ಸೋನಿಯಾ ಸುತ್ತ ಹೊಗಳು ಭಟ್ಟರು: ರಜೆಮೇಲೆ ತೆರಳಿದ ರಾಹುಲ್
ಸತತ ಸೋಲಿನಿಂದ ಹತಾಶರಾಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೊಂದು ತಲೆನೋವು ಮತ್ತು ಮುಜುಗರ ಎದುರಾಗಿದೆ. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ದೀರ್ಘಾವಧಿ ರಜೆಯ ಮೇಲೆ ತೆರಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನ ಸೋಮವಾರದಿಂದ (ಫೆ 23) ಆರಂಭವಾಗಿದ್ದು, ಮೊದಲ ದಿನವೇ ರಾಹುಲ್ ಗಾಂಧಿ ಅನುಪಸ್ಥಿತಿ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಒಳಗಾಗಿದೆ.
ಈ ಹಿಂದೆ ಕಾಂಗ್ರೆಸ್ ಮುಖಂಡರು ಸದನದಲ್ಲಿ ಗೈರಾಗಿರುವುದಿಂದಲೇ ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ದಯನೀಯ ಸ್ಥಿತಿಗೆ ಬಂದು ಇಂದು ಕೇವಲ 44 ಸ್ಥಾನ ಪಡೆದಿರುವುದು ಎಂದು ಎನ್ಸಿಪಿ ಮತ್ತು ಬಿಜೆಪಿ ಮುಖಂಡರು ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜನಪ್ರತಿನಿಧಿಗಳಾದ ಸಂಸದರು ಸದನದಲ್ಲಿ ಭಾಗವಹಿಸಿ ಜನರ ಮತ್ತು ಕ್ಷೇತ್ರದ ಸಮಸ್ಯೆಗಳನ್ನು ಪಾರ್ಲಿಮೆಂಟಿನಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಅದು ಅವರ ಕೆಲಸ ಕೂಡಾ.
ಪಾರ್ಲಿಮೆಂಟ್ ಕಲಾಪವನ್ನು ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಎನ್ಸಿಪಿಯ ಮುಖಂಡ ಪ್ರಪುಲ್ ಪಟೇಲ್, ರಾಹುಲ್ ಅನುಪಸ್ಥಿತಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಯುವರಾಜ ರಾಷ್ಟ್ರಾಧ್ಯಕ್ಷರ ಅನುಮತಿ ಪಡೆದು ಕೆಲವು ವಾರಗಳ 'ಅಧಿಕೃತ ರಜೆ'ಯ ಮೇಲೆ ತೆರಳಿರುವುದರ ಹಿಂದೆ ರಾಹುಲ್ ಗಾಂಧಿ ಮುನಿಸಿಕೊಂಡಿರುವುದೇ ಕಾರಣ ಎನ್ನಲಾಗುತ್ತಿದೆ.
ಸೋನಿಯಾ ಸುತ್ತ ಹೊಗಳು ಭಟ್ಟರು: ರಜೆಮೇಲೆ ತೆರಳಿದ ರಾಹುಲ್ ಮುಂದೆ ಓದಿ..
ಪಕ್ಷಕ್ಕಾಗುತ್ತಿರುವ ಸೋಲು
ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗುತ್ತಿರುವ ನಿರಂತರ ಸೋಲು ಸೋನಿಯಾ/ರಾಹುಲ್ ಗಾಂಧಿಯವರ ನಿದ್ದೆಗೆಡಿಸಿದೆ. ಅದರಲ್ಲೂ ದೆಹಲಿಯ ಸೋಲು ಜೀರ್ಣಿಸಿಕೊಳ್ಳಲೂ ಆಗುತ್ತಿಲ್ಲ. ಹಾಗಾಗಿಯೇ, ರಾಹುಲ್ ಗಾಂಧಿ ಬಜೆಟ್ ಅಧಿವೇಶನಕ್ಕೆ ಗೈರಾಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಕಾರಣ ಇದಲ್ಲ ಎನ್ನಲಾಗುತ್ತಿದೆ.
ಸೋನಿಯಾ ಸುತ್ತಮುತ್ತ ಹೊಗಳುಭಟ್ಟರು
ರಾಷ್ಟೀಯ ವಾಹಿನಿಯ ವರದಿ ಪ್ರಕಾರ ಸೋನಿಯಾ ಗಾಂಧಿ ಸುತ್ತಮುತ್ತವಿರುವ ಹೊಗಳು ಭಟ್ಟರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವುದು ರಾಹುಲ್ ಗಾಂಧಿ ಸಿಟ್ಟಿಗೆ ಪ್ರಮುಖ ಕಾರಣ. ಪಕ್ಷದಲ್ಲಿ ಭಾರೀ ಬದಲಾವಣೆ ತರಲು ರಾಹುಲ್ ಇಚ್ಚಿಸಿದ್ದರು. ಇದಕ್ಕೆ ಪಕ್ಷದ ಹಿರಿಯ ತಲೆಗಳು ಸೋನಿಯಾ ಮೂಲಕ ತಡೆಯೊಡ್ಡುತ್ತಿರುವುದು ರಾಹುಲ್ ಸಿಟ್ಟಿನ ಪ್ರಮುಖ ಕಾರಣ ಎನ್ನುವುದು ಸುದ್ದಿ.
ದೂರವಿಡಲು ಸೂಚನೆ
ಸೋನಿಯಾ ಸುತ್ತಮುತ್ತ ಇರುವ ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ಕೆಲಸಗಳಿಗಾಗಿ ಲಾಬಿ ನಡೆಸಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇವರನ್ನು ಕಾಂಗ್ರೆಸ್ ಅಧ್ಯಕ್ಷರು ದೂರವಿಡಬೇಕು ಎನ್ನುವುದು ರಾಹುಲ್ ಆಗ್ರಹ ಎಂದು ರಾಷ್ಟೀಯ ವಾಹಿನಿಯ ವರದಿಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಪಕ್ಷದಿಂದಲೇ ಕಿತ್ತೊಗೆಯಿರಿ
ಇಂಥವರಿಂದ ಪಕ್ಷಕ್ಕೆ ಮುಜುಗರ, ಸೋಲು ಖಂಡಿತ. ಕೆಲವು ಹಿರಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಘಟಕದ ಅಧ್ಯಕ್ಷರನ್ನು ತಕ್ಷಣದಿಂದಲೇ ಪಕ್ಷದಿಂದಲೇ ಕಿತ್ತೊಗೆಯಿರಿ ಎನ್ನುವುದು ರಾಹುಲ್ ಇಟ್ಟಿರುವ ಬೇಡಿಕೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪಕ್ಷಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ
ತಮ್ಮ ಪಕ್ಷದ ನಾಯಕರ ಹೇಳಿಕೆ/ನಿರ್ಧಾರದಿಂದಲೇ ಮುಜುಗರಕ್ಕೀಡುಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗೈರು ಮತ್ತಷ್ಟು ಬಿಸಿತುಪ್ಪವಾಗುವುದಂತೂ ಖಂಡಿತ. ಅನಧಿಕೃತ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ವರ್ಚಸ್ಸನ್ನು ಬಜೆಟ್ ಅಧಿವೇಶನದ ವೇಳೆ ಸದನದಲ್ಲಿ ಯಾವ ರೀತಿ ಸಂಭಾಳಿಸುತ್ತಾರೋ?
ಸೋನಿಯಾ ಸ್ಪಷ್ಟನೆ
ರಾಹುಲ್ ಗಾಂಧಿ ಕದ್ದುಮುಚ್ಚಿ ಎಲ್ಲೂ ಹೋಗಿಲ್ಲ. ಅಧಿಕೃತವಾಗಿ ಕೆಲವು ವಾರಗಳ ರಜೆ ಕೋರಿದ್ದರು. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ನಂತರ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆ ಎಂದು ಸೋನಿಯಾ ಸ್ಪಷ್ಟನೆ ನೀಡಿದ್ದಾರೆ.
ಎಐಸಿಸಿ ಅಧಿವೇಶನ
ಮುಂಬರುವ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಹುಲ್, ಅದರ ರೂಪುರೇಷೆಗಳ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ಸಿನ ಇನ್ನೊಂದು ವಲಯ.