ನಭಾ ಜೈಲಿನಿಂದ ಪರಾರಿಯಾದ ಉಗ್ರರ ಸುಳಿವು ಕೊಟ್ಟರೆ ರೂ.25 ಲಕ್ಷ
ನಭಾ ಜೈಲುಗೋಡೆ ಹೊಡೆದು ಪರಾರಿಯಾಗಿರುವ ಉಗ್ರರ ಸುಳಿವು ನೀಡಿದವರಿಗೆ ರೂ. 25ಲಕ್ಷ ಬಹುಮಾನ ನೀಡುವುದಾಗಿ ಪಂಜಾಬ್ ಸರ್ಕಾರ ಘೋಷಿಸಿದೆ.
ಚಂಡೀಗಢ, ನವೆಂಬರ್, 27: ಪಂಜಾಬ್ ನಭಾ ಜೈಲಿನಿಂದ ಪರಾರಿಯಾದ ಉಗ್ರರ ಶೋಧಕ್ಕಾಗಿ ಪಂಜಾಬ್ ಸರ್ಕಾರ ಕ್ರಮ ಕೈಗೊಂಡಿದ್ದು, ಉಗ್ರರ ಸುಳಿವು ಕೊಟ್ಟವರಿಗೆ ರೂ.25ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.
ಉಗ್ರರ ಶೋಧಕ್ಕಾಗಿ ಪಂಜಾಬ್ ಪೊಲೀಸರು ಈಗಾಗಲೇ ಕಾರ್ಯಚರಣೆಗೆ ಇಳಿದಿದ್ದು, ಪಂಜಾಬ್ ನಿಂದ ಪಾಕಿಸ್ತಾನ ಮತ್ತು ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಿದ್ದಾರೆ.[ಪಂಜಾಬ್ ಜೈಲಿನ ಮೇಲೆ ದಾಳಿ, ಖಾಲಿಸ್ತಾನ್ ಮುಖ್ಯಸ್ಥ ಪರಾರಿ]
ಉಗ್ರರು ಪರಾರಿಯಾದ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಸಿಸಿಟಿವಿಯಲ್ಲಿ ಉಗ್ರರು ಬಳಸಿದ್ದ ಕಾರು ದೃಶ್ಯ ಸೆರೆಯಾಗಿದೆ. ಸಿಸಿಟಿವಿ ಫುಟೇಜ್ ಅನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ.
ಪ್ರಕರಣ ಸಂಬಂಧ ನಭಾ ಜೈಲು ಅಧಿಕ್ಷಕ, ಉಪ ಜೈಲು ಅಧೀಕ್ಷಕ ಜತೆ ಇತರೆ ಜೈಲು ಸಿಬ್ಬಂದಿಯನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಪರಾರಿಯಾಗಿರು ಖಲಿಸ್ತಾನ ಲಿಬರೇಷನ್ ಫೋರ್ಸ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಗೆ ಪಾಕಿಸ್ತಾನದ ಉಗ್ರ ಸಂಘಟನೆ ಐಸ್ ನಿಕಟ ಸಂಪರ್ಕವಿದ್ದು, ವಿವಿಧ ದೇಶಗಳ ಭಯೋತ್ಪಾದಕ ಸಂಘಟನೆಗಳ ಜತೆ ಒಟನಾಟವಿದೆ ಎಂದು ಹೇಳಲಾಗಿದೆ.
2014 ನವೆಂಬರ್ 7ರಂದು ಪಂಜಾಬ್ ಪೊಲೀಸರು ಹರ್ಮಿಂದರ್ ಸಿಂಗ್ ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಹರ್ಮಿಂದರ್ ಸಿಂಗ್ ಸಂಚು ರೂಪಿಸುತ್ತಿದ್ದ.