ಬಿಹಾರ ರಾಜಕೀಯದಲ್ಲಿ ಏನೇನೆಲ್ಲಾ ಆಯ್ತು ನೋಡಿ
ಪಾಟ್ನಾ, ಫೆ. 7: ಮುಖ್ಯಮಂತ್ರಿ ಸ್ಥಾನ ತೊರೆಯಲೊಪ್ಪದ ಜಿತನ್ ರಾಮ್ ಮಾಂಝಿ ಬಿಹಾರ ವಿಧಾನಸಭೆಯನ್ನು ವಿಸರ್ಜನೆಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ. ಇದಕ್ಕೆ ಪಕ್ಷದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯಿಂದ ಮುಖ್ಯಮಂತ್ರಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಉದ್ದೇಶ ಹೊಂದಿರುವ ನಿತೀಶ್ ಯತ್ನಕ್ಕೆ ಹಿನ್ನಡೆಯಾಗಿದೆ.
ಶಾಸಕರ ತೀವ್ರ ವಿರೋಧದ ನಡುವೆಯೂ ಮಾಂಝಿ ಅವರು ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಿದ್ದಾರೆ. ಇದರಿಂದ ಉಂಟಾಗಿರುವ ಬೆಳವಣಿಗೆಗಳ ಕುರಿತು ಪಕ್ಷಿನೋಟ ಇಲ್ಲಿದೆ. [ಬಿಹಾರ ಹೈ ಡ್ರಾಮಾ]
ವಿಸರ್ಜನೆಗೆ ಜೆಡಿಯು ಬೆಂಬಲಿಗರ ವಿರೋಧ
ಮುಖ್ಯಮಂತ್ರಿ ಜಿತನ್ ರಾಜಮ್ ಮಾಂಝಿ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜನೆ ಮಾಡುವುದಾಗಿ ಸಂಪುಟ ಸಭೆಯಲ್ಲಿ ಘೋಷಿಸಿದರು. ಆಗ ಕೇವಲ ಏಳು ಸಚಿವರು ಬೆಂಬಲ ವ್ಯಕ್ತಪಡಿಸಿದರೆ, 22 ಸಚಿವರು ವಿರೋಧಿಸಿದರು. ಆದರೂ ಮಾಂಝಿ ವಿಸರ್ಜನೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದಾಗ ಶಾಸಕರು ರಾಜಭವನಕ್ಕೆ ತೆರಳಿ ಮಾಂಝಿ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಜ್ಯಪಾಲರ ಅಂಗಳದಲ್ಲಿ ಚೆಂಡು
ಮಾಂಝಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಿರುವುದರಿಂದ ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ರಾಜ್ಯಪಾಲ ಕೇಶ್ರಿನಾಥ ತ್ರಿಪಾಠಿ ಕೈಗೊಳ್ಳುವ ನಿರ್ಧಾರದ ಮೇಲೆ ಬಿಹಾರ ಸರ್ಕಾರದ ಭವಿಷ್ಯ ನಿಂತಿದೆ. ಅವರು ಮಾಂಝಿ ಅವರ ಶಿಫಾರಸ್ಸನ್ನು ಒಪ್ಪಬಹುದು ಅಥವಾ ನಿತೀಶ್ ಕುಮಾರ್ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿ ಬಹುಮತ ಸಾಬೀತುಪಡಿಸಲು ಸೂಚಿಸಬಹುದು. [ಮೋದಿ ವಿರುದ್ಧ ಒಂದಾಯ್ತು ಜನತಾ ಪರಿವಾರ]
ನಿತೀಶ್ ಕುಮಾರ್ ಬೆಂಬಲಿಗರು ಹೇಳುವುದೇನು?
ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಮಾಂಝಿ ತಮ್ಮ ಅವನತಿಗೆ ತಾವೇ ಕಾರಣರು ಎಂದು ಟೀಕಿಸಿದ್ದಾರೆ. ಮಾಂಝಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಇತರ ಸ್ಥಾನಗಳೂ ಖಾಲಿಯಾಗುತ್ತವೆ. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಂಝಿ ಬೆಂಬಲಿಗರು ಹೇಳುವುದೇನು?
ಜೆಡಿಯು ಮುಖಂಡ ನೀರಜ್ ಕುಮಾರ್ ಬಬ್ಲೂ ಪ್ರತಿಕ್ರಿಯೆ ನೀಡಿ, "ಒಂದು ವೇಳೆ ಮಾಂಝಿ ಅವರು ಬಿಜೆಪಿ ಬೆಂಬಲಿಸಲು ನಿರ್ಧರಿಸಿದರೆ ನಾವು ತಯಾರಿದ್ದೇವೆ. ಅವರು ಕೈಗೊಳ್ಳುವ ಎಲ್ಲ ನಿರ್ಧಾರಕ್ಕೂ ನಮ್ಮ ಬೆಂಬಲವಿದೆ. ಸುಮಾರು 50 ಶಾಸಕರು ಮಾಂಝಿ ಪರವಾಗಿದ್ದಾರೆ" ಎಂದು ಹೇಳಿದ್ದಾರೆ.
ನಿತೀಶ್ ಭೀಷ್ಮ ಪಿತಾಮಹ
ಮುಖ್ಯಮಂತ್ರಿ ಸ್ಥಾನದಿಂದ ದಲಿತ ವ್ಯಕ್ತಿ ಕೆಳಗಿಳಿಯುವುದನ್ನು ಸುಮ್ಮನೆ ನೋಡುತ್ತ ಕುಳಿತ ನಿತೀಶ್ ಕುಮಾರ್ 'ಭೀಷ್ಮ ಪಿತಾಮಹ' ಇದ್ದಂತೆ ಎಂದು ಮಾಂಝಿ ಟೀಕಿಸಿದ್ದಾರೆ. ತಮ್ಮ ಜೊತೆ ನಿತೀಶ್ ಮಾತನಾಡುವುದು ನಿಲ್ಲಿಸಿದ್ದು ಏಕೆ ಎಂಬುದೇ ತಿಳಿದಿಲ್ಲ ಎಂದು ಮಾಂಝಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. [ನಿತೀಶ್ ಕುಮಾರ್ ರಾಜಿನಾಮೆ]
ಶನಿವಾರ ಏನೇನಾಯ್ತು?
ಮುಖ್ಯಮಂತ್ರಿ ಮಾಂಝಿ ಅವರು ನಿತೀಶ್ ಕುಮಾರ್ರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಸಮಯದಲ್ಲಿ ಹಾಜರಿದ್ದ ಶರದ್ ಯಾದವ್ ಇಬ್ಬರೂ ಮುಖಂಡರ ಮಧ್ಯೆ ಎದ್ದಿದ್ದ ಅಸಮಾಧಾನ ಶಮನಕ್ಕೆ ಯತ್ನಿಸಿದರೂ ವಿಫಲರಾದರು.
ನಂತರ ನಡೆದ ಜೆಡಿಯು ಶಾಸಕಾಂಗ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಪಕ್ಷದ ನಾಯಕರನ್ನಾಗಿ ಆರಿಸಲಾಯಿತು. ಶರದ್ ಯಾದವ್ ಅವರು ಶುಕ್ರವಾರವಷ್ಟೇ ಜೆಡಿಯು ಶಾಸಕರ ಸಭೆಯನ್ನು ನಡೆಸಿದ್ದರು.
ಬಿಜೆಪಿ ಹೇಳುತ್ತಿರುವುದೇನು?
ದಿಢೀರ್ ಬೆಳವಣಿಗೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಿಜೆಪಿ ನಿರಾಕರಿಸಿದೆ. ಪಕ್ಷದ ವಕ್ತಾರ ಶಹನವಾಜ್ ಹುಸೇನ್ ಮಾತನಾಡಿ, "ಇದು ಜೆಡಿಯು ಪಕ್ಷದ ಆಂತರಿಕ ಸಮಸ್ಯೆ. ಆದರೆ, ಈ ಎಲ್ಲ ಸಮಸ್ಯೆಗಳಿಗೆ ನಿತೀಶ್ ಅವರೇ ಕಾರಣ. ಅವರೇ ಬಿಜೆಪಿ ಹಾಗೂ ಜೆಡಿಯು ಸ್ನೇಹವನ್ನು ಅಂತ್ಯಗೊಳಿಸಿದರು. ಆಗ ಮಾಂಝಿ ಅವರನ್ನು ಮುಖ್ಯಮಂತ್ರಿ ಮಾಡಿ, ಈಗ ಅವಮಾನಿಸುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.