ಉ.ಪ್ರ: ಗೋಮಾಂಸ ಮಾರಾಟ ಅಂಗಡಿಗಳ ಮೇಲೆ ಪೊಲೀಸರ ದಾಳಿ
ಕಾರ್ಯಾಚರಣೆಯ ಪ್ರಥಮ ಹೆಜ್ಜೆಯಾಗಿ ಗೋರಖ್ ಪುರ ಸುತ್ತಲಿನ ಕಾರ್ಯಾಚರಣೆಗಳಲ್ಲಿ ಗೋಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿದೆ.
ಲಕ್ನೋ, ಮಾರ್ಚ್ 21: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಯೋಗಿ ಆದಿತ್ಯನಾಥ ಅವರು, ಬಿಜೆಪಿ ಪಕ್ಷವು ಚುನಾವಣೆಗೂ ಮುನ್ನ ನೀಡಿದ್ದ ಅಶ್ವಾಸನೆಗಳ ಈಡೇರಿಕೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಮಂಗಳವಾರ, ಬೆಳ್ಳಂಬೆಳಗ್ಗೆಯೇ ಅನಧಿಕೃತ ಕಸಾಯಿ ಖಾನೆಗಳಿಗೆ ಬೀಗ ಬಿದ್ದಿದೆ. ಮಧ್ಯಾಹ್ನದ ಹೊತ್ತಿಗೆ ಬೀದಿ ಕಾಮಣ್ಣರನ್ನು ಬಗ್ಗು ಬಡಿಯುವ ಕಾರ್ಯಾಚರಣೆ ಆರಂಭವಾಗಿದೆ.
ಈ ಎರಡೂ ಕಾರ್ಯಾಚರಣೆಗಳು ಎಲ್ಲರ ಹುಬ್ಬೇರಿಸುವಷ್ಟರಲ್ಲಿ, ಸಂಜೆ ವೇಳೆ, ಪೊಲೀಸರು ಗೋರಖ್ ಪುರ ಪ್ರಾಂತ್ಯಗಳಲ್ಲಿರುವ ಗೋ ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಿಸಿದ್ದಾರೆ.
ಈ ಹಿಂದೆ, ಗೋರಖ್ ಪುರದಲ್ಲಿ ಆದಿತ್ಯನಾಥ ಅವರ ಪ್ರಭಾವ ಇದ್ದಿದ್ದರಿಂದ ಅಲ್ಲಿದ್ದ ಗೋ ಮಾಂಸದ ಅಂಗಡಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದವು. ಆದರೀಗ, ಅವು ಎಲ್ಲೇ ಇರಲಿ ಗೋಮಾಂಸ ಮಾರಾಟಗಾರರಿಗೆ ನಡುಕ ಶುರುವಾಗಿದೆ. ಕಾರ್ಯಾಚರಣೆಯ ಪ್ರಥಮ ಹೆಜ್ಜೆಯಾಗಿ ಗೋರಖ್ ಪುರ ಸುತ್ತಲಿನ ಕಾರ್ಯಾಚರಣೆಗಳಲ್ಲಿ ಗೋಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿದೆ.
ಕಾರ್ಯಾಚರಣೆ ವೇಳೆ, ಪೊಲೀಸರ ವಿರುದ್ಧ ಗೋ ಮಾಂಸ ಮಾರಾಟಗಾರರು ತಿರುಗಿಬಿದ್ದಿದ್ದಾರೆ. ನಮಗೆ ಗೋ ಮಾಂಸ ಮಾರಾಟವೇ ಪ್ರಮುಖ ಜೀವನಾಧಾರವಾಗಿದ್ದು, ನಮಗೆ ಯೋಗಿಯವರು ಮತ್ತೊಂದು ಉದ್ಯೋಗ ನೀಡಿದರೆ ಅನುಕೂಲವಾಗುತ್ತದೆ ಎಂದು ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.