ಪಂಜಾಬ್ ಚುನಾವಣೆ: ನಿಮಗೆ ತಿಳಿದಿರಬೇಕಾದ ಅಂಶಗಳು
ಚಂಡೀಗಡ್, ಜನವರಿ 18: 2017ರ ವಿಧಾನಸಭೆ ಚುನಾವಣೆಗೆ ಪಂಜಾಬ್ ಸಜ್ಜಾಗಿದೆ. ಎಎಪಿ, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಭಾರಿ ಪ್ರಚಾರದಲ್ಲಿ ತೊಡಗಿದ್ದು ಅಧಿಕಾರಕ್ಕೇರಲು ಶತ ಪ್ರಯತ್ನ ನಡೆಸುತ್ತಿವೆ.
ಇಲ್ಲಿವರೆಗೆ ರಾಜ್ಯದಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ ಈ ಬಾರಿ ಸಮೀಕ್ಷೆಗಳು ಎಎಪಿ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿಯುತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಪಂಜಾಬ್ ಚುನಾವಣೆ ಕುತೂಹಲ ಹುಟ್ಟಿಸಿದೆ.
ಇದೇ ವೇಳೆ ಕ್ಯಾಪ್ಟನ್ ಅಮರಿಂದರ್ ಸಿಂಗ್, ಸುಖ್ ಬೀರ್ ಸಿಂಗ್ ಬಾದಲ್, ಪ್ರಕಾಶ್ ಸಿಂಗ್ ಬಾದಲ್, ಎಎಪಿಯ ಭಗ್ವಂತ್ ಮನ್ ರಂಥ ಘಟಾನುಘಟಿಗಳ ಸ್ಪರ್ಧೆಯಿಂದ ಪಂಜಾಬ್ ಚುನಾವಣೆ ಕಾವು ಹೆಚ್ಚಾಗಿದೆ.
ಒಟ್ಟು 114 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 4 ರಂದು ಒಂದೇ ಹಂತದ ಮತದಾನ ನಡೆಯಲಿದೆ. ಮಾರ್ಚ್ 11 ರಂದು ಮತ ಎಣಿಕೆ ನಡೆಯಲಿದೆ.
ಪಂಜಾಬ್ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇಲ್ಲಿವೆ,
2012ರ ವಿಧಾನಸಭೆ ಚುನಾವಣೆಯ ಫಲಿತಾಂಶ:
ಒಟ್ಟು ಸ್ಥಾನಗಳು - 117
ಕಾಂಗ್ರೆಸ್ - 46
ಬಿಜೆಪಿ - 12
ಅಕಾಲಿದಳ - 56
ಇತರ - 3
ಬಿಜೆಪಿ ಮತ್ತು ಅಕಾಲಿದಳ ಮೈತ್ರಿಕೂಟ ಇಲ್ಲಿ ಅಧಿಕಾರಕ್ಕೆ ಏರಿತ್ತು. ಅಕಾಲಿದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಮುಖ್ಯಮಂತ್ರಿಯಾಗಿದ್ದರು.
ಪಂಜಾಬ್ ಸ್ಟಾರ್ ಪ್ರಚಾರಕರು:
ನವಜೋತ್ ಸಿಂಗ್ ಸಿಧು ಖಾಂಗ್ರೆಸ್ ಸೇರಿರುವುದರಿಂದ , ಅವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮರಿಂದರ್ ಸಿಂಗ್ ಕೂಡಾ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ.
ಇನ್ನು ಬಿಜೆಪಿ-ಅಕಾಲಿದಳ ವಿಚಾರಕ್ಕೆ ಬಂದಾಗ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಪ್ರಭಾವಿ ನಾಯಕ ಸುಖ್ ಬೀರ್ ಸಿಂಗ್ ಬಾದಲ್ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಇನ್ನು ಅಮಿತ್ ಶಾರಿಂದ ಹಿಡಿದು ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಭರಪೂರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಲ್ಲಿ 2012ರ ಫಲಿತಾಂಶವನ್ನು ಪುನರಾವರ್ತನೆ ಮಾಡುವ ಕನಸನ್ನು ಬಿಜೆಪಿ ಮತ್ತು ಅಕಾಲಿದಳ ಕಾಣುತ್ತಿದೆ.
ಎಎಪಿ ಪಂಜಾಬಿನಲ್ಲಿ ಈ ಭಾರಿ ಮೊದಲ ಬಾರಿಗೆ ಸ್ಪರ್ಧೆಗೆ ಇಳಿದಿದೆ. ಮೊದಲ ಸ್ಪರ್ಧೆಯಲ್ಲೇ ಅಧಿಕಾರಕ್ಕೇರುವ ಕನಸನ್ನು ಅದು ಕಾಣುತ್ತಿದೆ. ಸರಣಿ ರ್ಯಾಲಿಗಳನ್ನು ಮತ್ತು ಪ್ರಚಾರ ಸಭೆಗಳನ್ನು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ರಾಜ್ಯದಲ್ಲಿ ನಡೆಸುತ್ತಿದ್ದಾರೆ. ಆದರೆ ಇನ್ನೂ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮಾತ್ರ ಎಎಪಿ ಘೋಷಿಸಿಲ್ಲ.
ಚುನಾವಣೆ ಮೇಲೆ ಪ್ರಭಾವ ಬೀರುವ ಅಂಶಗಳು:
ಅನಾಣ್ಯೀಕರಣ, ಮಾದಕ ವಸ್ತುಗಳ ಕಳ್ಳ ಸಾಗಣೆ. ರೈತರ ಆತ್ಮಹತ್ಯೆ ವಿಚಾರಗಳು ಮತದಾನದ ಮೇಲೆ ಪರಿಣಾಮ ಬೀರಲಿವೆ. ನಾಯಕರು ತಮ್ಮ ಪ್ರಚಾರದ ವೇಳೆಯಲ್ಲಿಯೂ ಇದೇ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ಅನಾಣ್ಯೀಕರಣ ಮತ್ತು ರೈತರ ಆತ್ಮಹತ್ಯೆ ವಿಚಾರ ಎತ್ತಿಕೊಂಡು ಬಿಜೆಪಿ ಅಕಾಲಿದಳದ ಮೇಲೆ ದಾಳಿ ಮಾಡುತ್ತಿದೆ. ಆದರೆ ಎಎಪಿ ಇದೇ ವಿಚಾರ ಎತ್ತಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ಮೇಲೆಯೂ ದಾಳಿ ಮಾಡುತ್ತಿದೆ. (ಒನ್ ಇಂಡಿಯಾ ಸುದ್ದಿ)