ಮುಖ್ಯ ನ್ಯಾಯಮೂರ್ತಿಯಾಗಿ ಜೆಎಸ್ ಖೇಹರ್ ಆಯ್ಕೆ
ನ್ಯಾ. ಖೇಹರ್ ಅವರು 2010ರ ಆಗಸ್ಟ್ 8ರಿಂದ 2011ರ ಸೆಪ್ಟೆಂಬರ್ 10ರವರೆಗೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯದಾನ ಮಾಡಿದರು. 2011ರ ಸೆಪ್ಟೆಂಬರ್ 13ರಂದು ಅವರು ಸುಪ್ರೀಂಕೋರ್ಟಿಗೆ ಭಡ್ತಿ ಪಡೆದರು.
ನವದೆಹಲಿ, ಡಿಸೆಂಬರ್ 19 : ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಗದೀಶ್ ಸಿಂಗ್ ಖೇಹರ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯನ್ನಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ನೇಮಿಸಿದ್ದಾರೆ.
ಜನವರಿ 4ರಂದು ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಪೀಠವೇರಲಿರುವ ಖೇಹರ್ ಅವರು ನ್ಯಾ.ಟಿಎಸ್ ಠಾಕೂರ್ ಅವರು ತೆರವು ಮಾಡಲಿರುವ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸಿಖ್ ಸಮುದಾಯದಿಂದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಥಮ ವ್ಯಕ್ತಿ ಜೆಎಸ್ ಖೇಹರ್ ಅವರು. 2017ರ ಆಗಸ್ಟ್ 28ರವರೆಗೆ ಖೇಹರ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯದಾನ ಮಾಡಲಿದ್ದಾರೆ.
ಖೇಹರ್ ಅವರು ಹಲವಾರು ಮಹತ್ವದ ತೀರ್ಪನ್ನು ನೀಡಿದ್ದಾರೆ. ನ್ಯಾಯಮೂರ್ತಿ ಖೇಹರ್ ಅವರ ನೇತೃತ್ವದ ವಿಭಾಗೀಯ ಪೀಠ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ರದ್ದುಗೊಳಿಸಿದ್ದು ಇತ್ತೀಚಿಗೆ ಅವರು ನೀಡಿರುವ ಮಹತ್ವದ ತೀರ್ಪುಗಳಲ್ಲಿ ಒಂದು.
1979ರಲ್ಲಿ ವಕೀಲರಾಗಿ ವಕೀಲಿ ವೃತ್ತಿ ಆರಂಭಿಸಿದ ಖೇಹರ್ ಅವರು, ಹರ್ಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಹೈಕೋರ್ಟುಗಳಲ್ಲಿ ಪ್ರಾಕ್ಟೀಸ್ ಮಾಡಿದರು. 1992ರಲ್ಲಿ ಪಂಜಾಬ್ ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಆಯ್ಕೆಯಾದರು.
1999ರ ಫೆಬ್ರವರಿ 8ರಂದು ನ್ಯಾಯಮೂರ್ತಿ ಖೇಹರ್ ಅವರು ಚಂಡೀಗಢದಲ್ಲಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 2009ರಲ್ಲಿ ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರು.
2010ರ ಆಗಸ್ಟ್ 8ರಿಂದ 2011ರ ಸೆಪ್ಟೆಂಬರ್ 10ರವರೆಗೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯದಾನ ಮಾಡಿದರು. 2011ರ ಸೆಪ್ಟೆಂಬರ್ 13ರಂದು ಅವರು ಸುಪ್ರೀಂಕೋರ್ಟಿಗೆ ಭಡ್ತಿ ಪಡೆದರು.