ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಭಾ ದೂರು
ಮೈಸೂರು, ಮಾರ್ಚ್ 23: ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಸಂಸದ ಪ್ರತಾಪ್ ಸಿಂಹ್ ವಿರುದ್ಧ ಪ್ರಗತಿಪರ ಚಿಂತಕಿ ಪ್ರಭಾ ಬೆಳವಂಗಲ ದೂರು ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿರುದ್ಧ ಅಶ್ಲೀಲ ಪೋಸ್ಟ್ ಹಾಕಿದ್ದ ಪ್ರಭಾ ವಿರುದ್ಧ ಬಿಜೆಪಿ ಯುವ ಮೋರ್ಚಾ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ದೂರು ನೀಡಿತ್ತು. ಆ ವೇಳೆ, ಪ್ರತಾಪ್ ಸಿಂಹ್ ವಿಡಿಯೋ ಒಂದರಲ್ಲಿ ತಮ್ಮನ್ನು ಅವಹೇಳನ ಮಾಡಿದ್ದಾರೆ ಎಂದು ಪ್ರಭಾ ದೂರಿದ್ದಾರೆ.[ಯೋಗಿ ಆದಿತ್ಯನಾಥ್ ಅವಹೇಳನ : ಪ್ರತಾಪ್ ಸಿಂಹ ಆಕ್ರೋಶ]
ಪ್ರಭಾ ವಿರುದ್ಧ ನಾನು 100 ದೂರುಗಳನ್ನು ದಾಖಲಿಸಬಲ್ಲೆ, ಕೆಟ್ಟ ವಿಡಿಯೋ ನೋಡಬೇಕೆಂಬ ಬಯಕೆಯಿದ್ದರೆ ಪ್ರಭಾ ಅವರು ಉತ್ತರ ಪ್ರದೇಶದವರೆಗೂ ಹೋಗುವ ಅವಶ್ಯಕತೆಯಿರಲಿಲ್ಲ, ಬಾಗಲಕೋಟೆಗೆ ಹೋಗಿದ್ದರೆ ಸಾಕಾಗಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ರಾಜಕಾರಣಿಗಳ ಆಂಟಿ ಚೇಂಬರ್ನಲ್ಲಿ ಏನು ನಡೆಯುತ್ತೆ ಎಂಬುದರ ಬಗ್ಗೆ ಪ್ರಭಾ ಅವರಿಗೆ ಕುತೂಹಲ ಹೆಚ್ಚು ಎಂದು ಅನ್ನಿಸುತ್ತದೆ. ಬಾಗಲಕೋಟೆಗೆ ಹೋಗಿ ಅಲ್ಲಿ ಮೇಟಿ ಅವರ ಚೇಂಬರ್ಗೆ ಹೋಗಿದ್ದರೇ ಲೈವ್ ವಿಡಿಯೋ ನೋಡಬಹುದಿತ್ತು, ಅವರ ಭಾಷೆಯಲ್ಲಿ ಹೇಳಬಹುದಾದರೇ ಮೇಟಿ ಅವರ ಕಚೇರಿಯಲ್ಲೇ ಪ್ರಭಾ ಅನುಭವ ಪಡೆಯಬಹುದಿತ್ತು ಎಂದು, ಪ್ರತಾಪ್ ಸಿಂಹ ವಿಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಪ್ರಭಾ ಬೆಳವಂಗಲ 'ಫೇಸ್ ಬುಕ್'ನಲ್ಲಿ ಹಾಕಿದ್ದ ಪ್ಟ್ ನಕಲಿ ಎಂದು ತಿಳಿದ ಮೇಲೆ ಅದನ್ನು ತೆಗೆದು ಹಾಕಿದ್ದಾರೆ, ಸಂಸದರು ನೂರಲ್ಲ ಸಾವಿರ ದೂರು ದಾಖಲಿಸಲಿ, ಆದರೆ ಒಬ್ಬ ಸಂಸದರಾಗಿದ್ದುಕೊಂಡು ಮಹಿಳೆಯ ಬಗ್ಗೆ ಇಷ್ಟೊಂದು ನಿಕೃಷ್ಟವಾಗಿ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.