ಗೋವಾಗೆ ಮರಳುವ ಸುಳಿವು ನೀಡಿದರಾ ಮನೋಹರ್ ಪರಿಕ್ಕರ್?
ಪಣಜಿ, ಫೆಬ್ರವರಿ 04 : "ಕೇಂದ್ರ ಸಚಿವನಾಗಿ ದೆಹಲಿಗೆ ತೆರಳಿದ ನಂತರ ಸಾಕಷ್ಟು ತೂಕ ಕಳೆದುಕೊಂಡಿದ್ದೇನೆ. ಫಿಷ್ ಕರಿ ಅಂದ್ರೆ ನನಗೆ ತುಂಬಾ ಇಷ್ಟ. ಗೋವಾದ ಆಹಾರವನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ."
ಹೀಗೆಂದು 'ತೂಕ'ದ ಮಾತು ಆಡಿದವರು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು. ಕೇಂದ್ರದಲ್ಲಿಯೇ ಬಿಜಿಯಾಗಿರುವ ಅವರು ಗೋವಾ ರಾಜಕಾರಣಕ್ಕೆ ಮರಳುತ್ತಾರಾ ಇಲ್ಲವಾ ಎಂಬ ಮಾತು ಕೇಳಿಬರುತ್ತಲೇ ಇದೆ.[ಗೋವಾದಲ್ಲಿ ಬಿಜೆಪಿ ಬಂದ್ರೆ ಮುಖ್ಯಮಂತ್ರಿ ಯಾರು? ಪರಿಕ್ಕರ್ ನಡೆ ನಿಗೂಢ]
ಇದಕ್ಕೆ ಪುಷ್ಟಿಯೆಂಬಂತೆ ಅವರು ಆಡಿರುವ ಈ ಮಾತುಗಳು, ಗೋವಾಗೆ ಅವರು ಮರಳಬಹುದಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಜೊತೆಗೆ ಪತ್ರಕರ್ತರ ತಲೆಯಲ್ಲಿ ಹುಳಬಿಡುವ ಉದ್ದೇಶದಿಂದ 'ಗೋವಾ ಖಾದ್ಯಗಳೆಂದರೆ ನನಗೆ ತುಂಬಾ ಇಷ್ಟ' ಎಂದು ಹೇಳಿರಬಹುದಾ ಎಂಬ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ.[ಮೈಸೂರಿನ ಮದುವೆಯೊಂದರಲ್ಲಿ ಫಲತಾಂಬೂಲ ಬದಲು ಮೀನು!]
ಇದರ ಬಗ್ಗೆ ಪತ್ರಕರ್ತರು ಮತ್ತೆ ಮತ್ತೆ ಕೆದಕಿದಾಗ, "ನನಗೆ ಗೋವಾ ಖಾದ್ಯ, ಅದರಲ್ಲೂ ಮೀನಿನ ಕರಿ ಅಂದ್ರೆ ತುಂಬಾ ಇಷ್ಟ ಅಂತ ಮಾತ್ರ ಹೇಳಿದ್ದೇನೆ. ಇದನ್ನು ನೀವು ಯಾವ ರೀತಿಯಾಗಿಯೂ ಅರ್ಥೈಸಿಕೊಳ್ಳಬಹುದು" ಎಂದು ಶನಿವಾರ ಮತ ಹಾಕಿದ ನಂತರ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ ಮನೋಹರ್.
ಒಂದು ವೇಳೆ ಗೋವಾದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಮನೋಹರ್ ಪರಿಕ್ಕರ್ ಅವರು ಗೋವಾಗೆ ಮುಖ್ಯಮಂತ್ರಿಯಾಗಿ ಮರಳಬಹುದು ಎಂಬ ಸುದ್ದಿ ರೌಂಡ್ ಹೊಡೆಯುತ್ತಿದೆ. ಕೆಲ ದಿನಗಳ ಹಿಂದೆ ಗೋವಾಗೆ ಮರಳುವುದನ್ನು ನಿರಾಕರಿಸಿದ್ದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ, ತನಗೆ ಪಕ್ಷದ ನಾಯಕರು ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೇನೆ ಎಂದು ತಮ್ಮ ನಿಲುವು ಸಡಿಲಗೊಳಿಸಿದ್ದರು.