ಗುಜರಾತ್, ರಾಜಸ್ಥಾನದ ಎಂಪಿಗಳನ್ನು ತುರ್ತಾಗಿ ಮೋದಿ ಭೇಟಿಯಾಗಿದ್ದು ಯಾಕೆ?
ಗುಜರಾತ್, ರಾಜಸ್ಥಾನ ಮತ್ತು ಗೋವಾದ ಬಿಜೆಪಿ ಲೋಕಸಭಾ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಮಾ 24) ಉಪಹಾರ ಕೂಟಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ.
ನವದೆಹಲಿ, ಮಾ 25: ಗುಜರಾತ್ ಮತ್ತು ರಾಜಸ್ಥಾನದ ಬಿಜೆಪಿ ಲೋಕಸಭಾ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಮಾ 24) ಉಪಹಾರ ಕೂಟಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ.
ಎರಡು ದಿನದ ಹಿಂದೆ ಉತ್ತರಪ್ರದೇಶದ ಸಂಸದರನ್ನು ದೆಹಲಿಗೆ ಕರೆಸಿದ್ದ ಮೋದಿ, ನೂತನ ಸಿಎಂ ಯೋಗಿ ಆದಿತ್ಯನಾಥ್ ಗೆ ಒತ್ತಡ ಹೇರದೇ, ಅವರಿಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದ್ದರು.
ಗುಜರಾತ್, ರಾಜಸ್ಥಾನದ ಸಂಸದರನ್ನು ಕರೆಸಿ ಯಾವ ಕ್ಷಣದಲ್ಲಾದರೂ ಚುನಾವಣೆ ಘೋಷಣೆಯಾಗಬಹುದು, ಅದಕ್ಕೆ ಪೂರ್ವತಯಾರಿ ಈಗಿಂದಲೇ ಶುರುಮಾಡಿಕೊಳ್ಳಿ ಎನ್ನುವುದಕ್ಕೆ ಮೋದಿ ಸಭೆ ಕರೆದಿದ್ದರು ಎನ್ನಲಾಗುತ್ತಿದೆ.
ಈ ಎರಡು ರಾಜ್ಯದ ಸಂಸದರ ಜೊತೆಗೆ ಗೋವಾ, ಅಂಡಮಾನ್ ನಿಕೋಬಾರಿನ ಸದಸ್ಯರನ್ನೂ ಸಭೆಗೆ ಕರೆಯಲಾಗಿತ್ತು. ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಂಸದರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಿದ್ದಾರೆ.
ಕೇಂದ್ರ ನೀಡುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ನಿಮ್ಮ ರಾಜ್ಯದ ಸರಕಾರಕ್ಕೆ ಒತ್ತಡ ಹೇರಿ ಎಂದು ಸಭೆಯನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ. ಈ ಸಭೆ ಒಂದು ರೀತಿಯಲ್ಲಿ ಚುನಾವಣೆಗೆ ಪೂರ್ವತಯಾರಿ ನಡೆಸಲು ಕರೆದ ಸಭೆಯಂತಿತ್ತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಂಸದರೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಬಿಜೆಪಿ ಕೇಂದ್ರ ಘಟಕ ಆಯೋಜಿಸಿದ್ದ ಈ ಉಪಹಾರ ಕೂಟದ ಚರ್ಚೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಸಂಸದೀಯ ವ್ಯವಹಾರ ಖಾತೆಯ ಸಚಿವ ಅನಂತ್ ಕುಮಾರ್ ಕೂಡಾ ಭಾಗವಹಿಸಿದ್ದರು.
ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ರಚಿಸುತ್ತಿರುವ ' ಕೇಂದ್ರ ಸಾಮಾಜಿಕ ಮತ್ತು ಶೈಕ್ಷಣಿಕ ಆಯೋಗದ' (NCSEBC) ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಭೆಯಲ್ಲಿ ಸಂಸದರಿಗೆ ವಿವರಿಸಿದ್ದಾರೆ. (ಚಿತ್ರ : ಪಿಟಿಐ)