ಸ್ವಲ್ಪ ದಿನ ಸಹಿಸಿಕೊಳ್ಳಿ: ಪ್ರಧಾನಿ ನರೇಂದ್ರ ಮೋದಿ ಮನವಿ
ಶ್ರೀಮಂತರು ತಮ್ಮ ಕಾಳಧನವನ್ನು ಸಕ್ರಮ ಮಾಡಿಕೊಳ್ಳಲು ನಿಮ್ಮ ಜನಧನ ಖಾತೆಗೆ ತುಂಬಿಸಿಕೊಳ್ಳುವಂತೆ ಹೇಳುತ್ತಾರೆ ಅಂತಹ ವಿಷಯಗಳಿಗೆ ಆಸ್ಪಾದ ಕೊಡಬೇಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
ಆಗ್ರಾ, ನವೆಂಬರ್, 20: ಈ ದೇಶದ ದಲಿತರು, ರೈತರು, ಬಡವರು ನೋಟು ನಿಷೇಧ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ನೋಟು ನಿಷೇಧ ಮಾಡಿದಾಗಲೇ ಸಾರ್ವಜನಿಕರಲ್ಲಿ 50 ದಿನ ಕಾಲಾವಕಾಶ ಕೇಳಿದ್ದೆ. ಸಮಸ್ಯೆ ಎದುರಾಗಬಹುದೆಂದು ಮೊದಲೇ ನಾನು ತಿಳಿಸಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಲ್ಲಿ ಭಾರತೀಯ ಜನತಾ ಪಕ್ಷದಿಂದ ಇಲ್ಲಿ ಹಮ್ಮಿಕೊಂಡಿದ್ದ ಪರಿವರ್ತನಾ ರ್ಯಾಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರೂ. 500 ಹಾಗು ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದರಿಂದ ದೇಶಕ್ಕಾಗುವ ಪ್ರಯೋಜನಗಳ ಕುರಿತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಿಳಿಸಿದರು.
ನೋಟು ನಿಷೇಧ ಕುರಿತು ಪ್ರತಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಚಿಟ್ ಫಂಡ್ ನಂತಹ ಯೋಜನೆಗಳು ಜನ ಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ಮೋಸ ಮಾಡಿವೆ ಎಂಬುದನ್ನು ನೆನಪಿಸುವ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.
ಮಮತಾ ಬ್ಯಾನರ್ಜಿಯವರ ನೇತೃತ್ವದ ತೃಣಮೂಲ ಕಾಂಗ್ರೆಸ್ ನಾಯಕರು ನಡೆಸಿದ ಶಾರದಾ ಚಿಟ್ ಫಂಡ್ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು ಬಡವರು, ಕೂಲಿ ಕರ್ಮಿಕರು ಕಷ್ಟಪಟ್ಟು ದುಡಿದ ಹಣ ರಾಜಕಾರಣಿಗಳ ಕಿಸೆಗೆ ಸೇರುತ್ತಿದ್ದವು ಈಗ ಅದಕ್ಕೆ ಭಾರೀ ಪೆಟ್ಟು ಬಿದ್ದಿದೆ. ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ ಅವರು "ನೋಟು ನಿಷೇಧದ ವಿರುದ್ಧ ಪ್ರತಿಭಟಿಸುತ್ತಿರುವವರಿಂದ ಪ್ರಾಮಾಣಿಕತೆಯ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು.
70 ವರ್ಷಗಳಿಂದ ದೇಶವನ್ನು ಆಳಿದವರು ಈ ಅವ್ಯವಸ್ಥೆಯ ಬಗ್ಗೆ ತಿಳಿದಿದ್ದರೂ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಈ ಕ್ರಮಕ್ಕೆ ಅವರು ಮುಂದಾಗಿರಲಿಲ್ಲ ನಾವು ಕ್ರಮ ಕೈಗೊಂಡಿದ್ದೇವೆ, ಎಂದು ಅವರು ಹೇಳಿದರು.
ನಾನು ಬಡವರು ಮತ್ತು ಮಧ್ಯಮ ವರ್ಗದವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ, 50 ದಿನ ನಿಮ್ಮ ಬೆಂಬಲ ನೀಡಿ ಸಾಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಡವರಿಗಾಗಿ ಸೂರು ಕಲ್ಪಿಸುವ ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು ಮೋದಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾನುವಾರ ಸಂಭವಿಸಿದ ರೈಲು ದುರಂತದ ಕುರಿತು ಮೋದಿ ಅವರು ಸಂತಾಪ ವ್ಯಕ್ತಪಡಿಸಿದರು.