ಬಜೆಟ್ ದಾಖಲೆ ತಯಾರಿಗೆ ಮುನ್ನ ಹಲ್ವಾ ಸವಿದ ಜೇಟ್ಲಿ
ಬಜೆಟ್ ಗೂ ಮುನ್ನ ಹಲ್ವಾ ತಿನ್ನುವ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ದೊಡ್ಡದೊಂದು ಕಡಾಯಿಯಲ್ಲಿ ಹಲ್ವಾ ತಯಾರಿಸಲಾಗುತ್ತದೆ. ಆ ನಂತರ ಸಚಿವಾಲಯದ ಎಲ್ಲ ಉದ್ಯೋಗಿಗಳಿಗೂ ವಿತರಿಸಲಾಗುತ್ತದೆ. ಜನರಿಗೆ ಈ ಬಾರಿ ಏನು ಸಿಗುತ್ತೋ ಏನೋ?
ನವದೆಹಲಿ, ಜನವರಿ 19: ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತಿತರ ಅಧಿಕಾರಿಗಳು ಗುರುವಾರ ಹಲ್ವಾ ಸವಿದರು. ಅದರಲ್ಲೇನು ವಿಶೇಷ ಅಂತೀರಾ? ಇದೊಂದು ಪದ್ಧತಿ ತುಂಬ ಹಿಂದಿನಿಂದಲೂ ರೂಢಿಯಲ್ಲಿದೆ. 2017-18ರ ಕೇಂದ್ರ ಬಜೆಟ್ ನ ದಾಖಲೆಗಳ ಮುದ್ರಣ ಆರಂಭವಾಗುತ್ತಿದಂತೆಯೇ ಹೀಗೆ ಹಲ್ವಾ ಮಾಡಲಾಗುತ್ತದೆ.
"ಹೀಗೆ ಹಲ್ವಾ ಮಾಡಿ, ಸವಿದ ನಂತರ ಆರ್ಥಿಕ ಸಚಿವಾಲಯದ ನೂರಕ್ಕೂ ಹೆಚ್ಚು ಅಧಿಕಾರಿಗಳು ಬಜೆಟ್ ನ ಮುದ್ರಣಾಲಯದಲ್ಲೇ ಉಳಿದುಕೊಳ್ತಾರೆ. ಅದೂ ಎಲ್ಲಿವರೆಗೆ ಗೊತ್ತಾ? ವಿತ್ತ ಸಚಿವರು ಅವರ ಬಜೆಟ್ ಭಾಷಣವನ್ನು ಪೂರ್ತಿಗೊಳಿಸುವವರೆಗೆ" ಎಂದು ಸಚಿವಾಲಯವು ಟ್ವೀಟ್ ಮಾಡಿದೆ.
Union Finance Minister Shri @arunjaitley along with the senior officials of Ministry of Finance at the Halwa Ceremony in New Delhi today. pic.twitter.com/KA7Jpcil7F
— Ministry of Finance (@FinMinIndia) 19 January 2017
2017-18ರ ಕೇಂದ್ರ ಬಜೆಟ್ ನ ಮಾಹಿತಿ ಒಳಗೊಂಡ ದಾಖಲೆಗಳ ಮುದ್ರಣ ಆರಂಭವಾಗಿದೆ ಎಂದು ತಿಳಿಯುವುದು ಹೀಗೆ. ಈ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ದೊಡ್ಡದೊಂದು ಕಡಾಯಿಯಲ್ಲಿ ಹಲ್ವಾ ತಯಾರಿಸಲಾಗುತ್ತದೆ. ಆ ನಂತರ ಸಚಿವಾಲಯದ ಎಲ್ಲ ಉದ್ಯೋಗಿಗಳಿಗೂ ವಿತರಿಸಲಾಗುತ್ತದೆ.[5 ರಾಜ್ಯಗಳ ಚುನಾವಣೆ, ಕೇಂದ್ರ ಬಜೆಟ್ ಮುಂದೆ ಹೋಗಬಹುದಾ?]
ಆರ್ಥಿಕ ಕಾರ್ಯದರ್ಶಿ ಅಶೋಕ್ ಲವಾಸ, ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಮತ್ತಿತರ ಅಧಿಕಾರಿಗಳು, ಉದ್ಯೋಗಿಗಳು ಯಾರೆಲ್ಲ ಬಜೆಟ್ ತಯಾರಿಯಲ್ಲಿ ತೊಡಗುತ್ತಾರೋ ಎಲ್ಲರೂ ಇದರಲ್ಲಿ ಭಾಗವಹಿಸಿದ್ದರು.
ಈ ರೀತಿ ಹಲ್ವಾ ಮಾಡಿ ಹಂಚಿದ ನಂತರ ಬಜೆಟ್ ದಾಖಲೆ ಮುದ್ರಣದಲ್ಲಿ ತೊಡಗುವ ಅಧಿಕಾರಿಗಳು, ಸಹಾಯಕ ಉದ್ಯೋಗಿಗಳು ಸಚಿವಾಲಯದಲ್ಲೇ ಉಳಿದುಕೊಳ್ಳಬೇಕು. ಲೋಕಸಭೆಯಲ್ಲಿ ಬಜೆಟ್ ಮಂಡನೆ ಆಗುವವರೆಗೆ ಆವರ ಕುಟುಂಬದ ಜತೆಗೂ ಸಂಪರ್ಕ ಇರುವುದಿಲ್ಲ.
ಹತ್ತಿರದವರನ್ನು ಸಹ ಫೋನ್ ಅಥವಾ ಇ ಮೇಲ್ ಮೂಲಕ ಕೂಡ ಸಂಪರ್ಕಿಸದಂತೆ ಹೊರಗಿನ ಯಾವ ಸಂಪರ್ಕವೂ ಇರುವುದಿಲ್ಲ. ಕೆಲವೇ ಹಿರಿಯ ಅಧಿಕಾರಿಗಳಿಗೆ ಮಾತ್ರ ತಮ್ಮ ಮನೆಗೆ ಹೋಗಲು ಅನುಮತಿ ಇರುತ್ತದೆ.