ಪಿಎಫ್ ಮೇಲೆ ಟ್ಯಾಕ್ಸ್ ರದ್ದು: ನನ್ನಿಂದಲೇ ನನ್ನಿಂದಲೇ ಎಂದ ರಾಹುಲ್
ಸಂಬಳದಾರನ ಭವಿಷ್ಯದ ದುಡ್ಡಾದ 'ಭವಿಷ್ಯನಿಧಿ' ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸರಕಾರ ಈಗ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದಿರುವುದಕ್ಕೆ ನಾನೇ ಕಾರಣ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾರೆ.
ಪಿಎಫ್ ಹಣವನ್ನು ಮರಳಿ ಪಡೆಯುವ ವೇಳೆ ಅದರ ಮೇಲೆ ತೆರಿಗೆ ಹೇರುವ ನಿರ್ಧಾರವನ್ನು ಕೇಂದ್ರ ವಿತ್ತ ಸಚಿವರು ಬಜೆಟ್ ನಲ್ಲಿ ಪ್ರಕಟಿಸಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. (ಇಪಿಎಫ್ ಮೇಲಿನ ತೆರಿಗೆ ಆದೇಶ ಹಿಂದಕ್ಕೆ)
ಪಿಎಫ್ ಮರಳಿ ಪಡೆಯುವ ವೇಳೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಅರುಣ್ ಜೇಟ್ಲಿ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ, ಇದಕ್ಕೆ ನಾನು ಹಾಕಿದ್ದ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಹೇಳಿದ್ದಾರೆ.
ಪಿಎಫ್ ಮೇಲಿನ ತೆರಿಗೆಯ ನಿರ್ಧಾರದಿಂದ ಭಾರೀ ಟೀಕೆಗೆ ಒಳಗಾಗಿದ್ದ ಕೇಂದ್ರ ಸರಕಾರ, ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಈ ಸಂದರ್ಭದಲ್ಲಿಈ ವಿವಾದಕಾರಿ ಆದೇಶ ಪಕ್ಷದ ಇಮೇಜಿಗೆ ಹಾನಿತರುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ವಾಪಸ್ ಪಡೆದುಕೊಂಡಿದೆ. (ಕೇಂದ್ರ ಬಜೆಟ್ ಮಂಡನೆ ವಿವರ)
ನವದೆಹಲಿಯಲ್ಲಿ ಮಂಗಳವಾರ (ಮಾ 8) ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಮಧ್ಯಮವರ್ಗದ ಜನರ ಉಳಿತಾಯದ ಮೇಲೆ ನರೇಂದ್ರ ಮೋದಿ ಸರಕಾರ ತೆರಿಗೆ ಹೇರಲು ಮುಂದಾಗಿದ್ದು ವಿಷಾದನೀಯ ಎಂದಿದ್ದಾರೆ.
ಮಧ್ಯಮ ವರ್ಗದವರಿಗೆ ತೊಂದರೆ
ಕೇಂದ್ರ ಸರಕಾರದ ನಿರ್ಧಾರದಿಂದ ಮಧ್ಯಮ ವರ್ಗದವರಿಗೆ ತೊಂದರೆಯಾಗುತ್ತದೆ ಎಂದು ನಾನು ಸರಕಾರದ ವಿರುದ್ದ ಹೋರಾಟ ನಡೆಸಿದ್ದೆ, ಎಚ್ಚರಿಕೆಯನ್ನೂ ನೀಡಿದ್ದೆ. ಅದರ ಪ್ರತಿಫಲವೇ ಈ ಆದೇಶ ಹಿಂದಕ್ಕೆ ಪಡೆಯಲು ಕಾರಣ - ರಾಹುಲ್ ಗಾಂಧಿ.
|
ಸಂಬಳದಾರರ ಉಳಿತಾಯ
ಲೋಕಸಭೆಯಲ್ಲಿ ಸಂಬಳದಾರರ ಉಳಿತಾಯದ ಮೇಲೆ ಭಾರ ಹಾಕದಂತೆ ಸರಕಾರಕ್ಕೆ ಎಚ್ಚರಿಕೆ ನೀಡಿದ್ದೆ. ಇದೀಗ, ಸರಕಾರ ಭವಿಷ್ಯನಿಧಿ ಹಿಂದಕ್ಕೆ ಪಡೆಯುವ ಹಣದ ಮೇಲೆ ತೆರಿಗೆ ಹೇರುವ ನಿರ್ಧಾರವನ್ನು ಹಿಂದಕ್ಕೆ ಪಡೆದಿರುವುದು ನನ್ನ ಹೋರಾಟದ ಫಲ - ರಾಹುಲ್ ಗಾಂಧಿ.
ಸ್ವಚ್ಚ ಭಾರತ್ ಸೆಸ್
ಮಹತ್ವಾಕಾಂಕ್ಷಿ ಸ್ವಚ್ಚ ಭಾರತ್ ಅಭಿಯಾನಕ್ಕೆ ಪೂರಕವಾಗಲು ಸೆಸ್ ವಿಧಿಸಿದ್ದ ಕೇಂದ್ರ ಸರಕಾರ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯವಾಗಿ ಇಳಿದಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಕಡಿತವನ್ನೇನು ಮಾಡಲಿಲ್ಲ.
ಪಿಎಫ್ ಮೇಲೆ ತೆರಿಗೆ
ಕಾರ್ಮಿಕರ ಭವಿಷ್ಯ ನಿಧಿಯ ಶೇ. 60ರಷ್ಟು ಮೊತ್ತವನ್ನು ಮರಳಿ ಪಡೆಯುವುದರ ಮೇಲೆ ತೆರಿಗೆ ವಿಧಿಸಲು 2016- 17ರ ಸಾಲಿನ ಬಜೆಟ್ನಲ್ಲಿ ಉದ್ದೇಶಿಸಲಾಗಿತ್ತು.
ಮುಷ್ಕರಕ್ಕೆ ಕರೆನೀಡಿದ್ದ ಕಾರ್ಮಿಕ ಸಂಘಟನೆಗಳು
ಕೇಂದ್ರ ಸರಕಾರದ ಈ ವಿರೋಧ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಗುರುವಾರ (ಮಾ10) ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದವು.