ಅರುಣಾಚಲ ಪ್ರದೇಶದಲ್ಲಿ ಚೀನಿ ಭಾಷೆ ಸಂದೇಶ ಹೊತ್ತ ಪಾರಿವಾಳಗಳ ಸೆರೆ
ಇಟಾನಗರ್, ಮೇ 22: ಚೀನಿ ಭಾಷೆಯಲ್ಲಿ ಬರೆದಿದ್ದ ಸಂಖ್ಯೆಗಳ ಟ್ಯಾಗ್ ಗಳನ್ನು ಒಳಗೊಂಡ ಪಾರಿವಾಳಗಳನ್ನು ಚೀನಾ-ಭಾರತದ ಗಡಿಯಲ್ಲಿ ಭಾನುವಾರ ಹಿಡಿಯಲಾಗಿದೆ. ಅರುಣಾಚಲಪ್ರದೇಶದ ಅಂಜಾ ಗ್ರಾಮಸ್ಥರು ಇವುಗಳನ್ನು ಗುರುತಿಸಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರನ್ನು ನೀಡಿದ್ದು, ತನಿಖೆ ನಡೆಯುತ್ತಿದೆ.
ಈ ಬಗ್ಗೆ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಭದ್ರತಾ ಅಧಿಕಾರಿಗಳ ಪ್ರಕಾರ ಇದು ಚೀನಾದ ಗೂಢಚರ್ಯೆಯ ಭಾಗ ಎನ್ನಲಾಗಿದೆ. ಪಾರಿವಾಳಗಳಿಗೆ ಟ್ರಾನ್ಸ್ ಮಿಟರ್ ಅಳವಡಿಸಲಾಗಿತ್ತೇ ಎಂಬ ವಿಚಾರ ಖಚಿತವಾಗಿಲ್ಲ. ಸದ್ಯಕ್ಕೆ ತನಿಖೆ ನಡೆಯುತ್ತಿದೆ. ಚೀನಿ ಭಾಷೆಯಲ್ಲಿ ಸಂಕೇತ ಹೊಂದಿದ್ದು, ಯಾವುದೋ ಮಾಹಿತಿ ದಾಟಿಸುವ ಪ್ರಯತ್ನ ಇದಾಗಿದೆ.[ಅರುಣಾಚಲ ಪ್ರಾಂತ್ಯಗಳ ಹೆಸರು ಬದಲು: ಚೀನಾಕ್ಕೆ ಭಾರತದ ದಿಟ್ಟ ಉತ್ತರ]
ಅರುಣಾಚಲ ಪ್ರದೇಶದ ಮೇಲೆ ತನ್ನ ಪ್ರಭುತ್ವ ಸಾಧಿಸಲು ಯತ್ನಿಸುತ್ತಿರುವ ಚೀನಾ, ಬಹಳ ಹಿಂದಿನಿಂದಲೂ ಇಲ್ಲಿ ಗೂಢಚಾರ ಜಾಲವೊಂದನ್ನು ರಚಿಸಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯಿಂದ ನಡೆಯುತ್ತಿರುವ ಕುಕೃತ್ಯಗಳನ್ನು ತಡೆಯಲು ಭಾರತವು ಸೇನೆಯನ್ನು ನಿಯೋಜಿಸಿದ ಮೇಲೆ ಈ ಘಟನೆ ನಡೆದಿದೆ.
ಚೀನಾ ಗಡಿಯಲ್ಲಿ ನಡೆಸುತ್ತಿರುವ ಇಂಥ ಯಾವುದೇ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಯಾವಾಗೆಲ್ಲ ಚೀನಾ ಸೇನೆ ತಂಟೆ ಮಾಡಿದೆಯೋ ಆಗೆಲ್ಲ ತಕ್ಕ ಪ್ರತ್ಯುತ್ತರವನ್ನೇ ನೀಡಲಾಗಿದೆ. ಭಾನುವಾರ ಗೃಹ ಸಚಿವ ರಾಜ್ ನಾಥ್ ಸಿಂಗ್ ಭಾರತ-ಚೀನಾ ಗಡಿ ಪರಿಸ್ಥಿತಿಯ ಅವಲೋಕನಾ ಸಭೆಯನ್ನು ಸಿಕ್ಕಿಂನಲ್ಲಿ ನಡೆಸಿದ್ದಾರೆ.
ಚೀನಾದ ಜೊತೆಗೆ ಗಡಿ ಹೊಂದಿರುವ ಹಿಮಾಲಯದ ಐದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಚೀನಾ ಗಡಿಯುದ್ದಕ್ಕೂ ಮೂಲಸೌಕರ್ಯ ಬಲಗೊಳಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆದಿದೆ.
{promotion-urls}