ಸಣ್ಣ ಉದ್ದಿಮೆದಾರರಿಗೆ ನರೇಂದ್ರ ಮೋದಿ ಬಹಿರಂಗ ಪತ್ರ
ದೇಶದಲ್ಲಿ ಸಣ್ಣ ಉದ್ದಿಮೆ ನಡೆಸುತ್ತಿರುವ ಸಹೋದರರೆ, ಸಹೋದರಿಯರೆ,
ತರಕಾರಿ, ಹಾಲು, ದವಸಧಾನ್ಯ ಮಾರುವವರು, ಅಗಸ, ಪೇಪರ್ ಹಾಕುವವರು, ನೇಕಾರರು, ಕಲಾಕಾರರು, ಹೂಗಾರರು... ನೀವು ಯಾರೇ ಇರಬಹುದು, ನೀವೆಲ್ಲ ಈ ದೇಶದ ಬೆನ್ನೆಲುಬು. ಈ ದೇಶಕ್ಕೆ ನೀವು ಒದಗಿಸುತ್ತಿರುವ ಆರ್ಥಿಕ ಸುಭದ್ರತೆ ಕಡೆಗಣಿಸಲಾಗಿರುವ ರಹಸ್ಯ.
ದೊಡ್ಡ ಕಂಪನಿಗಳು ಆರ್ಥಿಕ ಸದೃಢತೆ ನೀಡುತ್ತವೆ ಎಂದು ತಿಳಿಯಲಾಗಿದ್ದರೂ, ಐದೂವರೆ ಕೋಟಿಗೂ ಹೆಚ್ಚಿರುವ ನಿಮ್ಮಂಥ ವ್ಯಾಪಾರಿಗಳು, ಸಣ್ಣಸಣ್ಣ ಉತ್ಪಾದನೆಗಳ ಮುಖಾಂತರ ದೇಶವನ್ನು ಮುನ್ನಡೆಸುತ್ತಿದ್ದೀರಿ. ಅಲ್ಲದೆ, ಪರಿಶಿಷ್ಟ ವರ್ಗ, ಜನಾಂಗ, ಹಿಂದುಳಿದವರು ಸೇರಿದಂತೆ ಸುಮಾರು 11ರಿಂದ 12 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿರುವವರು ನೀವೇ. ದೇಶದ ಬೆಳವಣಿಗೆಗಾಗಿ, ಉದ್ಯೋಗಕ್ಕಾಗಿ ಮತ್ತು ಸಂಮೃದ್ಧಿಗಾಗಿ ದೇಶ ನಿಮ್ಮನ್ನೇ ನೆಚ್ಚಿಕೊಂಡಿದೆ.
ನಿಮ್ಮ ಕೈಗಳನ್ನು ಬಲಪಡಿಸಿದರೆ ನೀವು ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೀರಿ ಎಂಬುದು ನನ್ನ ಬಲವಾದ ನಂಬುಗೆ. ಅಧಿಕಾರಿಗಳ ಅಡೆತಡೆಯಿಲ್ಲದೆ ಸರಾಗವಾಗಿ ವ್ಯಾಪಾರ ನೀವು ನಡೆಸಿಕೊಂಡು ಹೋಗಬೇಕು, ದೈನಂದಿನ ಚಟುವಟಿಕೆಗಳಿಗಾಗಿ, ಸಾಮಗ್ರಿಗಳಿಗಾಗಿ, ಉತ್ಪನ್ನಗಳನ್ನು ಮಾರಾಟ ಮಾಡಲಿಕ್ಕಾಗಿ ಸುಲಭವಾಗಿ ಸಾಲ ಸಿಗಬೇಕು.
ಯಾವುದೇ ಆರ್ಥಿಕ ಮುಗ್ಗಟ್ಟು ಬರದಂತೆ ನಿಮ್ಮನ್ನು ರಕ್ಷಿಸುವುದು ಮತ್ತು ನಿಮ್ಮ ಭವಿಷ್ಯ ನಿರಾತಂಕವಾಗಿ ನಡೆಯಬೇಕೆನ್ನುವುದು ನಮ್ಮ ಅಭಿಪ್ರಾಯ. ಇದು ಸಾಧ್ಯವಾದರೆ, ದೇಶವನ್ನು ನೀವು ಮತ್ತಷ್ಟು ಸದೃಢ ಮಾಡುತ್ತೀರಿ ಎಂದು ನಾನು ನಂಬಿದ್ದೇನೆ.
ಇಂಥ ಮನಸ್ಥಿತಿ ಇಟ್ಟುಕೊಂಡು, ನಿಮಗೆ ಸಹಾಯವಾಗಲೆಂದು ನನ್ನ ಸರಕಾರ ಅನೇಕ ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೆಲವೊಂದನ್ನು ಈಗಾಗಲೆ ಜಾರಿ ತರಲಾಗಿದೆ, ಮತ್ತಷ್ಟು ಯೋಜನೆಗಳನ್ನು ಈ ಬಜೆಟ್ಟಿನಲ್ಲಿ ಹೇಳಿದಂತೆ ಮುಂದಿನ ದಿನಗಳಲ್ಲಿ ಸಾಕಾರಗೊಳಿಸಲಾಗುವುದು.