ಮೋದಿ ನವಾಜ್ ಮೈತ್ರಿಗೆ ಭಂಗ ತರಲು ಪಠಾಣ್ ಕೋಟ್ ದಾಳಿ?
ನವದೆಹಲಿ, ಜ.04: ಪಂಜಾಬಿನ ಪಠಾಣ್ ಕೋಟ್ ದಾಳಿಗೆ ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿ ಮೂಡುತ್ತಿದೆ. ಭಾರತೀಯ ವಾಯು ಸೇನೆ (ಐಎಎಫ್) ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿರುವುದರ ಹಿಂದಿನ ಕೈವಾಡ ಯಾರದ್ದು ಎಂಬುದರ ಬಗ್ಗೆ ಜೀ ನ್ಯೂಸ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ.
ಏಳು ಜನ ವೀರಯೋಧರ ಸಾವಿಗೆ ಕಾರಣವಾದ ಈ ಉಗ್ರರ ದಾಳಿಯ ಹೊಣೆಯನ್ನು ಜೈಶ್ ಏ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿದೆ. ಆದರೆ, ಜೀ ಟಿವಿ ವರದಿ ಪ್ರಕಾರ ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಹಾಗೂ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್ ಐ) ರಹಸ್ಯ ಮಾತುಕತೆಯ ಫಲವಾಗಿ ರೂಪಿತವಾದ ಸಂಚು ಪಠಾಣ್ ಕೋಟ್ ನಲ್ಲಿ ಉಗ್ರ ಸಂಘಟನೆ ಕಾರ್ಯರೂಪಕ್ಕೆ ಇಳಿಸಿದೆ ಎನ್ನಲಾಗಿದೆ. [ಪಠಾಣ್ ಕೋಟ್ ಕಾರ್ಯಾಚರಣೆ ಅಂತ್ಯ, 6 ಉಗ್ರರ ಹತ್ಯೆ]
ಮೋದಿ ಭೇಟಿ ನಂತರದ ಬೆಳವಣಿಗೆ: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಎಂದು ಭೇಟಿ ಮಾಡಿದ್ದು ಪಾಕಿಸ್ತಾನ ಆರ್ಮಿಗೆ ಇಷ್ಟವಾಗಿಲ್ಲ. ಶಾಂತಿ- ಸೌಹಾರ್ದ ಮಾತುಕತೆ ಸಹಿಸದ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಅವರು ಈ ಮೈತ್ರಿಗೆ ಭಂಗ ತರುವ ಉದ್ದೇಶದಿಂದ ಐಎಸ್ ಐಗೆ ನೆರವು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.[ಎಂಥಾ ಘೋರ ವಿಧಿ ಲಿಖಿತ,ನಿರಂಜನ್ ಸಾವಿನ ಆಘಾತ]
ರಾವಲ್ಪಿಂಡಿಯಲ್ಲಿ ಈ ದಾಳಿಯ ಸಂಚು ರೂಪಿಸಲಾಗಿದ್ದು, ಪಂಜಾಬಿನ ಪಠಾಣ್ ಕೋಟ್ ನಲ್ಲಿ ಕಾರ್ಯರೂಪಕ್ಕಿಳಿಸಲಾಗಿದೆ. ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗೂ ಭಂಗ ಉಂಟಾಗುವ ಸಾಧ್ಯತೆಯಿದೆ.
ಐಎಸ್ ಐ ನಿರ್ದೇಶನದಂತೆ ಜೈಶ್ ಎ ಮೊಹಮ್ಮದ್ ಸಂಘಟನೆ ಈ ದಾಳಿಯನ್ನು ನಡೆಸಿದೆ. ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಸೂಚಿಸಲಾಗಿತ್ತು. ಜನವರಿ 1 ರಂದು ಪಠಾಣ್ ಕೋಟ್ ನ ವಾಯುಸೇನೆ ನೆಲೆಯ ಮೇಲೆ ದಾಳಿ ನಡೆಸಲು 10ಕ್ಕೂ ಅಧಿಕ ಉಗ್ರರು ಗಡಿ ದಾಟಲು ಪಾಕಿಸ್ತಾನದ ಉನ್ನತ ಅಧಿಕಾರಿಗಳು ನೆರವಾಗಿದ್ದರು.
ಪಠಾಣ್ ಕೋಟ್ ನಲ್ಲಿ ಕಾರ್ಯಾಚಾರಣೆ ಮುಂದುವರೆದಿದ್ದು ಉಗ್ರರನ್ನು ಸದೆಬಡೆಯಲು ರಾಷ್ಟ್ರೀಯ ಭದ್ರತಾ ಪಡೆ(ಎನ್ ಎಸ್ ಜಿ) ಯೋಧರು ಪಣ ತೊಟ್ಟಿದ್ದಾರೆ. (ಒನ್ ಇಂಡಿಯಾ ಸುದ್ದಿ)