ಗಾಂಧಿ ಸ್ಮಾರಕವನ್ನು ಗೋದಾಮು ಮಾಡಿಕೊಂಡಿತೇ ಪತಂಜಲಿ ಕಂಪನಿ?
ಗುಜರಾತ್ ನಲ್ಲಿರುವ ಗಾಂಧಿ ಸ್ಮಾರಕದ ಕೆಲ ಕೊಠಡಿಗಳನ್ನು ಪತಂಜಲಿ ಕಂಪನಿಯು ತನ್ನ ಗೋದಾಮಾಗಿ ಬಳಸಿಕೊಳ್ಳುತ್ತಿದೆ ಎಂದ ಕೆಲ ವರದಿಗಳು. ಬಾಬಾ ರಾಮ್ ದೇವ್ ಅವರಿಂದ ವರದಿ ನಿರಾಕರಣೆ.
ನವದೆಹಲಿ, ಜೂನ್ 20: ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿಯು ಮಹಾತ್ಮಗಾಂಧಿಯವರ ಸ್ಮಾರಕವೊಂದನ್ನು ತನ್ನ ಗೋದಾಮನ್ನಾಗಿ ಪರಿವರ್ತಿಸಿಕೊಂಡಿರುವುದಾಗಿ ಕೆಲ ವರದಿಗಳು ಬಂದಿವೆ. ಆದರೆ, ಬಾಬಾ ರಾಮ್ ದೇವ್ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.
ಗುಜರಾತ್ ನ ಶಾಹೀಬಾಂಗ್ ನಲ್ಲಿರುವ ಓಲ್ಡ್ ಸರ್ಕೀಟ್ ಹೌಸ್ ಪ್ರಾಂತ್ಯದಲ್ಲಿ ಮಹಾತ್ಮಾಗಾಂಧಿ ಸ್ಮೃತಿ ಖಾಂಡ್ (ಸ್ಮಾರಕ) ಇದೆ. 95 ವರ್ಷಗಳ ಹಿಂದೆ ಮಹಾತ್ಮಗಾಂಧಿಯವರು ವಕೀಲರಾಗಿದ್ದಾಗ ವೇಳೆ, ಈ ಕಟ್ಟಡ ನ್ಯಾಯಾಲಯವಾಗಿತ್ತು. ಇಲ್ಲಿ ಗಾಂಧೀಜಿಯವರು ಹಲವಾರು ಕೇಸುಗಳಿಗಾಗಿ ವಾದ ಮಂಡಿಸಿದ್ದರು. ಅವರ ನಿಧನಾ ನಂತರ ಈ ಕಟ್ಟಡವನ್ನು ಮಹಾತ್ಮಾ ಗಾಂಧಿಯವರ ಸ್ಮಾರಕವಾಗಿ ಬದಲಾಯಿಸಲಾಗಿದೆ.
ಈ ಕಟ್ಟಡದಲ್ಲಿ ಒಟ್ಟು 28 ರೂಮುಗಳಿದ್ದು, ಇವುಗಳಲ್ಲಿ 12 ರೂಮುಗಳನ್ನು ಪತಂಜಲಿ ಕಂಪನಿಯು ತನ್ನ ಸರಕುಗಳನ್ನು ತುಂಬಿಡಲು ಬಳಸಿಕೊಳ್ಳುತ್ತಿದೆ ಎಂಬುದು ಕೆಲ ವರದಿಗಳ ಸಾರಾಂಶ.
ಪತಂಜಲಿ ಕಂಪನಿಯು ಹೀಗೆ ಸ್ಮಾರಕವನ್ನು ಉಪಯೋಗಿಸಿಕೊಳ್ಳುತ್ತಿರುವುದು ತೀರಾ ಇತ್ತೀಚೆಗಷ್ಟೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಅಹ್ಮದಾಬಾದ್ ಮತ್ತಿತರ ಕಡೆ ನಡೆಯುತ್ತಿರುವ ಯೋಗ ಪ್ರದರ್ಶನಗಳಲ್ಲಿ ತನ್ನ ಉತ್ಪನ್ನಗಳ ಪ್ರಚಾರ ಕಾರ್ಯ ನಡೆಸಲು ಪತಂಜಲಿ ಮುಂದಾಗಿದೆ. ಹಾಗಾಗಿ, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿಡಲು ತಾತ್ಕಾಲಿಕವಾಗಿ ಗಾಂಧಿ ಸ್ಮಾರಕದ ಕೆಲ ಕೊಠಡಿಗಳನ್ನು ಅದು ಉಪಯೋಗಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ಆದರೆ, ಈ ವರದಿಗಳನ್ನು ಬಾಬಾ ರಾಮ್ ದೇವ ತಳ್ಳಿಹಾಕಿದ್ದಾರೆ. ಸ್ಮಾರಕಗಳನ್ನು ಉಪಯೋಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ.