ದನದ ಮಾಂಸದ ಸುತ್ತ ನಾರುತ್ತಿರುವ ರಾಜಕೀಯ ದುರ್ಮಾಂಸ
ಎನ್ ಸಿ ಆರ್ (National Capital Region) ವ್ಯಾಪ್ತಿಯಿಂದ ಕೂಗಳತೆ ದೂರದಲ್ಲಿರುವ ದಾದ್ರಿ ಎನ್ನುವ ಸಣ್ಣ ನಗರ ಉತ್ತರ ಪ್ರದೇಶದ ಗೌತಂ ಬುದ್ದ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತದ್ದು. ಚಿರಪರಿಚಿತವಲ್ಲದ ಈ ನಗರ ಈಗ ದೇಶದ ಪ್ರಚಲಿತ ಸುದ್ದಿಯ ತಾಣವಾಗಿರುವುದು ಬೇಡವಾದ ಕಾರಣಕ್ಕಾಗಿ.
ಮುಸ್ಲಿಂ ಸಮುದಾಯದ ಒಂದು ಕುಟುಂಬ ದನದ ಮಾಂಸ ಭಕ್ಷಣೆ ಮಾಡುತ್ತಿದೆ ಜೊತೆಗೆ ಮಾಂಸವನ್ನು ಶೇಖರಿಸಿ ಇಟ್ಟುಕೊಂಡಿದೆ ಎನ್ನುವ ಸುದ್ದಿ / ಗಾಳಿಸುದ್ದಿಗೆ ಹಿಂದೂ ಪರ ಸಂಘಟನೆಗಳು ಆ ಕುಟುಂಬದ ಓರ್ವನನ್ನು ಹತ್ಯೆಗೈದು, ಮತ್ತಷ್ಟು ಜನರನ್ನು ಗಾಯಗೊಳಿಸುರುವ ಘಟನೆ ಈಗ ರಾಜಕೀಯ ಪಕ್ಷಗಳಿಗೆ ವರವಾಗಿ ಪರಿಣಮಿಸಿರುವುದು ದುರಂತ. (ಇಖ್ಲಾಕ್ ಕುಟುಂಬಕ್ಕೆ 45 ಲಕ್ಷ ಪರಿಹಾರ)
ದಾದ್ರಿ ಬಳಿಯ ಬಿಶಾದಾ ಎನ್ನುವ ಗ್ರಾಮದಲ್ಲಿ ಮುಸ್ಲಿಂ ಕೋಮಿನ ಮನೆಯಲ್ಲಿ ಗೋಮಾಂಸ ಶೇಖರಣೆಯಾಗಿದೆ ಎನ್ನುವ ಶಂಕೆಯ ಸುದ್ದಿಯಿಂದಾಗಿ ಹಿಂದೂಪರ ಸಂಘಟನೆಯ ಸದಸ್ಯರು ಎನ್ನಲಾಗುವ ತಂಡ ಆ ಮನೆಗೆ ದಾಳಿ ಮಾಡಿ ಮೊಹಮ್ಮದ್ ಇಖ್ಲಾಖ್ ಎನ್ನುವವರನ್ನು ಹತ್ಯೆಗೈದಿತ್ತು.
ಪ್ರಕರಣಕ್ಕೆ ಸಂಬಂದಿಸಿದಂತೆ ಉತ್ತರಪ್ರದೇಶ ಪೊಲೀಸರು ಶಿವಂ, ವಿಶಾಲ್ ಎನ್ನುವವರನ್ನು ಸೇರಿ ಒಟ್ಟು ಎಂಟು ಜನರನ್ನು ಇದುವರೆಗೆ ಬಂಧಿಸಿದ್ದಾರೆ. ಬಂಧಿತರಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪುತ್ರನೂ ಇದ್ದಾನೆ.
ಈ ಘಟನೆಗೆ ರಾಜಕೀಯ ಸ್ವರೂಪ ಬಂದ ನಂತರ ಇದು ಈಗ ದೇಶವ್ಯಾಪಿ ಚರ್ಚೆಯ ವಿಷಯವಾಗಿದೆ, ಜೊತೆಗೆ ಮತ್ತಷ್ಟು ಇತ್ತಂಡ ಕೋಮುಗಳ ನಡುವೆ ಪ್ರಚೋದನೆಗೆ ಕಾರಣವಾಗಿದೆ.
ಬಿಹಾರ ಚುನಾವಣೆಯ ದಿನಾಂಕ ಘೋಷಣೆಯಾಗಿರುವುದರಿಂದ ಇದನ್ನೇ ಬಿಜೆಪಿ ವಿರುದ್ದ ಬಳಸಿಕೊಳ್ಳುವ ರಾಜಕೀಯ ತಂತ್ರಗಾರಿಕೆಯಿಂದಾಗಿ ಈ ಕೋಮು ಬೆಂಕಿಗೆ ನೀರು ಬೀಳುವ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.
ಇಲ್ಲಿನ ಮುಸ್ಲಿಂ ಕುಟುಂಬದ ಮೇಲೆ ಮತ್ತಷ್ಟು ವ್ಯವಸ್ಥಿತ ದಾಳಿ ನಡೆಯಬಹುದು ಎನ್ನುವುದನ್ನು ಅರಿತ ಹಿಂದೂ ಕುಟುಂಬದ ಮೂವರು ಯುವಕರು, ಆ ಕುಟುಂಬದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಜನರನ್ನು ಪಾರು ಮಾಡಿರುವ ಮಾನವೀಯ ಘಟನೆಯೂ ವರದಿಯಾಗಿದೆ.
ಎಪ್ಪತ್ತು ಜನರಿದ್ದ ನಮ್ಮ ಕುಟುಂಬವನ್ನು ಎರಡು ತಾಸಿನೊಳಗೆ, ಬೇರೆ ದಾರಿಯಲ್ಲಿ ಮೂವರು ಯುವಕರು ಕರೆದುಕೊಂಡು ಹೋಗದೇ ಇದ್ದಲ್ಲಿ ಇಂದು ನಾವು ಬದುಕಿ ಉಳಿಯುತ್ತಿರಲಿಲ್ಲ ಎಂದು ಆ ಕುಟುಂಬದ ಸದಸ್ಯರೊಬ್ಬರು ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಪಕ್ಷಗಳು ಘಟನೆಯ ಸುತ್ತಮುತ್ತ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಸ್ಥಳೀಯರೇ ದೂರುತ್ತಿದ್ದಾರೆ. ಈ ಘಟನೆಯನ್ನು ಉಲ್ಲೇಖಿಸಿ ಕೆಲವೊಂದು ರಾಜಕೀಯ ಪಕ್ಷಗಳು ನೀಡಿರುವ ಹೇಳಿಕೆ, ಮುಂದೆ ಓದಿ..
ರಾಜನಾಥ್ ಸಿಂಗ್
ದಾದ್ರಿ ಘಟನೆಯ ನಂತರ ಯಾವುದೇ ಹೇಳಿಕೆ ನೀಡದಿದ್ದ ಕೇಂದ್ರ ಗೃಹ ಸಚಿವಾಲಯ ಮೊದಲ ಬಾರಿಗೆ ಹೇಳಿಕೆ ನೀಡಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದಾದ್ರಿ ಪ್ರಕರಣ ನಡೆದಿದ್ದು ದುರದೃಷ್ಟಕರ. ಆದರೆ, ಈ ಪ್ರಕರಣಕ್ಕೆ ಕೋಮು ಹಾಗೂ ರಾಜಕೀಯ ಬಣ್ಣ ನೀಡುವ ಪ್ರಯತ್ನ ನಡೆಯಬಾರದು ಎಂದು ಮನವಿ ಮಾಡಿದ್ದಾರೆ.
ಅಸಾದುದ್ದೀನ್ ಓವೈಸಿ
ಇಖ್ಲಾಕ್ ಕುಟುಂಬವನ್ನು ಭೇಟಿ ಮಾಡಿ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಹೈದರಾಬಾದ್ ಸಂಸದ ಓವೈಸಿ, ಇದು ದನದ ಮಾಂಸದ ವಿಚಾರವಾಗಿ ನಡೆದ ಹತ್ಯೆಯಲ್ಲ. ಧರ್ಮದ ಮೇಲೆ ನಡೆದ ಪೂರ್ವಯೋಜಿತ ದಾಳಿ. ಇಖ್ಲಾಕ್ ಅವರನ್ನು ನಿರ್ದಯವಾಗಿ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.
ಮಹೇಶ್ ಶರ್ಮಾ
ದಾದ್ರಿ ಪ್ರಕರಣ ತಪ್ಪು ತಿಳುವಳಿಕೆಯಿಂದ ಆಗಿರುವಂತದ್ದು, ಇದಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ವಿರೋಧ ಪಕ್ಷದವರಿಗೆ ಯಾವ ವಿಷಯವೂ ಸಿಗುತ್ತಿಲ್ಲ, ಹಾಗಾಗಿ ದಾದ್ರಿ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ.(ಚಿತ್ರ:ಪಿಟಿಐ)
ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಾಚಿ ಸಾಧ್ವಿ
ಗೋಮಾಂಸ ಸೇವನೆ ಮಾಡುವವರಿಗೆ ದಾದ್ರಿ ಹತ್ಯೆ ಪ್ರಕರಣದಂತೆ ಶಿಕ್ಷೆಯಾಗಬೇಕು. ಈ ಘಟನೆಯಲ್ಲಿ ಉತ್ತರಪ್ರದೇಶದ ಸಚಿವ ಆಜಂ ಖಾನ್ ಅವರ ಕೈವಾಡ ಇದ್ದರೂ ಇರಬಹುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಶಾಸಕ
ನಿರ್ದೋಷಿಗಳಿಗೆ ವಿನಾಕಾರಣ ಶಿಕ್ಷೆಯಾದರೆ ನಾವು ಸುಮ್ಮನಿರುವುದಿಲ್ಲ. ಈ ಹಿಂದೆ ಕೂಡಾ ಸರಿಯಾದ ಪಾಠ ಕಲಿಸಿದ ಅನುಭವವಿದೆ, ಅದನ್ನು ಇಲ್ಲಿ ಪ್ರಯೋಗಿಸುತ್ತೇವೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್
ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಶಾಂತಿಯಿಂದ ಇದ್ದ ಈ ಗ್ರಾಮದಲ್ಲಿ ಈಗ ಅಶಾಂತಿ ನೆಲೆಸಿದೆ, ಇದೊಂದು ದುರದೃಷ್ಟಕರ ಘಟನೆ ಎಂದು ಅಲ್ಲಿಗೆ ಭೇಟಿ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸಾಕ್ಷಿ ಮಹಾರಾಜ್
ಅಖಿಲೇಶ್ ಸರಕಾರ ಮೃತ ಕುಟುಂಬಕ್ಕೆ ನಲವತ್ತು ಲಕ್ಷ ರೂಪಾಯಿ ನೀಡುತ್ತದೆ. ಈ ರೀತಿಯ ಘಟನೆಯಲ್ಲಿ ಮುಸ್ಲಿಂ ಸಮುದಾಯದವರು ಸತ್ತರೆ ಲಕ್ಷ ಲಕ್ಷ ರೂಪಾಯಿ ನೀಡುತ್ತದೆ, ಆದರೆ ಹಿಂದೂ ಕುಟುಂಬಕ್ಕೆ ಇಪ್ಪತ್ತು ಸಾವಿರ ರೂಪಾಯಿ ಕೂಡಾ ನೀಡುವುದಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ
ದಶಕಗಳಿಂದ ಕೋಮು ಸೌಹಾರ್ದತೆಯಿಂದ ಬದುಕುತ್ತಿದ್ದವರು ರಾಜಕೀಯ ಕಾರಣಗಳಿಂದ ಒಬ್ಬರೊನ್ನೊಬ್ಬರು ದ್ವೇಷಿಸುತ್ತಿರುವುದು ವಿಷಾದನೀಯ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಹೇಳಿಕೆ ನೀಡಿದ್ದಾರೆ. (ಚಿತ್ರ:ಪಿಟಿಐ)