ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಜೆಡಿಎಸ್, ಜಯ ಕರ್ನಾಟಕ ಧರಣಿ
24.15 ಎಕರೆ ಕೆರೆಯಲ್ಲಿ 6.15 ಎಕರೆಯಷ್ಟು ವಿಸ್ತೀರ್ಣ ಒತ್ತುವರಿ ಆರೋಪ, ಒತ್ತುವರಿ ತೆರವಿಗೆ ಧರಣಿ ನಿರತರ ಆಗ್ರಹ
ಬಾಗಲಕೋಟೆ, ಫೆಬ್ರವರಿ 9: ಜಾನುವಾರುಗಳ ನೀರಡಿಕೆಗೆ ಪ್ರಮುಖ ಆಶ್ರಯ ತಾಣವಾಗಿದ್ದ ಕೂಡಗಿಯಲ್ಲಿನ ಕೆರೆಯ ಒತ್ತುವರಿ ವಿರೋಧಿಸಿ, ತಾಲೂಕು ಜೆಡಿಎಸ್ ರೈತ ಮೋರ್ಚಾ, ಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇನ್ನಿತರ ಸಂಘ-ಸಂಸ್ಥೆಗಳು ಗುರುವಾರ ಧರಣಿ ನಡೆಸಿದವು.
ಅಲಮಟ್ಟಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ವಿದ್ಯುತ್ ಸ್ಥಾವರಕ್ಕಾಗಿ ನೀರಿನ ಅಗತ್ಯತೆಯಿರುವುದರಿಂದ 24.15 ಎಕರೆ ವಿಸ್ತೀರ್ಣದ ಕೆರೆಯಲ್ಲಿ 6.15 ಎಕರೆಯಷ್ಟು ಕೆರೆಯನ್ನು ಆಕ್ರಮಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ, ಈ ಕೂಡಲೇ ಸ್ಥಾವರದ ಅಧಿಕಾರಿಗಳು ಕೆರೆ ಒತ್ತುವರಿಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ರೈತ ಮೋರ್ಚಾ ಸಂಘದ ಅಧ್ಯಕ್ಷ ಬಾಬು ಬೆಲ್ಲದ ಮಾತನಾಡಿ, ''ಜಾನುವಾರುಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಕೆರೆಯ ಭಾಗವನ್ನೇ ಒತ್ತುವರಿ ಮಾಡಿಕೊಂಡಿರುವ ಹಸು, ಮೇಕೆ ಮುಂತಾದ ಸಾಕು ಪ್ರಾಣಿಗಳಿಗೆ ಹಾಗೂ ಜನರಿಗೂ ನೀರಿನ ತೊಂದರೆಯುಂಟಾಗಿದೆ'' ಎಂದು ತಿಳಿಸಿದರು.
ಆನಂತರ ಮಾತನಾಡಿದ, ಜಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಆಶೀಫ ತಾಳೀಕೋಟೆ, ''ಕೆರೆ ಒತ್ತುವರಿಗೆ ಒಂದು ಪ್ರಕರಣವಾದರೆ, ಗ್ರಾಮ ಪಂಚಾಯ್ತಿಯಲ್ಲೂ ಸಾಕಷ್ಟು ಅಕ್ರಮಗಳು ನಡೆದು ಜನರಿಗೆ ಅನ್ಯಾಯವೆಸಗಲಾಗಿದೆ. ಬಡವರಿಗಾಗಿ ಮನೆ ನಿರ್ಮಾಣ ಮಾಡಲು ಸರ್ಕಾರ ರೂಪಿಸಿರುವ ವಸತಿ ಯೋಜನೆ ವಿಚಾರದಲ್ಲಿ ಬಡವರಿಂದಲೇ ಹಣ ಕಿತ್ತುಕೊಂಡು ಅವರಿಗೇ ಅನುದಾನದ ರೂಪದಲ್ಲಿ ಅದನ್ನು ಮರಳಿಕೊಡಲಾಗುತ್ತಿದೆ. ಉಚಿತ ಯೋಜನೆಗಳಲ್ಲಿ ಬಡವರಿಂದ ಹಣ ವಸೂಲಿಯಾಗುತ್ತಿರುವುದು ಅಪರಾಧ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ'' ಎಂದು ಅವರು ತಿಳಿಸಿದರು.