ರಾಷ್ಟ್ರಪತಿ ರೇಸ್: ಇನ್ಫೋಸಿಸ್ ನಾರಾಯಣ ಮೂರ್ತಿಗೆ 4ನೇ ಸ್ಥಾನ
ರಾಷ್ಟ್ರಪತಿ ಹುದ್ದೆಗೆ ಹೋಗಬಹುದಾದ ವ್ಯಕ್ತಿಗಳ ಹೆಸರನ್ನಿಟ್ಟುಕೊಂಡು ಮಾಡಿದ ಆನ್ ಲೈನ್ ಸಮೀಕ್ಷೆಯಲ್ಲಿ ಇನ್ಫೋಸಿಸ್ ನ ಮಾಜಿ ಮುಖ್ಯಸ್ಥ ನಾರಾಯಣ ಮೂರ್ತಿ ಅವರು 4ನೇ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ನವದೆಹಲಿ, ಜೂನ್ 17: ರಾಷ್ಟ್ರಪತಿ ಯಾರಾಗಬೇಕು ಎಂಬ ನಿಟ್ಟಿನಲ್ಲಿ ಖ್ಯಾತ ಸುದ್ದಿ ಜಾಲತಾಣವಾದ ಇಂಡಿಯಾ ಟುಡೇ ಡಾಟ್ ಇನ್ ನಡೆಸಿದ ಸಮೀಕ್ಷೆಯಲ್ಲಿ ಇನ್ಫೋನಿಸ್ ನ ನಾರಾಯಣ ಮೂರ್ತಿ, ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ, ಹಾಲಿ ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖರ್ಜಿ, ಹಿರಿಯ ವಕೀಲ ಫಾಲಿ ನಾರಿಮನ್ ಮುಂತಾದ ದಿಗ್ಗಜರನ್ನು ಹಿಂದಿಕ್ಕಿ 4ನೇ ಸ್ಥಾನ ಗಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಅಂಗಳದಲ್ಲಿ ಓಡಾಡುತ್ತಿರುವ ಹೆಸರುಗಳನ್ನು ಇಟ್ಟುಕೊಂಡು ಇಂಡಿಯಾ ಟುಡೇ, 'ಕೌನ್ ಬನೇಗಾ ರಾಷ್ಟ್ರಪತಿ' ಶೀರ್ಷಿಕೆಯಡಿ ತನ್ನ ಓದುಗರಿಂದ ಆನ್ ಲೈನ್ ಮೂಲಕ ಅವರ ಆಯ್ಕೆಯನ್ನು ಸಂಗ್ರಹಿಸಿತ್ತು.
ಈ ಸ್ಪರ್ಧೆಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಹಾಗೂ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ, ಹಿರಿಯ ವಕೀಲ ಫಾಲಿ ನಾರಿಮನ್, ದೆಹಲಿ ಮೆಟ್ರೋ ರೈಲು ನಿಗಮದ ಮಾಜಿ ಮುಖ್ಯಸ್ಥ ಇ. ಶ್ರೀಧರನ್ ಇದ್ದರು.
ಈ ಹತ್ತು ಮಂದಿಯಲ್ಲಿ ಯಾರಾದಾರೂ ಆಗಬಹುದೇ ರಾಷ್ಟ್ರಪತಿ!
ಸುಮಾರು 11 ಸಾವಿರ ಮತದಾರರು ನೀಡಿರುವ ಅಭಿಪ್ರಾಯಗಳೆಲ್ಲವನ್ನೂ ಒಟ್ಟುಗೂಡಿಸಿ ತಯಾರಿಸಲಾಗಿರುವ ಪಟ್ಟಿಯಲ್ಲಿ ನಾರಾಯಣ ಮೂರ್ತಿ ಶೇ. 11.23 ಮತಗಳನ್ನು ಪಡೆಯುವ ಮೂಲಕ 4ನೇ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಇವರ ಜತೆಯಲ್ಲಿ, ಬಿಜೆಪಿ ಧುರೀಣ ಎಲ್.ಕೆ. ಆಡ್ವಾಣಿ, ಆರೆಸ್ಸೆಸ್ ನ ಮೋಹನ್ ಭಾಗವತ್, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇದ್ದರು. ಅಷ್ಟೇ ಏಕೆ, ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೆಸರನ್ನೂ ಓದುಗರ ಮುಂದಿಡಲಾಗಿತ್ತು.
ಇವರಲ್ಲಿ ಇ. ಶ್ರೀಧರನ್ ಅವರು ಶೇ. 39.51ರಷ್ಟು ಮತಗಳನ್ನು ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಶೇ. 15.52ರಷ್ಟು ಮತ ಗಳಿಸಿರುವ ಸುಷ್ಮಾ ಸ್ವರಾಜ್ ಅವರು 2ನೇ ಸ್ಥಾನ ಹಾಗೂ ಶೇ. 13.49 ಮತ ಗಳಿಸಿರುವ ಎಲ್ ಕೆ ಆಡ್ವಾಣಿ 3ನೇ ಸ್ಥಾನ ಪಡೆದಿದ್ದಾರೆ.
ಇನ್ನು, ಮೋಹನ್ ಭಾಗವತ್ (ಶೇ. 4.91) 4ನೇ ಸ್ಥಾನದಲ್ಲಿದ್ದರೆ, ಆನಂತರದ ಸ್ಥಾನಗಳಲ್ಲಿ ಅಮಿತಾಭ್ ಬಚ್ಚನ್ (ಶೇ. 4.76), ಪ್ರಣಬ್ ಮುಖರ್ಜಿ (ಶೇ. 4.55), ಫಾಲಿ ನಾರಿಮನ್ (ಶೇ.2.78), ಗೋಪಾಲ ಕೃಷ್ಣ ಗಾಂಧಿ (ಶೇ. 2.31) ಹಾಗೂ ಮುರಳಿ ಮನೋಹರ್ ಜೋಷಿ (ಶೇ. 0.93) ಇದ್ದಾರೆ.