ಎಎಪಿ ಸಂಸದನಿಗೆ ನೀರು ಕುಡಿಸಿದ ಮೋದಿ, ಕಿಲಕಿಲ ನಕ್ಕ ಸೋನಿಯಾ
ನವದೆಹಲಿ, ಡಿಸೆಂಬರ್, 16: ದೆಹಲಿ ಮುಖ್ಯಮಂತ್ರಿ ಕಚೇರಿಯ ಮೇಲೆ ಸಿಬಿಐ ವಿನಾ ಕಾರಣ ದಾಳಿ ನಡೆಸಿದೆ ಎಂದು ಆರೋಪಿಸಿ ಸಂಸತ್ ನ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಎಎಪಿ ಸಂಸದ ಭಾಗವಂತ್ ಮನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ನೀರು ಕುಡಿಸಿದ್ದಾರೆ.
ಹೌದು.. ಇದರಲ್ಲಿ ಅತಿಶಯೋಕ್ತಿ ಏನಿಲ್ಲ. ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತಿದ್ದ ಭಾಗವಂತ್ ಮನ್ ಸುಸ್ತಾಗಿ ನೀರಿಗಾಗಿ ಹುಡುಕಾಡುತ್ತಿದ್ದರು. ತಕ್ಷಣ ಇದನ್ನು ಮನಗಂಡ ಪ್ರಧಾನಿ ಅವರಿದ್ದಲ್ಲಿಗೆ ತೆರಳಿ ಒಂದು ಲೋಟ ನೀರು ನೀಡಿದ್ದಾರೆ. ಪ್ರಧಾನಿ ನೀಡಿದ ನೀರನ್ನು ಮುಗುಳ್ನಗುತ್ತಲೇ ಸ್ವೀಕರಿಸಿದ ಮನ್ ನೀರು ಕುಡಿದು ಮುಂದಕ್ಕೆ ಹೆಜ್ಜೆ ಹಾಕಿದ್ದಾರೆ.['ಮೋದಿ ತಪ್ಪು ಒಪ್ಪಿಕೊಂಡ್ರೆ ನಾನು ಕ್ಷಮೆ ಕೇಳುತ್ತೇನೆ']
ಎಎಪಿ ಸದಸ್ಯರು ಮತ್ತು ಕಾಂಗ್ರೆಸ್ ನ ಹಲವು ಸದಸ್ಯರು ಪ್ರಶ್ನೋತ್ತರ ಕಲಾಪವನ್ನು ಮುಂದೂಡಬೇಕು ಎಂದು ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಭಗವಂತ್ ಮನ್ ಪಂಜಾಬ್ ನ ಸಂಗ್ರೂರ್ ಕ್ಷೇತ್ರದ ಎಎಪಿ ಸಂಸದ.[ಪ್ರಧಾನಿ ಹೇಡಿ ಎಂದ ಅರವಿಂದ]
ಪ್ರಧಾನಿಯವರೇ ಸ್ವತಃ ನೀರು ನೀಡಿದ ವಿಷಯವನ್ನು ತಿಳಿದ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಕೂಡ ಜೋರಾಗಿ ನಕ್ಕರು. ಡಿಸೆಂಬರ್ 15 ರಂದು ಸಿಬಿಐ ಅಧಿಕಾರಿಗಳು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ಸಿಬಿಐ ಬಳಸಿ ನನ್ನನ್ನು ಕಟ್ಟಿಹಾಕಲು ನೋಡುತ್ತಿದೆ ಎಂದು ಆರೋಪಿಸಿದ್ದರು.