ಪವರ್ ಸ್ಟಾರ್ ಗೆ ಮೋದಿಯಿಂದ ಭಾರಿ 'ಗಿಫ್ಟ್'?
ನವದೆಹಲಿ, ಮೇ.22: ಸೀಮಾಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಊಹೆಗೂ ನಿಲುಕದಂತೆ ನೆಲಕಚ್ಚಿದೆ. ಇದಕ್ಕೆ ಕಾರಣವಾಗಿದ್ದು, ಮೋದಿ ಅವರು ತೆಲುಗುದೇಶಂ ಪಕ್ಷ ಹಾಗೂ ಜನಸೇನಾ ಪಕ್ಷದ ಬೆಂಬಲಕ್ಕೆ ನಿಂತಿದ್ದು ಎಂಬುದನ್ನು ಮರೆಯುವಂತಿಲ್ಲ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೋದಿ ಅವರು ಸೀಮಾಂಧ್ರ ಭಾಗಕ್ಕೆ ಅದರಲ್ಲೂ ಜನಸೇನಾ ಪಕ್ಷದ ಮುಖ್ಯಸ್ಥ ನಟ, ಪವನ್ ಕಲ್ಯಾಣ್ ಅವರಿಗೆ ಭಾರಿ ಗಿಫ್ಟ್ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪವನ್ ಕಲ್ಯಾಣ್ ಸಂಪೂರ್ಣ ಬೆಂಬಲ ಘೋಷಿಸಿ, ದೇಶಕ್ಕೆ ಮೋದಿಯಂಥ ನಾಯಕರು ಬೇಕು. ಮೋದಿ ಪ್ರಧಾನಿಯಾಗಿದ್ದರೆ ರಾಜ್ಯಗಳ ವಿಭಜನೆ ಮಾತೇ ಇರುವುದಿಲ್ಲ ಐಕ್ಯತೆ ನಮ್ಮ ಉಸಿರಾಗಲಿ ಎಂದು ಹೇಳಿದ್ದರು.
ಮೋದಿ- ಚಂದ್ರ ಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಒಂದೇ ವೇದಿಕೆ ಹಂಚಿಕೊಂಡಿದ್ದು ಆಂಧ್ರದಲ್ಲಿ ಎನ್ಡಿಎ ವಿಜಯಕ್ಕೆ ಮುನ್ನುಡಿ ಬರೆಯಿತು. ಪವನ್ ಅವರ ಸಹಕಾರಕ್ಕೆ ತಕ್ಕ ಉಡುಗೊರೆ ನೀಡಲು ನಿರ್ಧರಿಸಿರುವ ಮೋದಿ ಅವರು ಪವನ್ ಕಲ್ಯಾಣ್ ಅವರಿಗೆ ಬಿಜೆಪಿ ಟಿಕೆಟ್ ನೀಡಿ ರಾಜ್ಯಸಭೆಗೆ ಕಳಿಸುವ ಯೋಜನೆ ಹೊಂದಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.
ತೆಲುಗಿನ ಪವರ್ ಸ್ಟಾರ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿ ಅಣ್ಣ ಚಿರಂಜೀವಿ ಅವರ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದ್ದರು. ಮೋದಿ ಅವರ ಸಲಹೆಯಂತೆ ಸೀಮಾಂಧ್ರ ಹಾಗೂ ಕರ್ನಾಟಕದ ಗಡಿಭಾಗಗಳಲ್ಲಿ ಸಂಚರಿಸಿ ಬಿಜೆಪಿ ಹಾಗೂ ತೆಲುಗುದೇಶಂ ಪಾರ್ಟಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಆದರೆ, ಹೊಸದಾಗಿ ಸ್ಥಾಪಿತವಾದ ಜನಸೇನಾ ಪಕ್ಷ ಈ ಬಾರಿ ಚುನಾವಣೆ ಎದುರಿಸುವುದಿಲ್ಲ ಎಂದಿದ್ದರು, ತಾಂತ್ರಿಕವಾಗಿ ಅದು ಸಾಧ್ಯವೂ ಇರಲಿಲ್ಲ. ಪವನ್ ಅವರು ಪಕ್ಷೇತರರಾಗಿ ಸ್ಪರ್ಧಿಸಬಹುದಿತ್ತು. ಆದರೆ, ಪವನ್ ಅವರು ನಾನು ರಾಜಕೀಯ ರಂಗಕ್ಕೆ ಇಷ್ಟು ಹತ್ತಿರವಾಗುತ್ತಿರುವುದು ಮೋದಿ ಅವರಿಗಾಗಿ ಮಾತ್ರ, ನಾನು ಸ್ಥಾನ ಮಾನ ಸಿಗಬೇಕೆಂದು ಬಯಸುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು.
ಪವನ್ ಕಲ್ಯಾಣ್ ಪ್ರಚಾರ ಆರಂಭಿಸಿದ ಮೇಲೆ ಕಾಪು ಸಮುದಾಯದ ಮತಗಳು ಟಿಡಿಪಿ ಕಡೆಗೆ ಹರಿದು ಬರಲು ಆರಂಭಿಸಿತು. ಸಮೀಕ್ಷೆಗಳ ವರದಿಗಳು ಕೂಡಾ ಮೋದಿ-ಪವನ್ ಜೋಡಿಯಿಂದ ಟಿಡಿಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು.
ಪವನ್ ಕಲ್ಯಾಣ್ ಅವರನ್ನು ಕರ್ನಾಟಕ ಅಥವಾ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಬಗ್ಗೆ ಮೋದಿ ಇಚ್ಛಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕದಿಂದ ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಕೂಡಾ ರಾಜ್ಯಸಭೆ ಪ್ರವೇಶ ಬಯಸಿದ್ದಾರೆ ಎಂಬ ಸುದ್ದಿಯೂ ಇದೆ. ಕಳೆದ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲೂ ಪವನ್ ಕಲ್ಯಾಣ್ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.