ಸಚಿತ್ರ ವರದಿ: ಐತಿಹಾಸಿಕ ಲಿಂಗರಾಜ್ ದೇವಾಲಯದಲ್ಲಿ ಮೋದಿ
ಮೋದಿ ತಮ್ಮ ಕಾರಿನಲ್ಲಿ ಭುವನೇಶ್ವರ ಲಿಂಗರಾಜ್ ದೇವಸ್ಥಾನದ ಮುಂಭಾಗ ಬಂದಿಳಿಯುತ್ತಿದ್ದಂತೆ ಸ್ಥಳೀಯರು ಪ್ರಧಾನಿಗೆ ಸ್ವಾಗತ ಕೋರಲು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರಧಾನಿ ನೋಡಲು ಮಹಡಿಗಳ ಮೇಲೆಲ್ಲ ಜನ ನಿಂತಿದ್ದರು.
ಭುವನೇಶ್ವರ, ಏಪ್ರಿಲ್ 16: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಒಡಿಶಾಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಿಗ್ಗೆ ಐತಿಹಾಸಿಕ ಭುವನೇಶ್ವರದ ಲಿಂಗರಾಜ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ಇಲ್ಲಿನ ಜನ ಪ್ರಧಾನಿಗೆ ಅಭೂತಪೂರ್ವ ಸ್ವಾಗತ ನೀಡಿದರು.
ಮೋದಿ ತಮ್ಮ ಕಾರಿನಲ್ಲಿ ದೇವಸ್ಥಾನದ ಮುಂಭಾಗ ಬಂದಿಳಿಯುತ್ತಿದ್ದಂತೆ ಸ್ಥಳೀಯರು ಪ್ರಧಾನಿಗೆ ಸ್ವಾಗತ ಕೋರಲು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರಧಾನಿ ನೋಡಲು ಮಹಡಿಗಳ ಮೇಲೆಲ್ಲ ಜನ ನಿಂತಿದ್ದರು. ಕಾರಿನಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ನೆರೆದವರತ್ತ ಕೈ ಬೀಸಿ
ದೇವಸ್ಥಾನದತ್ತ ತೆರಳಿದರು. ಅವರಿಗೆ ಬಿಜೆಪಿ ನಾಯಕರು ಮೊತ್ತು ದೇವಸ್ಥಾನದ ಅರ್ಚಕರು ಸಾಥ್ ನೀಡಿದರು.[ಡೊನಾಲ್ಡ್ ಟ್ರಂಪ್ ಹಿಂದಿಕ್ಕಿ ಟಾಪ್ ಸ್ಥಾನಕ್ಕೇರಿದ ಮೋದಿ]
ದೇವಸ್ಥಾನದ ಆವರಣದಲ್ಲಿ ಮೋದಿ ಸುಮಾರು 25ನಿಮಿಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಅವರು ವಿಶೇಷ ಪೂಜೆಯ ಹಿನ್ನಲೆಯಲ್ಲಿ ಲಿಂಗರಾಜ ದೇವರಿಗೆ ಹೂವು, ಹಾಲು, ತೆಂಗಿನಕಾಯಿ, ಬಿಲ್ವ ಪತ್ರೆ ಎಲೆಗಳು ಅರ್ಪಿಸಿದರು.
ಪ್ರಾರ್ಥನೆ ಸಲ್ಲಿಸಿದ ಮೋದಿ
ದೇವಸ್ಥಾನದ ಆವರಣದಲ್ಲಿರುವ ಪಾರ್ವತಿ ದೇವಿ ಸೇರಿದಂತೆ ಎಲ್ಲಾ ದೇವರುಗಳ ಮುಂದೆ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು ಎಂದು ಮಾರ್ಗದರ್ಶಿಯೊಬರು ಹೇಳಿದ್ದಾರೆ.
ಇತಿಹಾಸ ಕೇಳಿ ತಿಳಿದುಕೊಂಡ ಮೋದಿ
ಮಾರ್ಗದರ್ಶಿ ಬಳಿಯಲ್ಲಿ ನರೇಂದ್ರ ಮೋದಿ 11ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯದ ಇತಿಹಾಸ ಪರಂಪರೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 'ದೇವಸ್ಥಾನದ ಸಂಪ್ರದಾಯ, ಸ್ವಚ್ಛತೆ, ಆಚರಣೆಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,' ಎಂದು ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ.[ಒರಿಸ್ಸಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಬಿಜೆಪಿಯಿನ್ನೂ ಉತ್ತುಂಗಕ್ಕೇರಿಲ್ಲ]
ಮಾರ್ಗದರ್ಶಿಗಳ ಜತೆ ಸೆಲ್ಫಿ
ದೇವಸ್ಥಾನ ಭೇಟಿಯ ನಂತರ ಮಾರ್ಗದರ್ಶಿಗಳು ಪ್ರಧಾನಿ ಜತೆ ಸೆಲ್ಫಿ ತೆಗೆದುಕೊಂಡರು. ಗ್ರೂಪ್ ಫೊಟೋಗೂ ಪ್ರಧಾನಿ ಪೋಸ್ ನೀಡಿದರು. ದೇವಾಲಯದಿಂದ ವಾಪಸ್ಸು ಬರುವಾಗ ವಿವಿಐಪಿ ಪ್ರವಾಸಿಗಳಿಗೆ ಮೀಸಲಾದ ಪುಸ್ತಕದಲ್ಲಿ ಸಹಿ ಮಾಡಿ ಪ್ರಧಾನಿ ಹೊರ ಬಂದರು.
ಮೋದಿ.. ಮೋದಿ..
ಮೋದಿ ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಅಪಾರ ಜನಸ್ತೋಮ ಅವರಿಗಾಗಿ ಕಾದಿತ್ತು. ಅಭಿಮಾನಿಗಳನ್ನು ಕಂಡು ಬರಿಗಾಗಲಲ್ಲಿದ್ದ ಮೋದಿ ಹಾಗೇ ಸ್ವಲ್ಪ ದೂರ ನಡೆದುಕೊಂಡು ಹೋದರು. ಬ್ಯಾರಿಕೇಡ್ ಸಮೀಪ ಹೋಗಿ 'ಮೋದಿ, ಮೋದಿ..' ಎಂದು ಕೂಗುತ್ತಿದ್ದ ಜನಸ್ತೋಮಕ್ಕೆ ಹಸ್ತಲಾಘವ ಮಾಡಿದರು. ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವ ಜನತಾ ಮೈದಾನಕ್ಕೆ ತೆರಳಿದರು.
ರಾಷ್ಟ್ರೀಯ ಕಾರ್ಯಕಾರಿಣಿ
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಶನಿವಾರ (ಏ15) ದಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಶನಿವಾರ ಪೂರ್ವಾಹ್ನ 11.30ಕ್ಕೆ ಆರಂಭವಾದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಮಿತ್ ಶಾ, ಪ್ರಧಾನಿ ಮೋದಿ, ಎಲ್ ಕೆ ಆಡ್ವಾಣಿ, ಅರುಣ್ ಜೇಟ್ಲಿ ಸೇರಿದಂತೆ 13 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು ಭಾಗವಹಿಸಿದ್ದಾರೆ. ರಾಜ್ಯದಿಂದ ಯಡಿಯೂರಪ್ಪ, ಅರವಿಂದ ಲಿಂಬಾವಳಿ ಮುಂತಾದವರು ಭಾಗವಹಿಸಿದ್ದಾರೆ. ಇಂದು ಕಾರ್ಯಕಾರಿಣಿ ಕೊನೆಗೊಳ್ಳಲಿದೆ.