ಸಂಸತ್ತಿನಲ್ಲಿ ಮೋದಿ ಡೆಡ್ಲಿ ಸ್ಪೀಚ್: ಇದ್ರಿಂದ ಹೊಟ್ಟೆ ತುಂಬುತ್ತಾ?
ನವದೆಹಲಿ, ಫೆ 28: ತನ್ನ ಸರಕಾರದ ಮುಂದಿನ ಧ್ಯೇಯೋದ್ದೇಶವೇನು ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ವಿವರಿಸುತ್ತಿದ್ದರೆ, ಮೋದಿ ಭಾಷಣದಿಂದ ಬಡವರ ಹೊಟ್ಟೆ ತುಂಬುತ್ತಾ ಎಂದು ವಿಪಕ್ಷದವರು ಪ್ರಶ್ನಿಸಿದ್ದಾರೆ.
ಶುಕ್ರವಾರ (ಫೆ 27)ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ನಮ್ಮ ಸರಕಾರದ ಉದ್ದೇಶ 'ಇಂಡಿಯಾ ಫಸ್ಟ್'ಎಂದಿದ್ದಾರೆ.
ಹಿಂದಿನ ಸರಕಾರದ ಕೆಲವೊಂದು ಕಾರ್ಯಕ್ರಮವನ್ನು ನೇರವಾಗಿ ಮೋದಿ ಟೀಕಿಸಿದಾಗ ಎದ್ದು ನಿಂತ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಭಾಷಣದಿಂದ ಬಡವರ ಹೊಟ್ಟೆ ತುಂಬುತ್ತಾ ಎಂದು ಲೇವಡಿ ಮಾಡಿದರು. (ಹಲವು ಕನಸುಗಳ ನಿರೀಕ್ಷೆಯಲ್ಲಿ ಬಜೆಟ್)
ನರೇಗಾ (Mahatma Gandhi National Rural Employment Gurantee Act) ಎನ್ನುವ ಜನೋಪಯೋಗಿ ಯೋಜನೆಯನ್ನು ಪ್ರಧಾನಿಗಳು ಟೀಕಿಸುವ ಮುನ್ನ ಇದರಿಂದ ಜನರಿಗಾದ ಉಪಯೋಗವನ್ನು ಅರಿತುಕೊಳ್ಳಬೇಕಿತ್ತು ಎಂದು ಖರ್ಗೆ ಸದನದಲ್ಲಿ ಮೋದಿಯವರನ್ನು ಟೀಕಿಸಿದ್ದಾರೆ.
ಪ್ರಧಾನಿಗಳು ಚೆನ್ನಾಗಿ ಮಾತನಾಡಬಲ್ಲರು. ಅಕ್ಷರ ಜೋಡಣೆಯನ್ನು ಚೆನ್ನಾಗಿ ರೂಪಿಸಿ ಭಾಷಣ ಮಾಡುತ್ತಾರೆ. ಆದರೆ ಅವರ ಬರೀ ಭಾಷಣದಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಖರ್ಗೆ, ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸತ್ತಿನಲ್ಲಿ ಮೋದಿ ಭಾಷಣದ ಪ್ರಮುಖ ಅಂಶಗಳು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಲೋಕಸಭೆಯಲ್ಲಿ ಮೋದಿ ಮಾತಿನ ಲಹರಿ
ಚುನಾವಣಾ ಸಭೆಯಲ್ಲಿ ತನ್ನ ಕಂಚಿನ ಕಂಠದಿಂದ ಭಾಷಣ ಮಾಡುವ ಮೋದಿ, ಸಂಸತ್ತಿನಲ್ಲೂ ಅದನ್ನೇ ಮುಂದುವರಿಸಿದ್ದಾರೆ. ತನ್ನ ಸರಕಾರದ ಕಾರ್ಯಕ್ರಮಗಳೇನು ಎಂದು ಸವಿವರವಾಗಿ ಸದನದಲ್ಲಿ ಪ್ರಸ್ತಾವಿಸಿದ್ದಾರೆ.
ಇಂಡಿಯಾ ಫಸ್ಟ್ ಎಂದ ಮೋದಿ
ಖರ್ಗೆ ಮತ್ತು ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ, ನನ್ನ ಸರಕಾರದ ಒಂದೇ ಜಾತಿಯೆಂದರೆ ಅದು 'ಇಂಡಿಯಾ ಫಸ್ಟ್, ನನ್ನ ಸರಕಾರದ ಪವಿತ್ರ ಪುಸ್ತಕವೆಂದರೆ ಅದು ಭಾರತದ ಸಂವಿಧಾನ, ನನ್ನ ಭಕ್ತಿ ಎಂದರೆ ಅದು ಭಾರತ್ ಭಕ್ತಿ' ಎಂದು ಸದನದಲ್ಲಿ ಭಾಷಣ ಮಾಡುತ್ತಿದ್ದಾಗ obviously ಸ್ವಪಕ್ಷೀಯರು ಮೇಜು ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
ಭೂಸ್ವಾಧೀನ ಮಸೂದೆ
ನಮ್ಮ ಸರಕಾರ ಮಂಡಿಸಿರುವ ಭೂಸ್ವಾಧೀನ ಮಸೂದೆಯಲ್ಲಿ ಯಾವುದೇ ರೈತ ವಿರೋಧಿ ಅಂಶಗಳಿಲ್ಲ. ನಾವು ರೈತ ವಿರೋಧಿಗಳು, ಉದ್ಯಮಿ ಪ್ರೇಮಿಗಳು ಎನ್ನುವ ತಪ್ಪು ಕಲ್ಪನೆಯನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಪ್ರಸ್ತಾವಿತ ಮಸೂದೆಯಲ್ಲಿ ರೈತ ವಿರೋಧಿ ಅಂಶಗಳಿದ್ದರೆ ನಾವು ಈ ಮಸೂದೆಗೆ ಮುಂದಾಗುತ್ತಿರಲಿಲ್ಲ. ಆದರೂ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ - ಪ್ರಧಾನಮಂತ್ರಿ.
ಕಪ್ಪುಹಣದ ವಿಚಾರ
ಕಪ್ಪುಹಣದ ವಿಚಾರ ಈ ದೇಶದಲ್ಲಿ ನಡೆದ ಗಂಭೀರ ಚರ್ಚೆಯಲ್ಲಿ ಒಂದು. ನಾವು ಚುನಾವಣೆಯ ವೇಳೆ ಹೇಳಿದಂತೆ ನಡೆಯಲು ಸಿದ್ದರಾಗಿದ್ದೇವೆ. ಸರಕಾರ ಬರುತ್ತದೆ, ಇನ್ನೊಂದು ಹೊಸ ಸರಕಾರ ಬರುತ್ತದೆ. ಆದರೆ ಈ ದೇಶದ ಹಣೆಬರಹ ಬರೆಯುವವರು ನಾಗರೀಕರು.
ಭ್ರಷ್ಟಾಚಾರದ ಬಗ್ಗೆ ಮೋದಿ ನುಡಿಮುತ್ತು
ಭ್ರಷ್ಟಾಚಾರ ಎನ್ನುವ ಪೆಢಂಭೂತ ಯಾವ ಪಕ್ಷಕ್ಕೂ ಹೊರತಾಗಿಲ್ಲ. ಇದು ನಮ್ಮ ದೇಶವನ್ನು ವ್ಯಾಪಕವಾಗಿ ಕಾಡುತ್ತಿರುವ ಸಮಸ್ಯೆಯಿದು. ಇದರ ಆಮೂಲಾಗ್ರ ನಿರ್ಮೂಲನದ ಬಗ್ಗೆ ಚರ್ಚೆ ನಡೆಯಬೇಕಿದೆ. ಇದು ಪಕ್ಷಾತೀತವಾಗಿ ನಡೆಯಬೇಕಾಗಿರುವ ಗಂಭೀರ ಸಮಸ್ಯೆ. ನಮ್ಮ ಸರಕಾರ ಈ ವಿಚಾರದಲ್ಲಿನ ಚರ್ಚೆಗೆ ಮುಕ್ತವಾಗಿದೆ - ಪ್ರಧಾನಿ ಮೋದಿ.
ಮುಲಾಯಂ ಸಿಂಗ್ ಯಾದವ್ ಜೀ..
ನಮ್ಮ ಸರಕಾರದ ಸ್ವಚ್ಚ ಭಾರತ್ ಅಭಿಯಾನದ ಬಗ್ಗೆ ಕೆಲವರು ಲೇವಡಿ ಮಾಡುತ್ತಿದ್ದಾರೆ. ಅದರಲ್ಲಿ ನನ್ನ ಸ್ನೇಹಿತರಾದ ಮುಲಾಯಂ ಕೂಡಾ ಒಬ್ಬರು. ನಮ್ಮ ಸರಕಾರದ ಬಗ್ಗೆ ತಮಾಷೆ ಮಾಡುವ ಮೊದಲು ನಿಮ್ಮದೇ ಉತ್ತರಪ್ರದೇಶ ಸರಕಾರದ ರಿಪೋರ್ಟ್ ಕಾರ್ಡ್ ಒಮ್ಮೆ ನೋಡಿ ಎಂದು ಮೋದಿ, ಮುಲಾಯಂ ಸಿಂಗ್ ಯಾದವ್ ಗೆ ಟಾಂಗ್ ನೀಡಿದ್ದಾರೆ.