯಾದವ್ ಅವರು ಮಾಡಿಕೊಂಡಿರುವ 'ಬ್ಲಂಡರ್' ಎನ್ನುವಷ್ಟರ ಮಟ್ಟಿಗೆ ಮೈತ್ರಿಕೂಡ ಸೋಲು ಕಂಡಿದೆ. ಆದರೆ, ಒಂದು ಮಾತು ಮಾತ್ರ ಮರೆಯುವಂತಿಲ್ಲ. ಈ 'ಅಪವಿತ್ರ' ಮೈತ್ರಿಗೆ ಕಾರಣರಾದವರು ರಾಹುಲ್ ಗಾಂಧಿ ಅಲ್ಲ. ಬದಲಿಗೆ ಅವರಕ್ಕ ಪ್ರಿಯಾಂಕಾ ಗಾಂಧಿ ವದ್ರಾ![ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕೆ ಅಖಿಲೇಶ್ ರಾಜಿನಾಮೆ]
ಮೈತ್ರಿ ಸಾಧ್ಯವಾಗಿದ್ದು ಪ್ರಿಯಾಂಕಾರಿಂದ
ಒಂದು ಹಂತದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮೈತ್ರಿಕೂಟ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಾತುಕತೆ ಮುರಿದುಬಿದ್ದಿದ್ದವು. ಆಗ ರಾಹುಲ್ ಗಾಂಧಿ ಅವರ ನೆರವಿಗೆ ಧಾವಿಸಿದವರು, ಅಜ್ಜಿ ಇಂದಿರಾ ಗಾಂಧಿಯ ಪಡಿಯಚ್ಚಿನಂತಿರುವ ಪ್ರಿಯಾಂಕಾ ಗಾಂಧಿ ವದ್ರಾ. ಅವರ ಪ್ರಯತ್ನದಿಂದಲೇ ಮೈತ್ರಿಕೂಟ ಸಾಧ್ಯವಾಗಿದ್ದು. ಬಿಜೆಪಿಯನ್ನು ಈ ಜೋಡಿ ಬಗ್ಗುಬಡಿಯುತ್ತದೆ ಎನ್ನುವಷ್ಟರ ಮಟ್ಟಿಗೆ ಈ ಮೈತ್ರಿಕೂಟಕ್ಕೆ ಪ್ರಾಧಾನ್ಯತೆ ನೀಡಲಾಯಿತು.
ಈ ಮೈತ್ರಿ ಮಾಡಿಕೊಂಡಿರದಿದ್ದರೆ
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಒಪ್ಪಂದದಿಂದಾಗಿ ಸಮಾಜವಾದಿ ಪಕ್ಷ ಕಾಂಗ್ರೆಸ್ಸಿಗೆ 105 ಸೀಟುಗಳನ್ನೇನೋ ಬಿಟ್ಟುಕೊಟ್ಟಿತು. ಆದರೆ, ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದೆಷ್ಟು? ಕೇವಲ 13 ಮಾತ್ರ. ಬಹುಶಃ ಈ ಮೈತ್ರಿ ಮಾಡಿಕೊಂಡಿರದಿದ್ದರೆ ಸಮಾಜವಾದಿ ಇನ್ನಷ್ಟು ಸ್ಥಾನಗಳನ್ನು ಗಳಿಸುತ್ತಿತ್ತೇನೋ? ಶೇಕಡಾವಾರು ಲೆಕ್ಕದಲ್ಲಿಯೂ ಕಾಂಗ್ರೆಸ್ ಕೇವಲ 6.3ರಷ್ಟು ಮಾತ್ರ ಮತ ಗಳಿಸಿದೆ.
ರಾಹುಲ್ ನೀಡುತ್ತಿದ್ದ ಅಸಂಬದ್ಧ ಹೇಳಿಕೆಗಳು
ಪ್ರಚಾರ ಸಭೆಯಲ್ಲೆಲ್ಲ ರಾಹುಲ್ ಗಾಂಧಿಯವರು ಉತ್ತರಪ್ರದೇಶದ ಬೆಳವಣಿಗಾಗಿ ತಾವು ಮಾಡಲಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳುವುದು ಬಿಟ್ಟು, ನರೇಂದ್ರ ಮೋದಿಯವರ ಅಪನಗದೀಕರಣ, ಭ್ರಷ್ಟಾಚಾರದ ವಿರುದ್ಧ ಅವರು ಕೈಗೊಂಡಿರುವ ಕ್ರಮಗಳ ವಿರುದ್ಧವೇ ವಾಗ್ದಾಳಿ ಮಾಡಿದ್ದು ಮುಳುವಾಯಿತು. ಪ್ರಚಾರ ಭಾಷಣದಲ್ಲಿ ಅವರು ನೀಡುತ್ತಿದ್ದ ಅಸಂಬದ್ಧ ಹೇಳಿಕೆಗಳು ಅವರನ್ನು ಗಂಭೀರವಾಗಿ ಪರಿಗಣಿಸದಂತೆ ಮಾಡಿದವು.
ಅಖಿಲೇಶ್ ಅವರಿಗೆ ವಿಶ್ವಾಸವಿರಲಿಲ್ಲವೆ?
ಆಡಳಿತ ಪಕ್ಷದಲ್ಲೇ ಇದ್ದ ಸಮಾಜವಾದಿ ಪಕ್ಷ, ತನ್ನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬಿಎಸ್ಪಿಯಂತೆ ಏಕಾಂಗಿಯಾಗಿ ಸ್ಪರ್ಧಿಸಬಹುದಿತ್ತು. ಆದರೆ, ಅಖಿಲೇಶ್ ಅವರಿಗೆ ಅವರ ಮೇಲೆಯೇ ವಿಶ್ವಾಸವಿರಲಿಲ್ಲವೇನೋ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರು. ನಲವತ್ತು ದಾಟಿರುವ ಈ 'ಯುವ' ಜೋಡಿ ಕಮಾಲ್ ಮಾಡುತ್ತದೆಂದು ಅಂದುಕೊಂಡಿದ್ದು ಭಯಂಕರ ಹೊಡೆತ ಕೊಟ್ಟಿದೆ.
ಅಖಿಲೇಶ್ ಅವರನ್ನು ಎಳೆದುಕೊಂಡು ಬಿದ್ದಿದ್ದಾರೆ
ರಾಹುಲ್ ಗಾಂಧಿಯವರು ತಾವು ಬಿದ್ದಿದ್ದಲ್ಲದೆ, ಅಖಿಲೇಶ್ ಅವರನ್ನು ಎಳೆದುಕೊಂಡು ಬಿದ್ದಿದ್ದಾರೆ. ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದು ಇದು ಎಷ್ಟನೇ ಬಾರಿ? ಮಹಾರಾಷ್ಟ್ರ (ಸ್ಥಳೀಯ ಚುನಾವಣೆ), ಓರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ... ಎಲ್ಲೆಡೆಯಲ್ಲಿರೂ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ತಿಂದಿದೆ.
ಕರ್ನಾಟಕದಲ್ಲಿಯೂ ನಡೆಯಲಿದೆ ಚುನಾವಣೆ
ಇನ್ನು ಒಂದೇ ವರ್ಷದಲ್ಲಿ ಕರ್ನಾಟಕದಲ್ಲಿ ಕೂಡ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರಪ್ರದೇಶದ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲವೇ ಅಲ್ಲ ಎಂದು ಕಾಂಗ್ರೆಸ್ ನಾಯಕರೆಲ್ಲರೂ ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಆದರೆ, ನಿಜವಾದ ಕಾರಣವೇನೆಂಬುದನ್ನು ನಿಖರವಾಗಿ ಹೇಳುತ್ತಿಲ್ಲ. ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೂ ಚುನಾವಣಾ ಪ್ರಚಾರಕ್ಕೆ ಬರುವುದು ಗ್ಯಾರಂಟಿ.
|
ಹರಿದಾಡುತ್ತಿದೆ ತಮಾಷೆಯ ವಿಡಿಯೋ
ಅಖಿಲೇಶ್ ಯಾದವ್ ಅವರ ಸೈಕಲ್ಲನ್ನು ರಾಹುಲ್ ಗಾಂಧಿ ಹೇಗೆ ಪಂಕ್ಚರ್ ಮಾಡಿದರು ಎಂಬುದನ್ನು ನಿದರ್ಶನವಾಗಿ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.