ಕಾಶ್ಮೀರದಲ್ಲಿನ್ನು ಸೇನೆಯಿಂದ ಪ್ಲಾಸ್ಟಿಕ್ ಗುಂಡುಗಳ ಬಳಕೆ
ಕಾಶ್ಮೀರದಲ್ಲಿ ಪೆಲೆಟ್ ಗನ್ಸ್ ಗಳನ್ನು ಬಳಕೆಯಾಗುತ್ತಿತ್ತು. ಅವುಗಳ ಬಳಕೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.
ಶ್ರೀನಗರ, ಏಪ್ರಿಲ್ 17: ಕಾಶ್ಮೀರ ಕಣಿವೆಯಲ್ಲಿ ಗಲಭೆ ನಿರತರನ್ನು ಹತ್ತಿಕ್ಕಲು ಇನ್ನು ಮುಂದೆ ಭಾರತೀಯ ಸೇನೆಯು ಪ್ಲಾಸ್ಟಿಕ್ ಬುಲೆಟ್ ಗಳನ್ನು ಬಳಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ಲಾಸ್ಟಿಕ್ ಗುಂಡುಗಳು ದೇಹವನ್ನು ತಾಗುತ್ತವೆಯೇ ಹೊರತು ದೇಹವನ್ನು ತೂರಿಕೊಂಡು ಒಳಗೆ ಹೋಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈವರೆಗೆ, ಕಾಶ್ಮೀರದಲ್ಲಿ ಪೆಲೆಟ್ ಗನ್ಸ್ ಗಳನ್ನು ಬಳಕೆಯಾಗುತ್ತಿತ್ತು. ಇದರಿಂದ ಬಂದ ಪೆಲೆಟ್ಸ್ ಗಳು ನೆಲಕ್ಕೆ ಬಡಿದ ಕೂಡಲೇ ಅದರಿಂದ ಚಿಮ್ಮುತ್ತಿದ್ದ ಅದರ ತುಣುಕುಗಳು ಗಲಭೆ ನಿರತರನ್ನು ಭೀಕರವಾಗಿ ಗಾಯಗೊಳಿಸುತ್ತಿತ್ತು. ಅದೆಷ್ಟೋ ಉದ್ರಿಕ್ತ ಜನರು ಇದರಿಂದ ಕಣ್ಣು ಕಳೆದುಕೊಂಡ ಪ್ರಕರಣಗಳು ದಾಖಲಾಗಿದ್ದವು.
ಹೀಗಾಗಿ, ಅವುಗಳ ಬಳಕೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ ಪೆಲೆಟ್ ಪಿಸ್ತೂಲುಗಳ ಬಳಕೆಯನ್ನು ತಗ್ಗಿಸಲು ನಿರ್ಧರಿಸಿದೆ.
ಆದರೆ, ಪೆಲೆಟ್ ಪಿಸ್ತೂಲುಗಳು ಸಂಪೂರ್ಣವಾಗಿ ನಿಷೇಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ, ಗಲಭೆಯು ನಿಯಂತ್ರಿಸಲಾಗದ ಮಟ್ಟಕ್ಕೆ ಹೋದಾಗ ಮಾತ್ರ ಅವುಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.